ಬೆಂಗಳೂರು,ಮೇ.25- ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಡಿವೈಎಸ್ಪಿ ಶಾಂತಕುಮಾರ್ ರನ್ನು ಮತ್ತೆ ಮೂರು ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.
ಸಿಐಡಿ ಕಸ್ಟಡಿಗೆ ನೀಡಿದ್ದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ನಿನ್ನೆ ಶಾಂತಕುಮಾರ್ ರನ್ನು ನಗರದ 1ನೇ ಎಸಿಎಂಎಂ ಕೋರ್ಟ್ಗೆ ಸಿಐಡಿ ಹಾಜರುಪಡಿಸಿತ್ತು. ಸಿಐಡಿ ಪರ ವಕೀಲರ ಮನವಿ ಮೇರೆಗೆ ನ್ಯಾಯಾಲಯವು ಮತ್ತೆ ಮೂರು ದಿನ ಕಸ್ಟಡಿಗೆ ಶಾಂತಕುಮಾರ್ರನ್ನು ಪಡೆದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಮಂದಿಯನ್ನು ಸಿಐಡಿ ಬಂಧಿಸಿದೆ. ಇವರೆಲ್ಲರೂ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಬಂಧಿತ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ಎಎಚ್ಸಿ ಶ್ರೀಧರ್ ಬಳಿ ಸುಮಾರು 2 ಕೋಟಿ ನಗದು ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಣ ಪಡೆಯಲಾಗಿತ್ತು ಎಂಬ ಅಂಶವೂ ತನಿಖೆ ವೇಳೆ ಪತ್ತೆಯಾಗಿದೆ
ಏಜೆಂಟ್ಗಳಿಂದ ಹಣ:
ಐದರಿಂದ ಆರು ಅಭ್ಯರ್ಥಿಗಳಿಗೆ ಸೇರಿದ್ದ ಹಣ ಮಾತ್ರ ಸಿಕ್ಕಿದೆ. ಸಿಐಡಿ ತನಿಖೆ ವೇಳೆ ಇನ್ನಷ್ಟು ಹಣ ಪತ್ತೆಯಾಗುವ ಸಾಧ್ಯತೆಯಿದೆ. ಪ್ರಥಮ ದರ್ಜೆ ಗುಮಾಸ್ತ ಹರ್ಷನ ಮೂಲಕವೂ ಸಾಕಷ್ಟು ಅಕ್ರಮ ನಡೆದಿರುವುದು ಪತ್ತೆಯಾಗಿದೆ.
ರಾಜ್ಯದ ಹಲವು ಏಜೆಂಟ್ಗಳ ಮೂಲಕ ನೇಮಕಾತಿ ವಿಭಾಗಕ್ಕೆ ಹಣ ಪಾವತಿಯಾಗುತ್ತಿತ್ತು ಎಂಬ ಸಂಗತಿ ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ನೇಮಕಾತಿ ವಿಭಾಗದ ಯಾವ ಅಧಿಕಾರಿಗಳು ಅಭ್ಯರ್ಥಿಗಳಿಂದ ಹಣ ಪಡೆದು ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವುದೇ ಸವಾಲಾಗಿ ಪರಿಣಮಿಸಿದೆ. ಏಜೆಂಟ್ಗಳ ಮೂಲಕ ನಗದು ರೂಪದಲ್ಲಿ ಹಣ ಚಲಾವಣೆಯಾಗಿದೆ.
ಆರೋಪಿಗಳಿಗೆ ಶೋಧ:
ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸುತ್ತಿರುವ ಸಿಐಡಿ ಅಧಿಕಾರಿಗಳು ಅವರ ಮೂಲಕವೇ ಯಾರೆಲ್ಲಾ ಹಣ ಪಡೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದು, ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಈ ನಡುವೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ರುದ್ರಗೌಡ ಪಾಟೀಲನನ್ನು ಸಿಐಡಿ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು 7 ದಿನಗಳು ವಶದಲ್ಲಿ ಇರಿಸಿಕೊಳ್ಳಲು ಸಿಐಡಿಗೆ ಅನುಮತಿ ನೀಡಿದೆ. ರುದ್ರಗೌಡ ಪಾಟೀಲ್ನನ್ನು ಕಲಬುರಗಿಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಮಧ್ಯವರ್ತಿಗಳಿಗೆ ಶೋಧ:
ಕಳೆದ ಏಪ್ರಿಲ್ 23ರಂದು ರುದ್ರಗೌಡ ಪಾಟೀಲ್ನನ್ನು ಸಿಐಡಿ ಬಂಧಿಸಿತ್ತು. ರುದ್ರಗೌಡ ಪಾಟೀಲನ ಸಹಾಯದಿಂದ ಹಲವು ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದರು. ಇಂಥ ಹಲವು ಅಭ್ಯರ್ಥಿಗಳು ಮತ್ತು ಅಕ್ರಮಕ್ಕೆ ನೆರವಾಗಿದ್ದ ಸಿಬ್ಬಂದಿ, ಮಧ್ಯವರ್ತಿಗಳನ್ನು ಶೀಘ್ರ ಬಂಧಿಸಬಹುದು ಎಂದು ಹೇಳಲಾಗುತ್ತಿದೆ.
Previous Articleಹಿಂದೂ ಧಾರ್ಮಿಕ ಸ್ಥಳ ಅಸ್ತಿತ್ವ: ತಾಂಬೂಲ ಪ್ರಶ್ನೆಯಲ್ಲೂ ಸಾಬೀತು
Next Article ಕುಂದಾಪುರದ ಅನಿಲ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