ಬೆಂಗಳೂರು,ಫೆ.18-
ತೀರ್ಥಹಳ್ಳಿಯ (Thirthahalli, Shimoga) ಸಾಫ್ಟ್ವೇರ್ ಎಂಜಿನಿಯರ್ ಕಿರಣ್ ಶೆಟ್ಟಿ ಅವರು ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಕಾಂಬೋಡಿಯಾ (Cambodia) ದಲ್ಲಿ ಬಂಧಿಯಾಗಿರವುದು ಬೆಳಕಿಗೆ ಬಂದಿದೆ.
ಅವರನ್ನು ತವರಿಗೆ ಕರೆಸಿಕೊಳ್ಳುವುದಕ್ಕಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕಿರಣ್ ಶಿಟ್ಟಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಬಗ್ಗೆ ಆರಗ ಅವರು ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಥಾಯ್ಲೆಂಡ್ (Thailand) ನಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವುದಾಗಿ ನೇಮಕಾತಿ ಏಜೆನ್ಸಿ ಆಮಿಷ ಒಡ್ಡಿತ್ತು. ಅದರಂತೆ ಕಿರಣ್ ಶೆಟ್ಟಿ ತೆರಳಿದ್ದರು. ಸದ್ಯ ಅವರು ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ.
ಕೇಂದ್ರ ಸಚಿವರ ಜೊತೆಗೂ ಜ್ಞಾನೇಂದ್ರ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಹಾಗೂ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳೀಧರನ್ (V. Muraleedharan) ಅವರ ಕಚೇರಿ ಜೊತೆ ಸಂಪರ್ಕಿಸಿ ಬಿಡುಗಡೆ ಕುರಿತು ಅರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಜೊತೆಗೆ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೂ ಇಂಜಿನಿಯರ್ ಸುರಕ್ಷಿತ ವಾಪಸಾತಿ ಬಗ್ಗೆ ಚರ್ಚಿಸಿದ್ದಾರೆ.
ಕಿರಣ್ ಶೆಟ್ಟಿ ಅವರನ್ನು ಕರೆಸಿಕೊಳ್ಳಬೇಕೆಂದು ಅವರ ಸಹೋದರ ಪವನ್ ಶೆಟ್ಟಿ ಗೃಹ ಸಚಿವರಿಗೆ ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ವಾಪಸಾತಿಗಾಗಿ ಅವರ ಪತ್ನಿ ನಾಲ್ಕು ತಿಂಗಳ ಮಗು ಹಾಗೂ ಕುಟುಂಬದವರ ಜತೆ ತೀರ್ಥಹಳ್ಳಿಯಲ್ಲಿ ಕಾಯುತ್ತಿದ್ದಾರೆ.