ಬೆಂಗಳೂರು, ಮೇ 10: ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ, ಮಾತಿನ ಚಕಮಕಿ, ಪೊಲೀಸ್ ಲಾಠಿ ಪ್ರಹಾರದಂತಹ ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯ ವಿಧಾನಸಭೆಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತವಾಗಿದೆ.
ತಾಂತ್ರಿಕ ಕಾರಣದಿಂದ ಕೆಲವು ಕಡೆ ಮತಯಂತ್ರಗಳು
ಕೈ ಕೊಟ್ಟರೆ ಮತ್ತೆ ಕೆಲವು ಕಡೆ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಮತಚಲಾಯಿಸಲು ಅವಕಾಶ ನಿರಾಕರಿಸಿದ ಪರಿಣಾಮ ಮತಗಟ್ಟೆ ಅಧಿಕಾರಿಗಳ ಜೊತೆ ಚಕಮಕಿ ನಡೆದ ಘಟನೆಗಳು ಸಾಮಾನ್ಯವಾಗಿದ್ದವು.
ರಾಜ್ಯದೆಲ್ಲೆಡೆ ಬೆಳಿಗ್ಗೆಯಿಂದಲೇ ಮತದಾರರು ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದರು. .
ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ, ಸಂಜೆ ಆರು ಗಂಟೆಯವರೆಗೆ ಮುಂದುವರೆಯಿತು.ಪ್ರಾಥಮಿಕ ವರದಿಗಳ ಪ್ರಕಾರ ಮತದಾನದ ಪ್ರಮಾಣ ಶೇ.76 ರಷ್ಟಾಗಿದೆ.
ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದ್ದರೆ,ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಮಂಡ್ಯ ಜಿಲ್ಲೆಗಳಲ್ಲಿ ಅತ್ಯಧಿಕ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದೆ.ಯುವ ಮತದಾರರು ಅತ್ಯಂತ ಉತ್ಸಾಹದಿಂದ ಬೆಳಿಗ್ಗೆಯೇ ಮತ ಚಲಾಯಿಸಿದರೆ, ವಯಸ್ಕರು ಮಧ್ಯಾಹ್ನದ ನಂತರ ಮತಗಟ್ಟೆಗೆ ಆಗಮಿಸಿದರು. ಪರಿಣಾಮ ನಾಲ್ಕು ಗಂಟೆಯ ನಂತರ ಬಹುತೇಕ ಮತಗಟ್ಟೆಗಳಲ್ಲಿ ದೊಡ್ಡ ಸಾಲು ಕಂಡು ಬಂದಿತು.
ಮಧ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿತ್ತು.ನಂತರದಲ್ಲಿ ಇದು ಚುರುಕು ಪಡೆದುಕೊಂಡಿತು.
ಕಲ್ಪತರು ನಾಡು ತುಮಕೂರಿನಲ್ಲಿ ಶೇ.78 ರಷ್ಟು ಚಿಕ್ಕಬಳ್ಳಾಪುರದಲ್ಲಿ ಶೇ.79 ಕೋಲಾರದಲ್ಲಿ ಶೇ. 77 ರಾಮನಗರದಲ್ಲಿ ಶೇ. 76 ಬೆಳಗಾವಿಯಲ್ಲಿ ಶೇ.78 ಧಾರವಾಡದಲ್ಲಿ ಶೇ.74 ಹಾವೇರಿಯಲ್ಲಿ ಶೇಕಡ 74 ಬಳ್ಳಾರಿಯಲಿ ಶೇಕಡ 78 ಗದಗ್ ಜಿಲ್ಲೆಯಲ್ಲಿ ಶೇ.76 ವಿಜಯಪುರದಲ್ಲಿ ಶೇಕಡ 74 ವಿಜಯನಗರದಲ್ಲಿ ಶೇ.78, ದಾವಣಗೆರೆಯಲ್ಲಿ ಶೇಕಡ 76 ಚಿತ್ರದುರ್ಗದಲ್ಲಿ ಶೇಕಡ 77 ಚಿಕ್ಕಮಗಳೂರಿನಲ್ಲಿ ಶೇಕಡ 76 ಉಡುಪಿಯಲ್ಲಿ 72 ದಕ್ಷಿಣ ಕನ್ನಡದಲ್ಲಿ ಶೇಕಡ 71 ಕೊಡಗು ಜಿಲ್ಲೆಯಲ್ಲಿ ಶೇಕಡ 72 ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡ 76 ಮೈಸೂರಿನಲ್ಲಿ ಶೇ. 77 ಮಂಡ್ಯದಲ್ಲಿ ಶೇ.78 ರಾಮನಗರದಲ್ಲಿ ಶೇಕಡ 78 ಬಾಗಲಕೋಟೆಯಲ್ಲಿ ಶೇಕಡ 77 ಕಲಬುರ್ಗಿಯಲ್ಲಿ ಶೇಕಡಾ 78 ಯಾದಗಿರಿಯಲ್ಲಿ ಶೇಕಡ 76 ಮತ್ತು ಕೊಪ್ಪಳದಲ್ಲಿ 78 ರಷ್ಟು ಮತದಾನವಾಗಿರುವ ವರದಿಗಳಿವೆ. ಚುನಾವಣಾ ಆಯೋಗ ತಡರಾತ್ರಿ ಈ ಬಗ್ಗೆ ಎಲ್ಲ ಜಿಲ್ಲೆಗಳಿಂದ ಅಧಿಕೃತ ಮಾಹಿತಿಯನ್ನು ಪಡೆದು ಕ್ರಮ ಕೈಗೊಳ್ಳಲಿದೆ ಇದರ ಪರಿಣಾಮವಾಗಿ ನಾಳೆ ಬೆಳಗ್ಗೆ ಖಚಿತವಾಗಿ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಮತದಾನವಾಗಿದೆ ಎಂಬ ವರದಿ ಲಭ್ಯವಾಗಲಿದೆ.
