ಕೇಂದ್ರ ಬಜೆಟ್ ವಿಶ್ಲೇಷಣೆ
(ಆರ್.ಎಚ್.ನಟರಾಜ್, ಹಿರಿಯ ಪತ್ರಕರ್ತರು)
ಬಜೆಟ್ ಎನ್ನುವುದು ಕೇವಲ ಆರ್ಥಿಕ ಪತ್ರವಲ್ಲ, ಇದು ಯಾವುದೇ ದೇಶದ ಆರ್ಥಿಕತೆಯ ಹಾದಿಯನ್ನು ಬದಲಿಸುವ ಒಂದು ದಿಕ್ಸೂಚಿ.ಇಂತಹ ದಿಕ್ಸೂಚಿಯ ಬಜೆಟ್ ಗಾಗಿ ದೇಶದ ಜನತೆ ಕಾಯುತ್ತಿದ್ದರು.
ಇದಕ್ಕೆ ಪ್ರಮುಖ ಕಾರಣ ದೇಶವನ್ನು ಜಗತ್ತಿನ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಸ್ಪಷ್ಟ ಗುರಿ ಹಾಕಿಕೊಳ್ಳಲಾಗಿದೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಧ್ಯೇಯದೊಂದಿಗೆ ವಿಕಸಿತ ಭಾರತ ಕಟ್ಟುವ ಸಂಕಲ್ಪ ನಮ್ಮದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ವೇದಿಕೆಗಳಲ್ಲಿ ಘೋಷಿಸಿದ್ದರು.
ಈ ವಿಕಸಿತ ಭಾರತದ ಕನಸನ್ನು ಮುಂದಿಟ್ಟುಕೊಂಡು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ತಮ್ಮ ಒಂಭತ್ತನಯ ಬಜೆಟ್ ಮಂಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕಾ ಒಡ್ಡುತ್ತಿರುವ ಸವಾಲು, ನೆರೆಯ ಚೀನಾದ ಪೈಪೋಟಿ ತೈಲೋತ್ಪನ್ನಗಳ ಮೇಲೆ ಅತಿಯಾದ ಅವಲಂಬನೆಯಂತಹ ಅಂಶಗಳನ್ನು ಮುಂದಿಟ್ಟುಕೊಂಡು ನೋಡಿದರೆ ಈ ಬಜೆಟ್ ನಲ್ಲಿ
ಕೆಲವು ಧನಾತ್ಮಕ ಅಂಶಗಳ ಜೊತೆಗೆ ಗಂಭೀರವಾದ ಸವಾಲುಗಳು ಮತ್ತು ಮಿತಿಗಳೂ ಇವೆ.ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸತತವಾಗಿ ಬಂಡವಾಳ ಹೆಚ್ಚುತ್ತಾ ಸಾಗುತ್ತಿದೆ.
2014-15ನೇ ಬಜೆಟ್ನಲ್ಲಿ 2 ಲಕ್ಷ ಕೋಟಿ ರೂಪಾಯಿ ಇದ್ದ ಬಂಡವಾಳ ವೆಚ್ಚದ ಅಂದಾಜನ್ನು 2026-27ನೇ ಸಾಲಿನಲ್ಲಿ 12.2 ಲಕ್ಷ ಕೋಟಿ ರೂಪಾಯಿಗೆ ಏರಿಸಲಾಗಿದೆ.
