ಬೆಂಗಳೂರು, ಮೇ. 22.- ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಶೇಕಡ 40ರಷ್ಟು ಕಮಿಷನ್ ಆರೋಪ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್ ಪಕ್ಷ ಇದೀಗ, ತನ್ನ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅವುಗಳ ಬಗ್ಗೆ ತನಿಖೆಗೆ ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತಂತೆ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದ್ದು ಬಿಜೆಪಿ ಸರ್ಕಾರ ತಮ್ಮ ಕೊನೆಯ ಅವಧಿಯಲ್ಲಿ ಅಂತಿಮಗೊಳಿಸಿದ ವಿವಿಧ ಕಾಮಗಾರಿಗಳ ಟೆಂಡರ್ ಮತ್ತು ಕಾರ್ಯಾದೇಶ ಹಾಗೂ ಬಿಲ್ ಪಾವತಿ ತಡೆಹಿಡಿಯಲು ತೀರ್ಮಾನಿಸಿದ್ದಾರೆ.
ಬಿಜೆಪಿ ಸರ್ಕಾರ ತಮ್ಮ ಆಡಳಿತ ಅವಧಿಯ ಕೊನೆಯಲ್ಲಿ ಆತುರ ಆತುರವಾಗಿ ಕೆಲವು ಕಾಮಗಾರಿಗಳಿಗೆ ಟೆಂಡರ್ ಕರೆದು ಅವೈಜ್ಞಾನಿಕ ರೀತಿಯಲ್ಲಿ ಅವುಗಳನ್ನು ಅಂತಿಮಗೊಳಿಸಿ ಕಾರ್ಯ ಆದೇಶ ನೀಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಮುಖ್ಯಮಂತ್ರಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಈ ಕುರಿತಂತೆ ಆದೇಶ ಹೊರ ಬಿದ್ದು ಸರ್ಕಾರದ ಎಲ್ಲಾ ನಿಗಮ ಮತ್ತು ಇಲಾಖೆಗಳಲ್ಲಿ ಪೂರ್ಣಗೊಳಿಸಲಾಗಿರುವ ಕಾಮಗಾರಿಗಳಿಗೆ ಬಿಲ್ ಪಾವತಿಸಬಾರದು ಕಾಮಗಾರಿ ಆರಂಭಗೊಂಡಿಲ್ಲದೆ ಹೋದರೆ ಅವುಗಳನ್ನು ಆರಂಭಿಸಬಾರದು ಎಂದು ಹೇಳಿದೆ.
ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮಂಡಳಿ ರಸ್ತೆ ಸಾರಿಗೆ ಅಭಿವೃದ್ಧಿ ಮಂಡಳಿ ವಿವಿಧ ನೀರಾವರಿ ನಿಗಮಗಳ ವತಿಯಿಂದ ಕೈಗೊಂಡಿರುವ ಎಲ್ಲ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹಿರಿಯ ಸಚಿವ ಎಂ ಬಿ ಪಾಟೀಲ್ ಅವರಿಗೆ ಸೂಚಿಸಲಾಗಿದೆ.
ಈಗಾಗಲೇ ಎಂಬಿ ಪಾಟೀಲ್ ಅವರು ಈ ಎಲ್ಲ ಇಲಾಖೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ,ಬಾಕಿ ಇರುವ ಬಿಲ್ ಗಳು, ನೀಡಿರುವ ಕಾರ್ಯ ಆದೇಶ, ಕಾಮಗಾರಿ ಆರಂಭಿಸಲು ಸಿದ್ದವಿರುವ ಯೋಜನೆಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ವರದಿಗಳನ್ನು ಪರಿಶೀಲಿಸಿದ ನಂತರ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾದರೆ ಅವುಗಳ ಬಗ್ಗೆ ಉನ್ನತ ತನಿಗೆ ಆದೇಶಿಸಲು ತೀರ್ಮಾನಿಸಿದ್ದು ಅಲ್ಲಿಯವರೆಗೆ ಈ ಕಾಮಗಾರಿಗಳಿಗೆ ಯಾವುದೇ ಅನುಮೋದನೆ ಮತ್ತು ಹಣ ಬಿಡುಗಡೆ ಮಾಡದಂತೆ ಕಟ್ಟುನಿನ ಆದೇಶ ನೀಡಲಾಗಿದೆ.