ಬೆಂಗಳೂರು.
ಪ್ರಸಕ್ತ BJP ನೇತೃತ್ವದ ರಾಜ್ಯ ಸರ್ಕಾರದ ಕೊನೆಯ budget ಮಂಡನೆ ವೇಳೆ Congress ಸದಸ್ಯರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಿವಿ ಮೇಲೆ ಕೇಸರಿ ಬಣ್ಣದ ಹೂವು ಇಟ್ಟುಕೊಂಡು ಸದನಕ್ಕೆ ಬಂದರು. ಬಜೆಟ್ ಮಂಡನೆ ವೇಳೆ ಇವರ ಈ ವೇಷ ಮುಖ್ಯಮಂತ್ರಿ ಸೇರಿ ಎಲ್ಲರ ಗಮನ ಸೆಳೆಯಿತು. ಅಷ್ಟೇ ಅಲ್ಲ ಕೆಲಹೊತ್ತು ಕಲಾಪದಲ್ಲಿ ಗದ್ದಲಕ್ಕೂ ಕಾರಣವಾಯಿತು.
ಕಾಂಗ್ರೆಸ್ ಸದಸ್ಯರ ಈ ನಡೆಗೆ ಕಂದಾಯ ಸಚಿವ ಸಚಿವ ಅಶೋಕ (R Ashok) ಆಕ್ಷೇಪ ವ್ಯಕ್ತಪಡಿಸಿದರು. ಅವರೊಂದಿಗೆ ಧ್ವನಿಗೂಡಿಸಿದ ಸಿಎಂ ಬೊಮ್ಮಾಯಿ (Basavaraj Bommai), ‘ಕಾಂಗ್ರೆಸ್ಸನವರು, ಇಷ್ಟು ದಿನ ಜನರ ಕಿವಿ ಮೇಲೆ ಹೂವಿಟ್ಟಿದ್ಧಾರೆ. ಈಗ ಅವರೇ ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದಾರೆ. ಮುಂದೆ ಜನ ಇವರ ಕಿವಿ ಮೇಲೆ ಹೂವಿಡುತ್ತಾರೆ’ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಕೆರಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ನೀವು ಜನರ ಕಿವಿ ಮೇಲೆ ಹೂವಿಡುತ್ತಿದ್ದೀರಿ. ನಾನು ಹೂವು ಇಟ್ಟುಕೊಂಡಿದ್ದು, ಈ ಬಜೆಟ್ ಮೂಲಕ ನೀವು 7 ಕೋಟಿ ಜನರ ಕಿವಿ ಮೇಲೆ ಹೂ ಇಡುತ್ತಿದ್ದೀರಾ ಅಂತ ತಿಳಿಸಲು’ ಎಂದು ಹೇಳಿದರು.
ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ಕಾಗೇರಿ, ‘ಇಷ್ಟುದಿನ ಕೇಸರಿ ಬಣ್ಣ ನಿಮ್ಮ ಪಕ್ಷದ್ದು ಎನ್ನುತ್ತಿದ್ದ ಸಿದ್ದರಾಮಯ್ಯನವರೇ ಇಂದು ಕೇಸರಿ ಬಣ್ಣದ ಹೂ ಇಟ್ಟುಕೊಂಡು ಬಂದಿದ್ದಾರೆ’ ಎಂದರು.
ನಂತರ ಸದಸ್ಯರನ್ನು ಸಮಾಧಾನ ಪಡಿಸಿ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಿದರು.