ಕಳೆದ ಬಜೆಟ್ ನಲ್ಲಿ ಈ ಮೊತ್ತ 11.2 ಲಕ್ಷ ಕೋಟಿ ರೂಪಾಯಿ ಇತ್ತು. ಬಂಡವಾಳ ವೆಚ್ಚದ ನಿರಂತರ ಏರಿಕೆಯು ಮೂಲಸೌಕರ್ಯ ವಲಯಕ್ಕೆ ಒಳ್ಳೆಯ ಸುದ್ದಿ. ದೇಶದಲ್ಲಿ ಮೂಲಸೌಕರ್ಯ ಸೃಷ್ಟಿಸುವ ಯೋಜನೆಗಳು ಆ ದೇಶದ ಪ್ರಗತಿಯ ದಿಕ್ಕನ್ನು ತೋರಿಸುತ್ತದೆ 2047 ಅನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಈ ವೆಚ್ಚ ಸ್ವಾಗತಾರ್ಹ.ಆದರೆ, ಇಲ್ಲಿ
ಖಾಸಗಿ ವಲಯವು ನಿರೀಕ್ಷಿತ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿಲ್ಲ ಎಂಬ ಅಂಶ ಕಳವಳಕಾರಿ. ನಿರುದ್ಯೋಗದ ದೃಷ್ಟಿಯಿಂದ ನೋಡಿದರೆ ಈ ಬೃಹತ್ ಹೂಡಿಕೆಗಳು ತಕ್ಷಣದ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಇದಕ್ಕೆ ದೊಡ್ಡ ಕಾರಣ
ಉತ್ಪಾದನಾ ವಲಯದಲ್ಲಿ ಯಾಂತ್ರೀಕೃತ ವ್ಯವಸ್ಥೆ ಹೆಚ್ಚಾಗಿರುವುದರಿಂದ, ಕೇವಲ ರಸ್ತೆ-ಸೇತುವೆ, ಕಟ್ಟಡಗಳನ್ನು ಕಟ್ಟುವುದರಿಂದ ನಿರುದ್ಯೋಗದ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುತ್ತಿಲ್ಲ.
ಒಕ್ಕೂಟ ವ್ಯವಸ್ಥೆಯ ರಚನೆಯಲ್ಲಿ ಸಾಮಾನ್ಯವಾಗಿ ಕೇಂದ್ರ ಉದ್ಯೋಗ ಸೃಷ್ಟಿಯ ಯೋಜನೆಗಳಿಗೆ ತನ್ನ ಗಮನ ಹರಿಸಬೇಕು ಆ ಮೂಲಕ ಶಾಶ್ವತ ಆಸ್ತಿ ಸೃಷ್ಟಿಗೆ ಆದ್ಯತೆ ನೀಡಬೇಕು ಇಲ್ಲಿ ಶಾಶ್ವತ ಆಸ್ತಿ ಸೃಷ್ಟಿಗೆ ಒತ್ತು ನೀಡಲಾಗಿದೆ ಆದರೆ ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆ ಇದರಿಂದ ದೇಶದ ಜನ ಸಾಮಾನ್ಯರ ಬದುಕು ಮತ್ತಷ್ಟು ಕಠಿಣವಾಗಲಿದೆ.
ಸರ್ಕಾರವು ನೈಪುಣ್ಯ ಅಭಿವೃದ್ಧಿಗೆ ಹಣ ನೀಡಿದೆಯಾದರೂ, ಉದ್ಯೋಗ ಸೃಷ್ಟಿಸುವ ಸಣ್ಣ ಉದ್ದಿಮೆಗಳಿಗೆ ದೊಡ್ಡ ಸಹಕಾರ ನೀಡಿಲ್ಲ.ಈ ವಲಯಕ್ಕೆ ಸಿಕ್ಕಿರುವ ಬೆಂಬಲ ಸಾಲದ ರೂಪದಲ್ಲಿದೆ, ಅದು ನೇರ ಸಬ್ಸಿಡಿ ಅಲ್ಲ.ಸಾಲದ ಸುಲಭ ಲಭ್ಯತೆ ಉದ್ಯಮವನ್ನು ಉಳಿಸಬಹುದು, ಆದರೆ ಬೆಳೆಸಲು ಮಾರುಕಟ್ಟೆಯಲ್ಲಿ ಬೇಡಿಕೆ ಇರಬೇಕು. ಜನಸಾಮಾನ್ಯರ ಕೈಯಲ್ಲಿ ಹಣವಿಲ್ಲದಿದ್ದರೆ, ಕಂಪನಿಗಳು ಉತ್ಪಾದಿಸುವ ವಸ್ತುಗಳನ್ನು ಕೊಳ್ಳುವವರು ಯಾರು? ಎಂಬ ಪ್ರಶ್ನೆ ಮೂಡಿದೆ ಪರಿಸರ ಸಮತೋಲನಕ್ಕೆ ಈ ಬಜೆಟ್ ನಲ್ಲಿ ಒತ್ತು ನೀಡುವ ಕೆಲಸ ಮಾಡಲಾಗಿದೆ ಭಾರತವನ್ನು ಹಸಿರು ಹೈಡ್ರೋಜನ್ ಹಬ್ ಮಾಡಲು 20, ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.