ಬೆಂಗಳೂರು,ಏ.3- ವಿಧಾನಸಭೆ Election ಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ತಂತ್ರ ರೂಪಿಸುತ್ತಿರುವ ಬಿಜೆಪಿ BJP ಇದೀಗ ಬೆಂಗಳೂರಿನಲ್ಲಿ ಮಹಿಳಾ ಶಕ್ತಿ ಒಲೈಸಲು ಮುಂದಾಗಿದೆ.
ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿದ ಪ್ರಮುಖರಲ್ಲಿ ಒಬ್ಬರಾಗಿದ್ದ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ (Tejaswini Ananth Kumar) ಮತ್ತು ಸಿನಿಮಾ ನಟಿ ಮಾಳವಿಕ ಅವಿನಾಶ್ (Malavika Avinash) ಚುನಾವಣಾ ರಾಜಕಾರಣ ಪ್ರವೇಶಿಸಲು ಸಜ್ಜಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ವಿಧಾನಸಭೆ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತ ಕುಮಾರ್ ಹಾಗೂ ಚಿಕ್ಕಪೇಟೆಯಿಂದ ಮಾಳವಿಕ ಅವಿನಾಶ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಬಸವನಗುಡಿಯ ಹಾಲಿ ಶಾಸಕ ರವಿಸುಬ್ರಹ್ಮಣ್ಯ ಮತ್ತು ಚಿಕ್ಕಪೇಟೆಯ ಹಾಲಿ ಶಾಸಕ ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸುದೀರ್ಘವಾದ ಚರ್ಚೆ ನಡೆದಿದ್ದು, ಹಾಲಿ ಇಬ್ಬರು ಶಾಸಕರಿಗೆ ಟಿಕೆಟ್ ಕೈತಪ್ಪಲಿದೆ ಎನ್ನಲಾಗುತ್ತಿದೆ
ಬಸವನಗುಡಿಯ ರಾಘವೇಂದ್ರ ಸೌಹಾರ್ದ ಕ್ರೆಡಿಟ್ ಬ್ಯಾಂಕ್ನಲ್ಲಿ ನಡೆದಿದ್ದ ವಂಚನೆ ಪ್ರಕರಣ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಬ್ಯಾಂಕ್ನಲ್ಲಿ ಠೇವಣಿ ಇಟ್ಟವರು ಬಹುತೇಕ ಅದೇ ಸಮುದಾಯದವರು.
ಬ್ರಾಹ್ಮಣ ಸಮುದಾಯ ತಿರುಗಿ ಬೀಳಬಹುದೆಂಬ ಆತಂಕವಿದ್ದು,ಇದನ್ನು ನಿವಾರಿಸಿಕೊಳ್ಳಲು
ಅನಂತಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸಿದ
ಹೆಸರಲ್ಲಿ ತೇಜಸ್ವಿನಿ ಅವರನ್ನು ಕಣಕ್ಕಿಳಿಸುವ ಮೂಲಕ ಗೆಲ್ಲುವ ಲೆಕ್ಕಾಚಾರ ಹಾಕಲಾಗಿದೆ.
ಕಳೆದ 2019ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಕೊನೆ ವೇಳೆ ಪ್ರಭಾವಿ ನಾಯಕರೊಬ್ಬರ ಮಧ್ಯಪ್ರವೇಶದಿಂದಾಗಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿತ್ತು.
ಇದರಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರೇ ನೊಂದುಕೊಂಡಿದ್ದರು. ಇದೀಗ ಈ ಅಸಮಾಧಾನವನ್ನು ಹೋಗಲಾಡಿಸಲು ಬಿಜೆಪಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ.
ತೇಜಸ್ವಿ ಸೂರ್ಯ ಈಗಾಗಲೇ ಸಂಸದರಾಗಿದ್ದು, ಅವರ ಚಿಕ್ಕಪ್ಪನವರಾಗಿರುವ ರವಿಸುಬ್ರಹ್ಮಣ್ಯ ಶಾಸಕರೂ ಹೌದು. ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುವ ಬಿಜೆಪಿ ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ಕೊಟ್ಟರೆ ಆಪಾದನೆ ತಮಗೂ ಅಂಟುತ್ತದೆ ಎಂಬ ಭೀತಿ ಕಾಡುತ್ತಿದೆ.ಇದನ್ನು ನಿವಾರಿಸಲು ಈ ಅಸ್ತ್ರ ಬಳಸುತ್ತಿದೆ.
ಇನ್ನು ಚಿಕ್ಕಪೇಟೆ ಕ್ಷೇತ್ರದಲ್ಲಿ ಉದಯ್ ಗರುಡಾಚಾರ್ ವಿರುದ್ಧ ಜನಾಭಿಪ್ರಾಯ ಕೇಳಿಬಂದಿದೆ.ಶಾಸಕರಾಗಿದ್ದ ಉದಯ್ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂಬ ವರದಿಗಳ ಜೊತೆಗೆ ಸಂಘ ಪರಿವಾರದ ವಿರೋಧದ ನಡುವೆಯೂ ಅಲ್ಪ ಸಂಖ್ಯಾತರನ್ನು ಒಲೈಸಿದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ.
ಇವರ ಬದಲಿಗೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಾಳವಿಕ ಅವಿನಾಶ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.