ಬೆಂಗಳೂರು, ಮಾ.19- ರಾಜಧಾನಿ ಬೆಂಗಳೂರಿನ ನಗರ್ತಪೇಟೆಯಲ್ಲಿನ ಮೊಬೈಲ್ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ತನ್ನ ಅಂಗಡಿಯ ಸೌಂಡ್ ಸಿಸ್ಟಂ ನಲ್ಲಿ ಹನುಮಾನ್ ಚಾಲೀಸಾ ಹಾಕಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಖಂಡಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ (Tejasvi Surya), ಶಾಸಕರಾದ ಸುರೇಶ್ ಕುಮಾರ್, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ದಿಡೀರ್ ಪ್ರತಿಭಟನೆ ನಡೆಸಿದರು.
ಇದರಿಂದ ಆ ಪ್ರದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಂಸದರು, ಶಾಸಕರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು
ಘಟನೆ ನಡೆದ ನಗರ್ತಪೇಟೆಯ ಅಂಗಡಿ ಮುಂದೆ ಜಮಾಯಿಸಿದ ಸಂಸದ,ಶಾಸಕರು, ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಅಲ್ಲಿಂದ ಜೈ ಶ್ರೀರಾಮ್ ಘೋಷಣೆ ಹಾಗೂ ಹನುಮಾನ್ ಚಾಲೀಸಾ ಪಠಿಸುತ್ತಾ ಮೆರವಣಿಗೆ ಆರಂಭಿಸಿದರು.
ದಿಢೀರ್ ಪ್ರತಿಭಟನೆಯಿಂದ ಗೊಂದಲಕ್ಕೊಳಗಾದ ಆ ರಸ್ತೆಯಲ್ಲಿನ ಅಂಗಡಿ ಮಾಲೀಕರು ತಮ್ಮ ಮಳಿಗೆಗಳ ಬಾಗಿಲು ಮುಚ್ವಿದರು.ಇದರಿಂದ ಆ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಯಿತು.
ಮತ್ತೊಂದೆಡೆ ಭಜನೆ ಮಾಡುತ್ತಾ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ,ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಒಬ್ಬೊಬ್ಬರನ್ನಾಗಿಯೇ ಬಂಧಿಸಿದರು.
ಸಾವಿರಾರು ಕಾರ್ಯಕರ್ತರು:
ಒಂದು ಕಡೆ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸುತ್ತಿದ್ದರೆ ಮತ್ತೊಂದು ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮತ್ತಷ್ಟು ಜನ ಬರುತ್ತಲೇ ಇರುವುದು ಪೊಲೀಸರನ್ನು ಹೈರಾಣಾಗಿಸಿದೆ. ಸ್ಥಳದಲ್ಲಿ ಜೈಶ್ರೀರಾಮ್ ಘೋಷಣೆ ಮೊಳಗುತ್ತಿದೆ. ಅಲ್ಲದೆ, “ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಲಾಗುತ್ತಿದೆ. ಹೀಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದ್ದರೂ ಮತ್ತೆ ಪ್ರತಿಭಟನೆಯನ್ನು ಪ್ರಾರಂಭಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿದೆ. ಹನುಮಧ್ವಜ ಹಾರಿಸುತ್ತಿದ್ದಂತೆ ಹಿಂದು ಕಾರ್ಯಕರ್ತರು ಜೋರಾಗಿ ಶಿಳ್ಳೆ, ಚಪ್ಪಾಳೆ ಹೊಡೆದು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಹಿಂದು ಪರ ಸಂಘಟನೆಗಳು, ಹಿಂದು Businessಸ್ಥರು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಿದ್ದಾರೆ. “ಹಿಂದು ನಾವೆಲ್ಲ ಒಂದು” ಎಂದು ಘೋಷಣೆಗಳನ್ನು ಕೂಗಿದರು.ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜಿಸಿದ್ದು,ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬಿಗುವಿನ ವಾತಾವರಣ ಮುಂದುವರೆದಿದೆ.