ತಂತ್ರಜ್ಞಾನದ ದೃಷ್ಟಿಯಿಂದ ಇದು ಅದ್ಭುತ. ಆದರೆ, ಇದು ತಕ್ಷಣದ ಫಲ ನೀಡುವ ಯೋಜನೆಯಲ್ಲ. ಯಾಕೆಂದರೆ ತೈಲೋತ್ಪನ್ನಗಳ ಮೇಲಿನ ಅತಿಯಾದ ತೆರಿಗೆಯನ್ನು ಇಳಿಸದೆ ಹಸಿರು ಇಂಧನದ ಬಗ್ಗೆ ಮಾತನಾಡುವುದು ಸಾಮಾನ್ಯ ಜನರ ದೈನಂದಿನ ಸಾರಿಗೆ ವೆಚ್ಚಕ್ಕೆ ಯಾವುದೇ ಪರಿಹಾರ ನೀಡುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಗಮನಾರ್ಹ ರೀತಿಯಲ್ಲಿ ಕಡಿಮೆ ಇದ್ದರೂ ಕೂಡ ದೇಶದಲ್ಲಿ ಅತಿಯಾದ ತೆರಿಗೆ ಪರಿಣಾಮ ಪೆಟ್ರೋಲ್ ಡೀಸೆಲ್ ದುಬಾರಿಯಾಗಿದೆ.
ಕೃಷಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದರೂ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿರ್ದಿಷ್ಟ ನೀತಿಗಳು ಇಲ್ಲಿ ಮಸುಕಾಗಿವೆ.ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು ಕಡಿತಗೊಳಿಸಿರುವುದು ರೈತರಿಗೆ ಕೃಷಿ ವೆಚ್ಚ ಹೆಚ್ಚಾಗುವಂತೆ ಮಾಡಬಹುದು.ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಸ್ವಾಗತಾರ್ಹ, ಆದರೆ ತಳಮಟ್ಟದ ರೈತರಿಗೆ ಇದರ ತಾಂತ್ರಿಕ ಜ್ಞಾನ ತಲುಪುವುದು ಎಷ್ಟು ಸಾಧ್ಯ ಎಂಬ ಪ್ರಶ್ನೆ ಇದೆ.
ಭಾರತದ ಶೇ. 50 ಕ್ಕಿಂತ ಹೆಚ್ಚು ಜನಸಂಖ್ಯೆ ಕೃಷಿಯನ್ನೇ ನಂಬಿದೆ. ಆದರೆ ಬಜೆಟ್ ಹಂಚಿಕೆಯಲ್ಲಿ ಕೃಷಿ ವಲಯವು ಮೂಲಸೌಕರ್ಯದಷ್ಟು ಪ್ರಾಮುಖ್ಯತೆ ಪಡೆದಿಲ್ಲ.ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡ್ರೋನ್ ಬಳಕೆಗೆ ಒತ್ತು ನೀಡಲಾಗಿದೆ.
ಹೊಲದಲ್ಲಿ ನೀರಿಲ್ಲದಿದ್ದಾಗ ಅಥವಾ ಬೆಳೆಗೆ ಬೆಲೆ ಸಿಗದಿದ್ದಾಗ ‘ಡಿಜಿಟಲ್ ಕೃಷಿ’ ಏನು ಮಾಡಬಲ್ಲದು? ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಗ್ಯಾರಂಟಿ ನೀಡುವ ಬಗ್ಗೆ ಬಜೆಟ್ ಮೌನವಾಗಿದ್ದು,ದ್ರೋಣ್ ಮತ್ತು ಎ ಐ ಬಳಕೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ.
