ಬೆಂಗಳೂರು,ಅ.20- ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕೋಪಯೋಗಿ ಸತೀಶ್ ಜಾರಕಿಹೊಳಿ (Satish Jarkiholi) ಅವರ ಬೆಂಬಲಕ್ಕೆ ಧಾವಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಂಚರಾಜ್ಯಗಳ Election ಬಳಿಕ ಹೈಕಮಾಂಡ್ ಭೇಟಿ ಮಾಡಿ ಹೆಚ್ಚುವರಿ ಉಪಮುಖ್ಯಮಂತ್ರಿ ಹಾಗೂ ಇತರ ವಿಚಾರಗಳ ಬಗ್ಗೆ ಲಿಖಿತ ಮನವಿ ನೀಡುತ್ತೇನೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿಯಷ್ಟೆ ಅಲ್ಲ. ಮುಖ್ಯಮಂತ್ರಿಯಾಗುವ ಅರ್ಹತೆ ಸತೀಶ್ ಜಾರಕಿಹೊಳಿ ಹೊಂದಿದ್ದಾರೆ ಅವರ ಮೌನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನನ್ನ ಮೌನವನ್ನು ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು ಎಂದು ಸತೀಶ್ ಜಾರಕಿಹೊಳಿ ಅವರೇ ನೀಡಿರುವ ಹೇಳಿಕೆ ಬಹಳಷ್ಟು ಅರ್ಥ ಕಲ್ಪಿಸುತ್ತದೆ. ಅವರ ಮಾತಿನಲ್ಲಿ ಅಸಮದಾನ ಅಂಶ ಇರುವುದನ್ನು ಗಮನಿಸಬಹುದು ಎಂದು ಹೇಳಿದರು.
ರಾಜಕಾರಣದಲ್ಲಿ ಏರುಪೇರು ಇದ್ದಿದ್ದೆ. ಎಲ್ಲವನೂ ಸಹಿಸಿಕೊಂಡು ಹೋಗಬೇಕು. ಆದರೆ ಸತೀಶ್ ಜಾರಕಿಹೊಳಿ ಅವರ ಅಸಮದಾನ ಪಕ್ಷಕ್ಕೆ ಹಾನಿ ಮಾಡುವುದಿಲ್ಲ ಎಂದು ದೃಢವಾದ ನಂಬಿಕೆ ನಮಗಿದೆ ಎಂದರು.
ಸತೀಶ್ ಜಾರಕಿಹೊಳಿ ಆಪ್ತ ಶಾಸಕರೊಂದಿಗೆ ಪ್ರವಾಸ ಮಾಡುತ್ತಿರುವುದು ಭಿನ್ನಮತವಲ್ಲ. ಸತೀಶ್ ಜಾರಕಿಹೊಳಿ ತತ್ವಾಧಾರಿತ, ಸಿದ್ಧಾಂತದ ಮೇಲೆ ಹೋರಾಟ ಮಾಡುವ ಮುತ್ಸದ್ಧಿ ನಾಯಕ. ಅವರು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಲ್ಲಾ ಜಿಲ್ಲೆಗಳಲ್ಲೂ ಗುಂಪು ರಾಜಕಾರಣ ಇದ್ದೆ ಇರುತ್ತದೆ. ಒಂದು ಜಿಲ್ಲೆಯಲ್ಲಿ ಹೆಚ್ಚಿರುತ್ತದೆ, ಕೆಲವು ಕಡೆಗಳಲ್ಲಿ ಕಡಿಮೆ ಇರುತ್ತದೆ. ಗುಂಪು ರಾಜಕಾರಣ ಇಲ್ಲದ ಜಿಲ್ಲೆಗಳೇ ಇಲ್ಲ. ತುಮಕೂರಿನಲ್ಲಿ ಮಾತ್ರ ಗುಂಪು ರಾಜಕಾರಣ ಇಲ್ಲ, ಹಿಂದೆ ಇದ್ದ ಗುಂಪುಗಾರಿಕೆ ಇಲ್ಲವಾಗಿದೆ. ರಾಜಕಾರಣದಲ್ಲಿ ಕರೆದು ಅಧಿಕಾರ ನೀಡುವುದಿಲ್ಲ. ಅಧಿಕಾರ ಇಲ್ಲದವರು ಅಧಿಕಾರದಲ್ಲಿದ್ದವರಿಂದ ಕಿತ್ತುಕೊಳ್ಳಲು, ಅಧಿಕಾರದಲ್ಲಿದ್ದವರು ಅದನ್ನು ಉಳಿಸಿಕೊಳ್ಳಲು ಯತ್ನಿಸುವುದು ಸಾಮಾನ್ಯ. ರಾಜಕಾರಣದ ಇದನ್ನೆ ಸಂಘರ್ಷ ಎಂದು ಕರೆಯುವುದು ಎಂದರು.