ರಾಜ್ಯದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರ 75 ನೇ ಹುಟ್ಟುಹಬ್ಬದ ಅಮೃತ ಮಹೋತ್ಸವದ ಬಗ್ಗೆ ಭಾರಿ ಚರ್ಚೆಯಾಗ್ತಿದೆ. ರಾಜ್ಯಾದ್ಯಂತ ಸಿದ್ಧರಾಮಯ್ಯನವರ ಲಕ್ಷ ಲಕ್ಷ ಅಭಿಮಾನಿಗಳು ಸಿದ್ಧರಾಮೋತ್ಸವ ಆಚರಣೆಗೆ ತೆರಳ್ತಿದ್ದಾರೆ. ಇತ್ತ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿಯೂ ಸಹ ಸಿದ್ಧರಾಮೋತ್ಸವ ಆಚರಣೆಗೆ ಭರದಿಂದ ಸಿದ್ಧತೆ ನಡೆದಿದೆ. ಗ್ರಾಮದ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಸಿದ್ದರಾಮಯ್ಯನವರ 75 ವರ್ಷದ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತಿಮ್ಮಾಪೂರ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದರಾಮಯ್ಯನವರ ಭಾವ ಚಿತ್ರಗಳ ಕಟೌಟ್ ಫ್ಲೆಕ್ಸ್ ಹಾಕಿ ರಾರಾಜಿಸುವಂತೆ ಮಾಡಿದ್ದಾರೆ. ಊರ ಅಗಸಿ ಬಾಗಿಲಕ್ಕೆ ಸಿದ್ಧರಾಮಯ್ಯನವರ ದೊಡ್ಡ ಕಟೌಟ್ ಹಾಕಿ ಶೃಂಗಾರ ಮಾಡಿದ್ದಾರೆ. ಇನ್ನು ಯುವಕರು ಸಿದ್ದರಾಮಯ್ಯನವರ ಭಾವಚಿತ್ರದ ಟೀ ಶರ್ಟ್ ಹಾಕಿಕೊಂಡು ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಅಮೃತ ಮಹೋತ್ಸವದ ಪ್ರಯುಕ್ತ 1 ಕ್ವಿಂಟಲ್ ಗೋದಿ ಹುಗ್ಗಿ, 2 ಕ್ವಿಂಟಲ್ ಅನ್ನ ಸಾರು ಮಾಡಿ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಈ ಗ್ರಾಮದಲ್ಲಿ ಇಷ್ಟೆಲ್ಲ ಸಂಭ್ರಮಿಸೋದಕ್ಕೆ ಕಾರಣವೂ ಇದೆ. ಯಾಕಂದರೆ ಸಿದ್ಧರಾಮಯ್ಯನವರಿಗೂ ಹಾಗು ತಿಮ್ಮಾಪೂರ ಗ್ರಾಮಕ್ಕೆ ಅವಿನಾಭಾವ ಸಂಬಂಧವಿದೆ. ಈ ಹಿಂದೆ 1996 ರಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಚುನಾವಣೆ ಪ್ರಚಾರಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನ ಉದ್ದೇಶಿಸಿ ಭಾಷಣ ಮಾಡಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2016 ರಲ್ಲಿ ಬರಗಾಲದ ಅಧ್ಯಯನ ಕುರಿತು ಕೂಲಿ ಕಾರ್ಮಿಕರನ್ನು ಭೇಟಿ ನೀಡಿದ್ದರು. 2018 ರಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಉದ್ಘಾಟನೆ ಮಾಡಲು ಆಗಮಿಸಿದ್ದರು. ಸಿದ್ಧರಾಮಯ್ಯನವರು ಮೂರು ಬಾರಿ ಗ್ರಾಮಕ್ಕೆ ಭೇಟಿ ನೀಡಿದ ಇತಿಹಾಸ ಇದೆ ಅಂತ ಇಲ್ಲಿನ ಗ್ರಾಮಸ್ಥರು ಹೇಳ್ತಾರೆ.