ಈ ಬಜೆಟ್ ಬಂಡವಾಳಶಾಹಿ ಸ್ನೇಹಿಮತ್ತು ದೀರ್ಘಾವಧಿ ಹೂಡಿಕೆಆಧಾರಿತವಾಗಿದೆ. ಇದು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಬೇಕಾದ ವೇಗವರ್ಧಕಗಳನ್ನು ಹೊಂದಿದೆ. ಆದರೆ, ಈ ವೇಗದಲ್ಲಿ ಸಾಮಾನ್ಯ ಪ್ರಜೆ ಹಿಂದಕ್ಕೆ ಉಳಿಯುತ್ತಿದ್ದಾನೆಯೇ ಎಂಬ ವಿಶ್ಲೇಷಣೆ ನಡೆಯಬೇಕಿದೆ. ಜಿಡಿಪಿ ಅಂಕಿ ಅಂಶಗಳಿಗಿಂತ, ಜನರ ‘ವಾಸ್ತವಿಕ ಆದಾಯ ಹೆಚ್ಚಾದಾಗ ಮಾತ್ರ ಈ ಬಜೆಟ್ ಯಶಸ್ವಿ ಎನ್ನಿಸಿಕೊಳ್ಳುತ್ತದೆ.
ಬಡವರು, ಹಿಂದುಳಿದವರ ಏಳಿಗೆಗಾಗಿ ಮೂರು ಕರ್ತವ್ಯಗಳನ್ನು ನಿಗದಿಪಡಿಸಿಕೊಳ್ಳಲಾಗಿದೆ ಎಂದು ನಿರ್ಮಲಾ ಅವರು ಬಜೆಟ್ ಭಾಷಣದ ಆರಂಭದಲ್ಲಿಯೇ ಹೇಳಿದ್ದಾರೆ. ಈ ಕರ್ತವ್ಯಗಳೆಂದರೆ, ಉತ್ಪಾದಕತೆ, ಸ್ಪರ್ಧಾತ್ಮಕತೆ, ಜಾಗತಿಕ ಸ್ಥಿತ್ಯಂತರಗಳನ್ನು ತಾಳಿಕೊಳ್ಳಬಲ್ಲ ಸುಸ್ಥಿರ ಆರ್ಥಿಕ ಪ್ರಗತಿ ಎಂದು ಅವರು ಹೇಳಿದ್ದಾರೆ. ಜನರ ಸಾಮರ್ಥ್ಯ ಹೆಚ್ಚಿಸಿ ಅವರ ಆಶೋತ್ತರಗಳು ಈಡೇರುವಂತೆ ಮಾಡುವುದು ಎರಡನೇ ಕರ್ತವ್ಯ ಎಂದಿದ್ದಾರೆ. ಪ್ರತಿ ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯಕ್ಕೂ ಸಂಪನ್ಮೂಲ, ಸೌಲಭ್ಯ ಮತ್ತು ಅವಕಾಶಗಳು ಲಭ್ಯವಾಗಿ ಎಲ್ಲರ ಜೊತೆಗೆ ಎಲ್ಲರ ವಿಕಾಸ ಎಂಬುದು ಮೂರನೇ ಕರ್ತವ್ಯ ಎಂದಿದ್ದಾರೆ.
ಸಂಗ್ರಹಗೊಳ್ಳುವ ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಕೇಂದ್ರ ಸರ್ಕಾರವೇ ಉಳಿಸಿಕೊಳ್ಳುವ ಮನೋಭಾವ ಈ ಬಾರಿಯೂ ಮುಂದುವರಿದಿದೆ. ಜಿಎಸ್ಟಿ ಜಾರಿಯಿಂದ ರಾಜ್ಯಗಳ ಆದಾಯದಲ್ಲಿನ ಸಂಭಾವ್ಯ ನಷ್ಟ ತಪ್ಪಿಸಲು ಕೇಂದ್ರ ಸರ್ಕಾರ ಪರಿಚಯಿಸಿದ್ದ ವಿಶೇಷ ಪರಿಹಾರ ಯೋಜನೆಯು 2022ರಲ್ಲಿ ಕೊನೆಗೊಂಡಿದೆ. ಇದರಿಂದ ರಾಜ್ಯಗಳ ಮೇಲೆ ಉಂಟಾಗುತ್ತಿರುವ ಆರ್ಥಿಕ ಒತ್ತಡವನ್ನು ಪರಿಹರಿಸಲು ಬಜೆಟ್ ಯಾವುದೇ ಪರಿಹಾರ ಸೂಚಿಸಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಶೇ 40 ಅಥವಾ ಇನ್ನೂ ಹೆಚ್ಚು ಮೊತ್ತವನ್ನು ರಾಜ್ಯಗಳ ಮೇಲೆ ಹೇರಿರುವುದರಿಂದ, ರಾಜ್ಯಗಳ ಖರ್ಚು ಮಾಡುವ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಕರ್ನಾಟಕದ ದೃಷ್ಟಿಯಿಂದ ಹೇಳುವುದಾದರೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ಕಳೆದ ಬಜೆಟ್ನಲ್ಲಿ ಘೋಷಿಸಲಾಗಿದ್ದ 5,300 ರೂಪಾಯಿ ಕೋಟಿ ಅನುದಾನದ ಬಿಡುಗಡೆ ಪ್ರಕ್ರಿಯೆಗೆ ಈ ಬಜೆಟ್ನಲ್ಲಿ ಹೆಚ್ಚಿನ ವೇಗ ನೀಡಲಾಗಿದೆ. ಇದು ಮಧ್ಯ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ವರದಾನವಾಗಲಿದೆ.
