ಬೆಂಗಳೂರು: ಲಿಂಗೈಕ್ಯ ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ನಾಯಕ, ಮಾಜಿ ಸಚಿವರಾದ ಡಾ. ಭೀಮಣ್ಣ ಖಂಡ್ರೆ ಅವರ ಕನಸಿನಂತೆ ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಲು ಬಿಡಿಎ ಅಥವಾ ಬಿಎಂಆರ್ಡಿಎ ವತಿಯಿಂದ ಅಗತ್ಯ ಜಾಗ ಮಂಜೂರು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭೀಮಣ್ಣ ಖಂಡ್ರೆ ಅವರ ‘ನುಡಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮಹತ್ವದ ಘೋಷಣೆ ಮಾಡಿದರು.
ವೀರಶೈವ ಮಹಾಸಭಾ ವತಿಯಿಂದ ಹೊರಗಡೆಯಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂಬುದು ಭೀಮಣ್ಣ ಖಂಡ್ರೆ ಅವರ ಆಸೆಯಾಗಿತ್ತು. ಈ ಕುರಿತು ಇತ್ತೀಚೆಗೆ ಸಚಿವ ಈಶ್ವರ್ ಖಂಡ್ರೆ ಅವರು ಮನವಿ ಮಾಡಿದ್ದರು. ಈ ಪವಿತ್ರ ಕಾರ್ಯಕ್ಕೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ಅಗತ್ಯ ಭೂಮಿಯನ್ನು ಶೀಘ್ರವೇ ಒದಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು. ನಾಲ್ಕು ಬಾರಿ ಶಾಸಕ ಹಾಗೂ ಎರಡು ಬಾರಿ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಭೀಮಣ್ಣ ಖಂಡ್ರೆ ಅವರ ಸರಳತೆ ಮತ್ತು ಹೋರಾಟದ ಬದುಕನ್ನು ಸ್ಮರಿಸಿದ ಅವರು, ಮನುಷ್ಯನ ಹುಟ್ಟು ಮತ್ತು ಸಾವಿನ ನಡುವೆ ನಾವು ಮಾಡುವ ಜನಸೇವೆಯೇ ಮುಖ್ಯ ಎಂದರು. ಭೀಮಣ್ಣ ಖಂಡ್ರೆ ಅವರು ಬಿಟ್ಟು ಹೋಗಿರುವ ಪರಂಪರೆ ಅವರ ಪುತ್ರರು ಹಾಗೂ ಮೊಮ್ಮಕ್ಕಳ ಮೂಲಕ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದರು.