ಮತದಾನ ಬಹಿಷ್ಕಾರ-
ಚಾಮರಾಜನಗರ ಗುಂಡ್ಲುಪೇಟೆ ಕ್ಷೇತ್ರದಲ್ಲಿರುವ ರಾಜ್ಯದ ಗಡಿಭಾಗದ ಕಟ್ಟಕಡೆಯ ಕಾಡಂಚಿನ ಗ್ರಾಮ ಚಿಕ್ಕೆಎಲೆಚೆಟ್ಟಿ ಗ್ರಾಮದ ಗ್ರಾಮಸ್ಥರು ಹಳ್ಳಿಗೆ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದರು.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದ ಮತದಾರರು ಗ್ರಾಮಕ್ಕೆ ರಸ್ತೆ ಮಾಡಿಕೊಟ್ಟಿಲ್ಲ ಎಂದು ಮತದಾನ ಬಹಿಷ್ಕಾರ ಮಾಡಿದರು.ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೋನಹಳ್ಳಿ ಗ್ರಾಮದವರು, ಗ್ರಾಮಕ್ಕೆ ಮೂಲ ಸೌಕರ್ಯವಿಲ್ಲವೆಂದು ಮತದಾನ ಬಹಿಷ್ಕರಿಸಿದರು.
ಮತ ಹಾಕದ ವಾಟಾಳ್-
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನವರು ಮನೆ ಮನೆಗೆ ದುಡ್ಡು ಹಂಚಿದ್ದಾರೆ. ಇದು ಚುನಾವಣೆ ಅಲ್ಲ, ವ್ಯಾಪಾರ. ಇದನ್ನು ವಿರೋಧಿಸಿ ಈ ಚುನಾವಣೆಯನ್ನು ನಾನು ಬಹಿಷ್ಕರಿಸುತ್ತೇನೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.
ಲಾಠಿರುಚಿ-
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಸಬಿನಾಳದಲ್ಲಿ ವಿವಿಪ್ಯಾಟ್ ನಲ್ಲಿ ತಪ್ಪು ಮಾಹಿತಿ ಬರುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಪಿತ ಯುವಕರ ಗುಂಪು ಮತಯಂತ್ರ, ವಿವಿ ಪ್ಯಾಟ್ ಯಂತ್ರ ಪುಡಿ ಮಾಡಿರುವ ಘಟನೆ ನಡೆದಿದೆ.
ಚುನಾವಣಾ ಸಿಬ್ಬಂದಿ ಪೊಲೀಸರ ಮೇಲೆ ಹಲ್ಲೆ ಮಾಡಿ, ಕಾರು ಪಲ್ಟಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಕುಮಾರ್ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಭೇಟಿ ಪರಿಶೀಲನೆ ನಡೆಸಿದ್ದು ಇಲ್ಲಿ ಮರು ಮತದಾನಕ್ಕೆ ಆದೇಶಿಸುವ ಸಾಧ್ಯತೆ ಇದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮತದಾರರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಮತದಾರರ ಮೇಲೆ ಕೇಂದ್ರೀಯ ಮೀಸಲು ಪಡೆಯ ಪೊಲೀಸರು ಲಾಠಿ ಬೀಸಿದ್ದು ಹಲವರು ಗಾಯಗೊಂಡಿದ್ದಾರೆ.