ಕರ್ನಾಟಕವು ಈಗಾಗಲೇ ಐಟಿ ಹಬ್ ಆಗಿದ್ದು, ರಾಜ್ಯವನ್ನು ‘ಗ್ಲೋಬಲ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಹಬ್’ ಆಗಿ ರೂಪಿಸಲು ವಿಶೇಷ ಪ್ರೋತ್ಸಾಹಧನ ಘೋಷಿಸಲಾಗಿದೆ.
ಕರ್ನಾಟಕದ ಮಲೆನಾಡು ಭಾಗದ ಪ್ರಮುಖ ಬೆಳೆಗಳಾದ ಕಾಫಿ ಮತ್ತು ಅಡಿಕೆ ರಫ್ತು ಉತ್ತೇಜಿಸಲು ಮತ್ತು ರೋಗ ನಿಯಂತ್ರಣಕ್ಕೆ ಸಂಶೋಧನಾ ಕೇಂದ್ರಗಳಿಗೆ ಹೆಚ್ಚಿನ ಧನಸಹಾಯ ನೀಡಲಾಗಿದೆ.
ರಾಜ್ಯಕ್ಕೆ ಸಿಗುವ ಕೇಂದ್ರ ತೆರಿಗೆಯ ಪಾಲಿನಲ್ಲಿ ಶೇಕಡಾ 10 ರಷ್ಟು ಏರಿಕೆಯಾಗಿದೆ.
ಸೆಸ್ ಮತ್ತು ಸರ್ಚಾರ್ಜ್ಗಳ ಮೂಲಕ ಕೇಂದ್ರವು ಹೆಚ್ಚಿನ ಹಣ ಇಟ್ಟುಕೊಳ್ಳುತ್ತಿದೆ ಎಂಬ ದೂರು ಇದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಏಂಜೆಲ್ ಟ್ಯಾಕ್ಸ್ ರದ್ದತಿಯಿಂದ ಬೆಂಗಳೂರಿನ ಸ್ಟಾರ್ಟ್ಅಪ್ಗಳಿಗೆ ದೊಡ್ಡ ಲಾಭ.
ಬೆಂಗಳೂರಿನ ಮೆಟ್ರೋಗೆ ಹಣ ನೀಡಿದೆಯಾದರೂ, ನಗರದ ಒಳಚರಂಡಿ ಮತ್ತು ಅನಿರೀಕ್ಷಿತ ಪ್ರವಾಹ ತಡೆಯಲು ‘ನಗರ ಪುನರುಜ್ಜೀವನ’ಕ್ಕಾಗಿ ವಿಶೇಷ ಪ್ಯಾಕೇಜ್ ನೀಡಿಲ್ಲ.
ಮೂಲಸೌಕರ್ಯಕ್ಕೆ ಹಣ ಸಿಕ್ಕಿದೆಯಾದರೂ, ರಾಜ್ಯದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಪೂರಕವಾದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ.ಎಸ್ಸಿ/ಎಸ್ಟಿ ಉಪಯೋಜನೆಗಳಿಗೆ ನೇರ ಅನುದಾನದ ಕೊರತೆ ಎದ್ದು ಕಾಣುತ್ತಿದೆ.
