ಬೆಂಗಳೂರು, ಅ.3 – ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಲಿಂಗಾಯತ ಸಮುದಾಯದ ಅಧಿಕಾರಿಗಳು ಮೂಲೆ ಗುಂಪಾಗಿದ್ದಾರೆ ಎಂದು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಮವಾಗಿದೆ.
ಸರ್ಕಾರಿ ಅಧಿಕಾರಿಗಳ ಬಗ್ಗೆ ಜಾತಿ ಆಧಾರದ ಮೇಲೆ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪನವರು ಮಾತನಾಡಿರುವುದು ತಪ್ಪು. ಇದು ಆಡಳಿತದ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಶ್ಯಾಮನೂರು ಶಿವಶಂಕರಪ್ಪ ಅವರು ಮಾಹಿತಿ ಕೊರತೆಯಿಂದ ಲಿಂಗಾಯಿತ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗೆ ಹುದ್ದೆಗೆ ನಿಯೋಜಿಸಿಲ್ಲ. ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ. ಲಿಂಗಾಯಿತ ಅಧಿಕಾರಿಗಳಿಗೆ ಮಹತ್ವವಿಲ್ಲ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ.
ಜಾತಿ ಆಧಾರದ ಮೇಲೆ ಹುದ್ದೆ ಕೊಡಲಾಗುವುದಿಲ್ಲ. ಎಲ್ಲ ಜಾತಿಯಲ್ಲೂ ಅರ್ಹರು, ಅನರ್ಹರು ಇರುತ್ತಾರೆ. ಅರ್ಹತೆ ಆಧಾರದ ಮೇಲೆ ಅಧಿಕಾರಿಗಳಿಗೆ ಹುದ್ದೆ ನೀಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಲಿಂಗಾಯಿತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಒಪ್ಪುವುದಿಲ್ಲ ಎಂದು ಹೇಳಿದರು ಅಧಿಕಾರಿಗಳನ್ನು ಜಾತಿಯ ದೃಷ್ಟಿಯಿಂದ ನೋಡಬಾರದು. ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎನ್ನುತ್ತಲೇ ಈ ಅಂಕಿಅಂಶಗಳನ್ನು ನೀಡಿದರು.
ತಮ್ಮ ಸಂಪುಟದಲ್ಲಿ ಏಳು ಲಿಂಗಾಯಿತರಿಗೆ ಸಚಿವ ಸ್ಥಾನ ನೀಡಿದ್ದಾರೆ. ಲಿಂಗಾಯಿತ ಸಮುದಾಯದ ಮೂವರು ಜಿಲ್ಲಾಕಾರಿಗಳು, 7 ಎಸ್ಪಿಗಳು, 13 ವಿಶ್ವವಿದ್ಯಾನಿಲಯದ ಕುಲಪತಿಗಳು, ನಾಲ್ವರು ಸಿಇಒಗಳು ಹಾಗೂ ಮುಖ್ಯ ಇಂಜಿನಿಯರ್ಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ನ್ಯಾಯದ ಮೇಲೆ ಬಸವ ತತ್ವ ಅವಲಂಬಿತವಾಗಿರುವುದರಿಂದ ಸಿದ್ದರಾಮಯ್ಯ ಅವರು ಬಸವ ತತ್ವದ ಅನುಯಾಯಿ ಆಗಿದ್ದಾರೆ.
ಮೊದಲ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಲು ಆದೇಶ ನೀಡಿದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಲಿಂಗಾಯಿತ ಸಮುದಾಯದವ ರಾರು ಕೂಡ ಈ ಕಾರ್ಯ ಮಾಡಿರಲಿಲ್ಲ. ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಹೆಸರನ್ನು ನಾಮಕರಣ ಮಾಡಲಾಗಿದೆ.
ಕಲ್ಬುರ್ಗಿ ವಿವಿಗೆ ಬಸವೇಶ್ವರರ ಹೆಸರನ್ನು ಇಡಬೇಕೆಂಬ ಪ್ರಯತ್ನ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದನ್ನು ಕಾರ್ಯಗತ ಮಾಡಬಹುದಿತ್ತು. ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಲಿಂಗಾಯಿತ ವಿರೋಧಿಯಾಗಿದ್ದರೆ ಇವೆಲ್ಲ ಮಾಡಲು ಸಾಧ್ಯವಾದೀತೆ? ತುಳಿತಕ್ಕೊಳಗಾದವರ ಬಗ್ಗೆ ಅವರಲ್ಲಿ ಮೃದು ಧೋರಣೆಯಿದೆ. ಅಧಿಕಾರಿಗಳನ್ನು ಜಾತಿ ಆಧಾರದ ಮೇಲೆ ಗುರುತಿಸುವ, ಹುದ್ದೆ ನೀಡುವ ಕಾರ್ಯ ಸರಿಯಲ್ಲ. ಇದು ಅವರ ನೈತಿಕತೆ ಕುಗ್ಗಿಸುವ ಜೊತೆಗೆ ಆಡಳಿತದ ಮೇಲೂ ಪರಿಣಾಮ ಉಂಟಾಗುತ್ತದೆ ಎಂದು ಒತ್ತಿ ಹೇಳಿದರು.
ಸರ್ಕಾರದ ಬಗ್ಗೆ ಲಿಂಗಾಯಿತ ಶಾಸಕರಲ್ಲಿ ಅಸಮಾಧಾನವಿಲ್ಲ. ವಿರೋಧ ಪಕ್ಷದವರು ಹೇಳಿದಂತೆ ಬಹುಮತವುಳ್ಳ ನಮ್ಮ ಸರ್ಕಾರ ಏನೂ ಆಗುವುದಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಸಮಸ್ಯೆ ಗೊಂದಲವಿಲ್ಲ. ಆಂತರಿಕ ಪ್ರಜಾಪ್ರಭುತ್ವ ಪಕ್ಷದಲ್ಲಿ ಜಾಸ್ತಿ ಇರುವುದರಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಪರವಾಗಿ ಆಗಲಿ ಅಥವಾ ಶ್ಯಾಮನೂರು ಶಿವಶಂಕರಪ್ಪ ಅವರ ವಿರುದ್ದವಾಗಿ ಮಾತನಾಡುತ್ತಿಲ್ಲ. ಶಾಸಕನಾಗಿ ಜಾತಿ ಆಧಾರದ ಮೇಲೆ ಮಾತನಾಡಬಾರದು ಎಂದರು.