ಚಿತ್ರದುರ್ಗ, Aug 30 -ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳದ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಬಂಧನದ ಭೀತಿಯಲ್ಲಿರುವ ಮುರುಘಾ ಮಠದ ಶ್ರೀಗಳಿಗೆ ಮತ್ತೊಂದು ಕಂಟಕ ಎದುರಾಗಿದೆ. ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ಒಬ್ಬರಲ್ಲಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಆ. 28ರಂದು ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆ ಶ್ರೀಗಳ ವಿರುದ್ದ ದೌರ್ಜನ್ಯ ತಡೆ (ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ.
ಈ ನಡುವೆ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ವಿರುದ್ಧ ಚಿತ್ರದುರ್ಗ ಬಾಲಕಿಯರ ಬಾಲಮಂದಿರ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಮಕ್ಕಳ ಪರವಾಗಿ ಹೋರಾಟ ನಡೆಸುತ್ತೇವೆ. ಶ್ರೀಗಳನ್ನು ಕೂಡಲೇ ಬಂಧಿಸಬೇಕು. ದೊಡ್ಡವರನ್ನು ಬಂಧಿಸಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪ್ರತಿಭಟನಾ ಸ್ಥಳವಾದ ಬಾಲಮಂದಿರ ಎದುರು 100 ಮೀಟರ್ ಗಳ ವರೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಮುರುಘಾ ಶ್ರೀ ಅರ್ಜಿಯನ್ನು ಶ್ರೀಗಳ ಪರ ವಕೀಲರು ಚಿತ್ರದುರ್ಗಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್ 1ರಂದು ನಡೆಸುವುದಾಗಿ ತಿಳಿಸಿದೆ.
ಈ ನಡುವೆ ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅವರನ್ನು ಇದೀಗ ಪೋಲಿಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿತ್ತು. ಈ ನಡುವೆ ಮಠಕ್ಕೆ ವಾಪಸ್ಸು ಬಂದ ಶ್ರೀಗಳು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, ನಾವೆಲ್ಲರೂ ಒಟ್ಟಾಗಿ, ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.