ಕೇಂದ್ರದಿಂದ ಬರುವ ಪಾಲಿನ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಐಟಿ ವಲಯದ ಮೇಲೆ ಹೆಚ್ಚಿನ ಸೆಸ್ ಅಥವಾ ತೆರಿಗೆ ಹೇರುವ ಅಪಾಯವಿದೆ.
ಕೇಂದ್ರವು ‘ವಿಕಸಿತ ಭಾರತ’ದ ಗುರಿ ಹೊಂದಿದೆ, ಆದರೆ ಕರ್ನಾಟಕದಂತಹ ಅಭಿವೃದ್ಧಿ ಶೀಲ ರಾಜ್ಯಗಳಿಗೆ ಸರಿಯಾಗಿ ಪೂರೈಕೆಯಾಗದಿದ್ದರೆ ಒಟ್ಟಾರೆ ದೇಶದ ಬೆಳವಣಿಗೆ ಕುಂಠಿತವಾಗಬಹುದು.
ಕೇಂದ್ರದ ಯೋಜನೆಗಳು ರಾಜ್ಯಕ್ಕೆ ಬಂದರೂ, ರಾಜ್ಯದ ಸ್ವಾಯತ್ತ ಆರ್ಥಿಕ ಶಕ್ತಿಯನ್ನು ಕುಂದಿಸುವ ಲಕ್ಷಣಗಳು ಇದರಲ್ಲಿ ಎದ್ದು ಕಾಣುತ್ತಿವೆ.
ಕರ್ನಾಟಕವು ದೇಶದ ಎರಡನೇ ಅತಿದೊಡ್ಡ ತೆರಿಗೆ ಪಾವತಿಸುವ ರಾಜ್ಯವಾಗಿರುವುದರಿಂದ, ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಪಾಲನ್ನು ಪಡೆಯಲು ಹೋರಾಟ ನಡೆಸುತ್ತಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನಿಂದ ರಾಜ್ಯದ ತೆರಿಗೆ ಪಾಲು 4.71% ರಿಂದ 3.64% ಕ್ಕೆ ಇಳಿಕೆಯಾಗಿದೆ. ಇದನ್ನು ಮತ್ತೆ ಕನಿಷ್ಠ 4.71% ಕ್ಕೆ ಹೆಚ್ಚಿಸಬೇಕು ಎಂಬುದು ರಾಜ್ಯದ ಪ್ರಬಲ ಬೇಡಿಕೆ.
ಕೇಂದ್ರವು ಸಂಗ್ರಹಿಸುವ ಸೆಸ್ ಮತ್ತು ಸರ್ಚಾರ್ಜ್ಗಳಲ್ಲಿ ರಾಜ್ಯಗಳಿಗೆ ಸಿಗಬೇಕಾದ ನ್ಯಾಯಯುತ ಪಾಲು ಸಿಗುತ್ತಿಲ್ಲ. ಹೀಗಾಗಿ ಇವುಗಳ ಮೇಲೆ 5% ಮಿತಿ ಹೇರಬೇಕು ಎಂದು ರಾಜ್ಯ ಒತ್ತಾಯಿಸಿತಾದರೂ ಅದಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ
ಪ್ರಮುಖವಾಗಿ ಹಣಕಾಸು ಆಯೋಗ ಸಂಪನ್ಮೂಲ ಹಂಚಿಕೆಗೆ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ ಅದರ ಪ್ರಕಾರ ಸಂಪನ್ಮೂಲ ಹಂಚಿಕೆ ಎನ್ನುವುದು ಜನಸಂಖ್ಯೆಯನ್ನು ಆಧರಿಸಿ ಮಾಡಬೇಕಾಗುತ್ತದೆ ಪ್ರತಿ ರಾಜ್ಯ ತನ್ನಲ್ಲಿರುವ ಜನರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ನೆರವು ನೀಡುವುದು ಈ ಹಂಚಿಕೆಯ ಉದ್ದೇಶವಾಗಿದೆ. ಹೀಗಾಗಿ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶ ಮಧ್ಯಪ್ರದೇಶ ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಕೇಂದ್ರ ಸರ್ಕಾರದಿಂದ ದೊಡ್ಡ ಪಾಲನ್ನು ಪಡೆದುಕೊಳ್ಳುತ್ತಿವೆ ಆದರೆ ಇದಕ್ಕೆ ಪ್ರತಿಯಾಗಿ ಆ ರಾಜ್ಯಗಳಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತೆರಿಗೆ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ.
