ಬೆಂಗಳೂರು, ಜ.10- ಕಾರಿನಲ್ಲಿ ಹೋಗುವ ಸಾಫ್ಟ್ವೇರ್ ಉದ್ಯೋಗಿಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿದ್ದ ಮೂವರು ಸುಲಿಗೆಕೋರರನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
ಹೇಮಂತ್, ಪ್ರಜ್ವಲ್, ಗೌತಮ್ ಬಂಧಿತ ಆರೋಪಿಗಳಾಗಿದ್ದು,ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಸಾಫ್ಟ್ವೇರ್ ಇಂಜಿನಿಯರ್ ಚರಣ್ ಪಾಲ್ ಸಿಂಗ್ ಕಳೆದ ಜ.7ರ ಸಂಜೆ ಸಹೋದ್ಯೋಗಿಗಳ ಜೊತೆ ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸ್ಕೂಟರ್ನಲ್ಲಿ ಬಂದ ನಾಲ್ವರು ಕಾರಿಗೆ ಅಡ್ಡ ಹಾಕಿ ನಮ್ಮ ಬೈಕ್ಗೆ ಡಿಕ್ಕಿ ಹೊಡೆದಿದ್ದೀರಿ ಹಣ ನೀಡಿ” ಎಂದು ಚರಣ್ ಪಾಲ್ ಸಿಂಗ್ ಅವರ ಬಳಿ ಬಂದಿದ್ದಾರೆ.
ಚರಣ್ ಪಾಲ್ ಸಿಂಗ್ ಅವರು ಕಾರಿನಲ್ಲೇ ಕೂತಿದ್ದು, “ನಾವು ಯಾವುದೇ ಅಪಘಾತ ಮಾಡಿಲ್ಲ” ಎಂದಿದ್ದಾರೆ. ನಂತರ ಚರಣ್ ಪಾಲ್ ಸಿಂಗ್ ಅವರು ಕಾರಿನ ಗಾಜುಗಳನ್ನು ಹಾಕಿದ್ದಾರೆ. ಅದಕ್ಕೆ ದುಷ್ಕರ್ಮಿಗಳು ಗಾಜು ಇಳಿಸುವಂತೆ ಹೇಳಿದ್ದಾರೆ. ಆದರೆ ಚರಣ್ ಪಾಲ್ ಸಿಂಗ್ ಗಾಜು ಇಳಿಸಿಲ್ಲ.
ಆಗ ದುಷ್ಕರ್ಮಿಗಳು ಕಾರಿನ ಗಾಜುನ್ನು ಹೊಡೆದು ಬೆದರಿಕೆ ಹಾಕಲು ಮುಂದಾಗಿದ್ದಾರೆ. ಆದರೂ ಕೂಡ ಚರಣ್ ಪಾಲ್ ಸಿಂಗ್ ವಾಹನದಿಂದ ಇಳಿಯದೆ ಕಾರನ್ನು ಚಾಲು ಮಾಡಿ ವೇಗವಾಗಿ ಓಡಿಸುತ್ತಾ ಹತ್ತಿರದ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆರೋಪಿಗಳು ವಾಹನವನ್ನು ಹಿಂಬಾಲಿಸಿದ್ದಾರೆ. ಇಡೀ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಪೊಲೀಸ್ ಠಾಣೆಯಲ್ಲಿ ಚರಣ್ ಪಾಲ್ ಸಿಂಗ್ ದೂರು ನೀಡಿದ್ದಾರೆ. ಬಳಿಕ ಪೊಲೀಸರ ಪರಿಶೀಲಿಸಿದಾಗ ಚರಣ್ ಪಾಲ್ ಸಿಂಗ್ ಅಪಘಾತ ಮಾಡಿಲ್ಲದಿರುವುದು ಗೊತ್ತಾಗಿ ತನಿಖೆ ನಡೆಸಿ ಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರು ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಅತ್ತಿಬೆಲೆ ರಸ್ತೆಯಿಂದ ದೊಮ್ಮಸಂದ್ರದವರೆಗಿನ ರಸ್ತೆಯಲ್ಲಿ ಬೀದಿ ದೀಪಗಳೇ ಇಲ್ಲ. ಬೀದಿ ದೀಪಗಳನ್ನು ಅಳವಡಿಸಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಎಕ್ಸ್ (ಟ್ವಿಟರ್) ಬಳಕೆದಾರರು ಮನವಿ ಮಾಡಿದ್ದಾರೆ.
ಗಂಭೀರ ಕ್ರಮ ತೆಗೆದುಕೊಳ್ಳಿ! ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಮತ್ತು ಅಮಾಯಕರಿಗೆ ಅಲ್ಲಿ ಬದುಕುವುದೇ ಕಷ್ಟ! ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.”
ಈ ಹಿಂದೆ ಬೆಂಗಳೂರಿನಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿದ್ದು, ಕೆಲವು ಬೈಕ್ ಸವಾರರು ವಿವಿಧ ರಾಜ್ಯಗಳ ನೋಂದಣಿ ಫಲಕಗಳಿರುವ ಕಾರುಗಳನ್ನು ಗುರಿಯಾಗಿಸಿಕೊಂಡು ಅಪಘಾತ ನೆಪ ಮಾಡಿ ಹಣ ಸುಲಿಗೆ ಮಾಡಿದ್ದರು.