ಬೆಂಗಳೂರು, ಮಾ.16- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾನವ ಕಳ್ಳಸಾಗಣೆಯ ಜಾಲ ಕಾರ್ಯ ನಿರ್ವಹಿಸುತ್ತಿರುವ ಆರೋಪ ಕೇಳಿಬಂದಿದೆ.
ಅನಧಿಕೃತ ಮದರಸಾವೊಂದರ ಮೂಲಕ ಮಾನವ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಅನಾಮಧೇಯ ಕರೆಯ ಬೆನ್ನುಹತ್ತಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿಗಳು ಸಂಪಿಗೆಹಳ್ಳಿ ಸಮೀಪದ ಮದರಸಾ ಮೇಲೆ ಮೇಲೆ ದಾಳಿ ನಡೆಸಿದರು.ಈ ವೇಳೆ ಅಲ್ಲಿ 20 ಮಂದಿ ಹೆಣ್ಣು ಮಕ್ಕಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.ಎಲ್ಲಾ 20 ಬಾಲಕಿಯರನ್ನ ರಕ್ಷಿಸಲಾಗಿದೆ ಇವರನ್ನು ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದಕ್ಷಿಣ ಭಾರತದಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಎನ್ ಸಿ ಪಿಸಿ ಆರ್ ತಿಳಿಸಿದ್ದು,ಈ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಆ ಬಾಲಕಿಯರು ಯಾರು, ಏಕೆ ಇಲ್ಲಿದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಕ್ಕಳು ಪತ್ತೆಯಾಗಿರುವ ಮದರಸಾ ಅನಧಿಕೃತ . ಯಾವುದೇ ಲೈಸೆನ್ಸ್ ಇಲ್ಲದೆ ಮದರಸಾ ನಡೆಸಲಾಗುತ್ತಿದೆ. ಅಲ್ಲಿರುವ ಬಾಲಕಿಯರಿಗೆ ಶಿಕ್ಷಣವನ್ನು ಕೊಡುತ್ತಿಲ್ಲ. ಕೇವಲ ಧಾರ್ಮಿಕ ಶಿಕ್ಷಣವನ್ನು ಕೊಡುತ್ತಿದ್ದಾರೆ. ಲೈಸೆನ್ಸ್ ಇಲ್ಲದೆ ಮದರಸಾ ನಡೆಸುತ್ತಿದ್ದಾರೆ ಎಂದು ಸಂಪಿಗೆ ಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ.
ಎನ್ಸಿಪಿಸಿಆರ್ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅನಾಥ ಮಕ್ಕಳು:
ಘಟನೆ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿರುವ ಪ್ರಿಯಾಂಕ ಕಂಗೂನ್, ಕರ್ನಾಟಕದ ಬೆಂಗಳೂರಿನಲ್ಲಿ ಅಕ್ರಮ ಅನಾಥಾಶ್ರಮದ ತಪಾಸಣೆ ವೇಳೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇಲ್ಲಿ 20 ಹುಡುಗಿಯರಿದ್ದರು, ಅವರೆಲ್ಲಾ ಅನಾಥರು. ಈ ಹುಡುಗಿಯರನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ, ಎಲ್ಲಾ ಮಕ್ಕಳನ್ನು ಕಿಟಕಿ ಅಥವಾ ಬೆಳಕಿಲ್ಲದ ಕೋಣೆಯಲ್ಲಿ ಜೈಲಿನಂತಹ ವಾತಾವರಣದಲ್ಲಿ ಇರಿಸಲಾಗಿತ್ತು. ಕೆಲವು ಹುಡುಗಿಯರು ಇಲ್ಲಿಗೆ ಬರುವ ಮೊದಲು ಶಾಲೆಗೆ ಹೋಗುತ್ತಿದ್ದರು, ಆದರೆ ಇಲ್ಲಿಗ ಬಂದ ನಂತರ ಅವರ ಅಧ್ಯಯನವನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಕಳ್ಳಸಾಗಣೆ ಕೆಲಸ:
ಮಕ್ಕಳ ಮನೆಯನ್ನು ನೋಡಿಕೊಳ್ಳುವ ಸಲ್ಮಾ ಎಂಬ ಮಹಿಳೆ ತಮ್ಮನ್ನು ಕುವೈತ್ಗೆ ಕಳುಹಿಸುತ್ತಾರೆ ಎಂದು ಬಾಲಕಿಯರು ತಿಳಿಸಿದ್ದಾರೆ. ಪ್ರಾಥಮಿಕ ಚರ್ಚೆಗಳಿಂದ, ಗಲ್ಫ್ ದೇಶಗಳಲ್ಲಿ, ಮದುವೆಯ ಹೆಸರಿನಲ್ಲಿ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ.
ತನಿಖೆಯ ವೇಳೆ ಬಾಲಕಿಯರನ್ನು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬ ಮಹಿಳೆ ಮತ್ತು ಆಕೆಯ ಬಾಸ್ ಶಮೀರ್ ಗೂಂಡಾಗಳನ್ನು ಕರೆಸಿ ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೂಂಡಾಗಳನ್ನು ನಿಯಂತ್ರಿಸಲಾಗಿದೆ. ಪೊಲೀಸರ ಸಲಹೆ ಮೇರೆಗೆ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಠಾಣೆಗೆ ಬಂದೆವು. ಎಂದು ಬರೆದುಕೊಂಡಿದ್ದಾರೆ.
ಪೊಲೀಸರ ಮಾಹಿತಿ:
ತನಿಖೆಯ ವೇಳೆ ಹೆಣ್ಣು ಮಕ್ಕಳ ವಸತಿ ಮದರಸಕ್ಕೆ ಅನುಮತಿ ಪಡೆದಿರೋದು ಬೆಳಕಿಗೆ ಬಂದಿದೆ. ಸದ್ಯ ಅಲ್ಲಿ ಯಾವುದೇ ಬೇರೆ ರೀತಿಯ ಚಟುವಟಿಕೆಗಳು ನಡೆದಿರೋ ಬಗ್ಗೆ ಮಾಹಿತಿ ಇಲ್ಲ. ಬಹುತೇಕ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಾಳೆ ಮಕ್ಕಳ ಆಯೋಗಕ್ಕೆ ಮಾಹಿತಿ ನೀಡ್ತೀವಿ. ಅವರು ಮದರಸ ಪರಿಶೀಲನೆ ಬಳಿಕ ದೂರು ಕೊಟ್ಟರೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.