ದೇಶಕ್ಕೆ ಹೆಚ್ಚಿನ ತೆರಿಗೆ ನೀಡುತ್ತಿರುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಹಣಕಾಸು ಆಯೋಗದ ಈ ನಿಯಮಾವಳಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ ಯಾವುದೇ ರಾಜ್ಯ ಸರ್ಕಾರ ತಾನು ಸಂಗ್ರಹಿಸುವ ತೆರಿಗೆಯಲ್ಲಿ ಇಂತಿಷ್ಟು ಪಾಲು ನೀಡುವುದು ಕಡ್ಡಾಯವಾಗಬೇಕು. ದುಡಿಮೆಗೆ ತಕ್ಕ ಪ್ರತಿಫಲ ಸಿಗಬೇಕು ಎನ್ನುವುದು ಕರ್ನಾಟಕದ ವಾದ.
ಕೇಂದ್ರ ಸರ್ಕಾರ ಆ ರೂಪಿಸಿದ ಜನಸಂಖ್ಯೆ ನಿಯಂತ್ರಣ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರಾಜ್ಯಗಳಿಗೆ ಬೆಂಬಲ ಸಿಗಬೇಕೆ ಹೊರತು ದಂಡನೆ ಅಲ್ಲ ಈಗ ಹಣಕಾಸು ಆಯೋಗ ಮಾಡಿರುವ ಶಿಫಾರಸು ದಂಡನೆಯ ರೀತಿಯಲ್ಲಿ ಇದೆ ಹೀಗಾಗಿ ಈ ನಿಯಮಾವಳಿಗಳನ್ನು ಬದಲಾಯಿಸಿ ಕೇಂದ್ರ ಸರ್ಕಾರದ ನೀತಿಗಳನ್ನು ಜಾರಿಗೊಳಿಸಿದ ಸರ್ಕಾರಗಳಿಗೆ ಬೋನಸ್ ನೀಡಬೇಕು ಹಾಗೆಯೇ ದುಡಿಮೆಗೆ ತಕ್ಕ ರೀತಿಯಲ್ಲಿ ಪ್ರತಿಫಲ ಸಿಗಬೇಕು ಅದರ ಅರ್ಥ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ನೀಡುವ ರಾಜ್ಯಗಳಿಗೆ ಹೆಚ್ಚಿನ ಪಾಲು ದೊರಕಬೇಕು ಎನ್ನುವುದು ವಾದವಾಗಿದೆ.
ಆದರೆ ಕೇಂದ್ರ ಸರ್ಕಾರ ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತೆಗೆದುಕೊಂಡು ಹೋಗುವ ಮೂಲಕ ಇಡೀ ದೇಶ ವಿಕಾಸಿತವಾಗಬೇಕು ಎನ್ನುವುದು ಇದರ ವಾದ.