ಬಳ್ಳಾರಿಯ ಸಂಜೀವನರಾಯ ಕೋಟೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ತಲೆಗೆ ಗಾಯವಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪದ್ಮನಾಭನಗರದ ಪಾಪಯ್ಯ ಗಾರ್ಡನ್ ಮತಗಟ್ಟೆ ಸಂಖ್ಯೆ 28, 29ರ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಟ್ಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಕ್ಷೇತ್ರದ ಕೇಶ್ವಾರ ಗ್ರಾಮದ ಮತಗಟ್ಟೆ ಹತ್ತಿರ ಜೆಡಿಎಸ್, ಬಿಜೆಪಿ ನಡುವೆ ಕೆಲ ಕಾಲ ಉದ್ವಿಗ್ನತೆ ಉಂಟಾಗಿದ್ದು, ಕಲ್ಲು ತೂರಾಟ ನಡೆದಿದೆ. ಕೇಶ್ವಾರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಲಲಿತಾ ಅನಪುರ ಅವರ ಸಹೋದರಿ ಸವಿತಾ ಮತಗಟ್ಟೆ ವೀಕ್ಷಣೆಗೆ ತೆರಳಿದ್ದರು. ಆ ವೇಳೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಕಲ್ಲು ತೂರಾಟ ನಡೆಯಿತು .
ಆನೆಗೆ ಬಲಿ-
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ
ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ತೋಕೆರೆ ಗ್ರಾಮದಲ್ಲಿ ಮತದಾನ ಮಾಡಿ, ಕಾಲುದಾರಿಯಲ್ಲಿ ವಾಪಸ್ ಬರುತ್ತಿದ್ದಾಗ ಕಾಡಾನೆ ದಾಳಿಗೆ ತುತ್ತಾಗಿ ಗ್ರಾಮದ ಪುಟ್ಟಸ್ವಾಮಿ (50) ಎಂಬುವವರು ಮೃತಪಟ್ಟಿದ್ದಾರೆ.
ಹೃದಯಾಘಾತ-
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತದಾನ ಮಾಡಿ ಹೊರಬಂದ ಜಯಣ್ಣ ಎಂಬ ವ್ಯಕ್ತಿ ಮತಗಟ್ಟೆ ಸಮೀಪದಲ್ಲಿ ತೀವ್ರ ಹೃದಯಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಇದರಿಂದ ಆ ಮತಗಟ್ಟೆಯಲ್ಲಿ ಕೆಲಕಾಲ ಮತದಾನ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗಿತ್ತು.
ಸಹಜ ಹೆರಿಗೆ-
ಬಳ್ಳಾರಿ ಜಿಲ್ಲೆಯ ಕುರುಗೋಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಮತದಾನ ಮಾಡಲು ಆಗಮಿಸಿದ ತುಂಬು ಗರ್ಭಿಣಿಗೆ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾದ ಅಪರೂಪದ ಘಟನೆ ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ
ನಡೆದಿದೆ ಹೆರಿಗೆ ನಂತರ ತಾಯಿ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.
Previous Articleಕುನೊದಲ್ಲಿ ಹೆಣ್ಣು ಚಿರತೆ ಸಾವು
Next Article ಫಿನ್ಲೆಂಡ್ ನ ಪ್ರಧಾನಿ ವಿವಾಹ ವಿಚ್ಛೇದನ

2 Comments
О¤Ої Betano Casino https://betanogame.org/el/ ПЂПЃОїПѓП†ОПЃОµО№ ОєО±ОёО±ПЃО® ПѓП…ОіОєОЇОЅО·ПѓО·. О•ОіОіПЃО¬П€ОїП… ОіО№О± 100% ОП‰П‚ €500 + 150 ОґП‰ПЃОµО¬ОЅ ПЂОµПЃО№ПѓП„ПЃОїП†ОП‚. О О±ОЇОѕОµ П…ПЂОµПЌОёП…ОЅО± ОєО±О№ ОєОПЃОґО№ПѓОµ П…ПЂОµПЌОёП…ОЅО± ОјОµ П„О№П‚ П„О±П‡ПЌП„ОµПЃОµП‚ О±ОЅО±О»О®П€ОµО№П‚ online. О— ПЂОµПЃО№ПЂОП„ОµО№О¬ ПѓОїП… ОѕОµОєО№ОЅО¬ П„ПЋПЃО±.
Mostbet te dГЎ as melhores boas-vindas com bГґnus irresistГvel logo no primeiro depГіsito – https://mostbetpt.pro/como-se-registrar/ , Jogue no cassino que sabe como receber bem seus jogadores: Mostbet .