ಬೆಂಗಳೂರು,ಫೆ.18-
ರಾಮನಗರ ಜಿಲ್ಲೆಯ ಕನಕಪುರ (Kanakapura, Ramanagara) ದ ಯುವಕನೊಬ್ಬನಿಂದ ಆಸಿಡ್ ದಾಳಿ (acid attack) ಗೊಳಗಾಗಿ ಮಿಂಟೋ ಆಸ್ಪತ್ರೆ (Minto Eye Hospital) ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಯುವತಿಯ ಯೋಗಕ್ಷೇಮವನ್ನು ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ (Halappa Achar) ವಿಚಾರಿಸಿದರು.
ದಾಳಿಯಿಂದ ಆಘಾತಕ್ಕೊಳಗಾಗಿರುವ ಯುವತಿ ಹಾಗೂ ಆಕೆಯ ತಾಯಿಗೆ ಧೈರ್ಯ ತುಂಬಿದ ಸಚಿವರು, ಸರ್ಕಾರ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡುತ್ತದೆ. ಆದಷ್ಟು ಬೇಗ ಚೇತರಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ‘ಕನಕಪುರ ಪಟ್ಟಣದಲ್ಲಿ ಅಪ್ರಾಪ್ತ ಯುವತಿಯ ಮೇಲೆ ರಾಸಾಯನಿಕ ದಾಳಿ ನಡೆದಿದ್ದು, ಆಕೆಯ ಬೆನ್ನು, ಭುಜ, ಕಣ್ಣಿಗೆ ಹಾನಿಯಾಗಿದೆ. ಇಂತಹವರ ಮೇಲೆ ಸರ್ಕಾರ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಕನಕಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಈಗಾಗಲೇ ಚರ್ಚಿಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ’ ಎಂದರು.
‘ಹುಚ್ಚು ಕ್ರಿಮಿಗಳು ಇಂತಹ ದುಷ್ಕೃತ್ಯ ಎಸಗಿದ್ದು, ಇಂತಹ ಘಟನೆಗಳು ಮರುಕಳಿಸಬಾರದು. ಘಟನೆ ಬಗ್ಗೆ ಇಂದು ಬೆಳಗ್ಗೆ ತಮಗೆ ಮಾಹಿತಿ ತಿಳಿಯುತ್ತಿದ್ದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸರ್ಕಾರದ ಪರವಾಗಿ ಸಾಂತ್ವನ ಹೇಳಿದ್ದೇನೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕಾರ್ನಿಯಾ ತಜ್ಞರು (Cornea Specialist) ಪರಿಶೀಲಿಸಲಿದ್ದಾರೆ. ತಜ್ಞ ವೈದ್ಯರ ಚಿಕಿತ್ಸೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ನೆರವಾಗಲಿದೆ’ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.


1 Comment
betmgm Nevada bet mgm grand bet mgm free bets