ಕೇಂದ್ರ ತೆರಿಗೆಯಿಂದ ರಾಜ್ಯಕ್ಕೆ ಬರುವ ಪಾಲಿನಲ್ಲಿ ಸುಮಾರು 8-10% ಏರಿಕೆಯಾಗಿದೆಯಾದರೂ ಅದು ಸಮಾಧಾನಕರವಲ್ಲ. ಜಿಎಸ್ಟಿ ಸುಧಾರಣೆಯಿಂದ ರಾಜ್ಯಕ್ಕೆ ಸಿಗಬೇಕಾದ ಪಾಲಿನಲ್ಲಿ ದೊಡ್ಡ ಕೊರತೆ ಉಂಟಾಗಿದೆ ಜೊತೆಗೆ ವಿಬಿಜಿ ರಾಮ್ ಜಿ ಯೋಜನೆ ಮತ್ತು ಆರೋಗ್ಯ ಸುಧಾರಣೆ ಯೋಜನೆಗಳಿಗೆ ರಾಜ್ಯದ ಪಾಲಿನ ಹಣವನ್ನು ದೊಡ್ಡ ಪ್ರಮಾಣದಲ್ಲಿ ತೆಗೆದಿರಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಹೀಗಾಗಿ ಇದು ರಾಜ್ಯದ ಆರ್ಥಿಕ ಶಕ್ತಿ ಮತ್ತು ಬಜೆಟ್ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ
ಕೋವಿಡ್ ನಂತರದ ಭಾರತದ ಆರ್ಥಿಕತೆಯು ‘ಕೆ-ಆಕಾರದಲ್ಲಿ’ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಾರೆ. ಇದರರ್ಥ:ಕಾರ್ಪೊರೇಟ್ ವಲಯ, ಐಟಿ ಮತ್ತು ದೊಡ್ಡ ಉದ್ದಿಮೆದಾರರು ವೇಗವಾಗಿ ಲಾಭ ಗಳಿಸುತ್ತಿದ್ದಾರೆ. ದಿನಗೂಲಿ ನೌಕರರು, ಸಣ್ಣ ವ್ಯಾಪಾರಿಗಳು ಮತ್ತು ಕೃಷಿ ಕಾರ್ಮಿಕರ ಆದಾಯ ಕುಸಿಯುತ್ತಿದೆ ಅಥವಾ ಸ್ಥಬ್ದವಾಗಿದೆ.
ಸರ್ಕಾರವು ದೊಡ್ಡ ಕಂಪನಿಗಳಿಗೆ ಉತ್ತೇಜನ ನೀಡಲು ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದೆ. ಜಿಎಸ್ಟಿ ಅಡಿ ಸಂಗ್ರಹವಾಗುವ ಒಟ್ಟು ತೆರಿಗೆಯಲ್ಲಿ 60% ಕ್ಕಿಂತ ಹೆಚ್ಚು ಭಾಗವು ಜನಸಂಖ್ಯೆಯ ಕೆಳಮಟ್ಟದ 50% ಜನ ವರ್ಗವಾದ ಬಡ ಮತ್ತು ಮಧ್ಯಮ ವರ್ಗ ರಿಂದ ಬರುತ್ತದೆ ಎಂದು ಅಂದರೆ, ಒಬ್ಬ ಬಡವ ಮತ್ತು ಒಬ್ಬ ಶ್ರೀಮಂತ ಇಬ್ಬರೂ ತಲಾ ಒಂದೊಂದು ಲೀಟರ್ ಪೆಟ್ರೋಲ್ ಅಥವಾ ಒಂದು ಸೋಪಿಗೆ ಸಮಾನವಾದ ತೆರಿಗೆ ಕಟ್ಟುತ್ತಾರೆ.
ಒಟ್ಟಾರೆಯಾಗಿ ಈ ಬಜೆಟ್ ಈ ಬಜೆಟ್ ದೀರ್ಘಾವಧಿಯ ಪರಿಹಾರಗಳನ್ನು ಒಳಗೊಂಡಿದೆಯೇ ಹೊರತು ವಾಸ್ತವತೆಗೆ ದೂರವಾಗಿದೆ ಇಲ್ಲಿನ ಘೋಷಣೆಗಳು ಕೇವಲ ತಾತ್ಕಾಲಿಕ ಪರಿಹಾರಗಳೇ ಹೊರತು, ಖಾಯಂ ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ
ಇಂಟರ್ನ್ಶಿಪ್ ಯೋಜನೆಗಳು ಕೇವಲ ತಾತ್ಕಾಲಿಕ ಪರಿಹಾರಗಳೇ ಹೊರತು, ಖಾಯಂ ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ ಮತ್ತು ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ಕುಂಠಿತವಾಗಿದೆ
ದೇಶದ ಜಿಡಿಪಿ ಬೆಳೆಯಬಹುದು, ಆದರೆ ಆ ಬೆಳವಣಿಗೆಯ ಲಾಭ ಪ್ರತಿಯೊಬ್ಬ ಭಾರತೀಯನ ಕೈ ಸೇರುತ್ತದೆಯೇ ಎಂಬುದು ಈಗಿರುವ ದೊಡ್ಡ ಪ್ರಶ್ನೆ.


2 Comments
betmgmnj online casino betmgm play betmgm Utah
Big Bass Bonanza — your fishing adventure awaits! Land Best Big Bass game scatters for instant free spin thrills.