ಬೆಂಗಳೂರು,ಆ.25 – ನಿರುದ್ಯೋಗಿ ಪತಿಗೆ ಬುದ್ಧಿ ಕಲಿಸಲು ಹೋಗಿ ಮಹಿಳೆಯೊಬ್ಬರು ಪೇಚಿಗೆ ಸಿಲುಕಿರುವ ಅಪರೂಪದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕಷ್ಟ ಎಂದು ಗೊತ್ತಾದರೆ ಪತಿ ಕೆಲಸಕ್ಕೆ ಹೋಗಬಹುದು ಎಂದು ಮಹಿಳೆ ತನ್ನ ಬಂಗಾರ ಕಳ್ಳತನವಾಗಿದೆ ಎಂದು ನಾಟಕ ಮಾಡಲು ಹೋಗಿ ಮಲ್ಲೇಶ್ವರಂ ಪೊಲೀಸರ ಅತಿಥಿಯಾಗಿದ್ದಾಳೆ.
ತನ್ನ ಬಳಿಯಿದ್ದ ಚಿನ್ನಾಭರಣಗಳನ್ನ ಸ್ನೇಹಿತನಿಗೆ ಹೇಳಿಸಿ ಕಳುವು ಮಾಡಿಸಿ ನಾಟಕವಾಡಿದ್ದ ಮಹಿಳೆ ಬಳಿಕ ತಾನೇ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರ ತನಿಖೆ ವೇಳೆ ಪತಿಗೆ ಬುದ್ಧಿ ಕಲಿಸಲು ಮಹಿಳೆ ಮಾಡಿದ್ದ ಕಳ್ಳಾಟ ಬಟಾಬಯಲಾಗಿದೆ.
ಬ್ಯಾಂಕ್ ನಿಂದ 109ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಸ್ಕೂಟರ್ ಡಿಕ್ಕಿಲ್ಲಿಟ್ಟುಕೊಂಡು ಬಂದಿದ್ದ ಮಹಿಳೆ, ಮಕ್ಕಳನ್ನು ಶಾಲೆಯಿಂದ ಟ್ಯೂಷನ್ಗೆ ಬಿಟ್ಟಿದ್ದಳು. ಅದಾದ ಬಳಿಕ ಅತ್ತಿಗೆ ಮನೆಗೆ ತೆರಳಿದ್ದಳು.
ನಂತರ ಮತ್ತದೇ ಮಲ್ಲೇಶ್ವರಂನ 13ನೇ ಕ್ರಾಸ್ ನಲ್ಲಿರುವ ಟ್ಯೂಷನ್ ಬಳಿ ಬಂದಿದ್ದಳು. ಈ ವೇಳೆ ಸ್ಕೂಟರ್ ನ ಫುಟ್ ಮ್ಯಾಟ್ ಬಳಿ ಗಾಡಿ ಕಿ ಇಟ್ಟು ತನ್ನ ಗೆಳೆಯ ಧನಂಜಯ್ ನಿಗೆ ಕೆರೆ ಮಾಡಿದ್ದಳು. ಆಕೆಯೇ ಲೊಕೇಷನ್ ಕಳಿಸಿ ಕಳ್ಳತನ ಮಾಡಲು ಹೇಳಿದ್ದಳು. ಬಳಿಕ ಆಕೆ ಹೇಳಿದಂತೆ ಮತ್ತೋರ್ವ ರಾಕೇಶ್ ಎಂಬಾತನ ಜೊತೆ ಬಂದು ಸ್ಕೂಟರ್ ಸಮೇತ ಚಿನ್ನ ತೆಗೆದುಕೊಂಡು ಹೊಗಿದ್ದ.
ಬಳಿಕ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ತೆರಳಿ, ಸ್ಕೂಟರ್ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದು, ವಾಕಿಂಗ್ ಮಾಡಿ ಬಂದು ನೋಡಿದಾಗ ಸ್ಕೂಟರ್ ಇರಲಿಲ್ಲ ಎಂದಿದ್ದಾಳೆ. ನಂತರ ಕಾರ್ಯಪ್ರವೃತರಾದ ಪೊಲೀಸರು, ಸಿಸಿಟಿವಿ ಪರಿಶೀಲಿಸಿ ಧನಂಜಯ್ ಹಾಗೂ ರಾಕೇಶ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ ದೂರುದಾರ ಮಹಿಳೆ ಹೇಳಿದಂತೆ ಆರೋಪಿಗಳು ಕೆಲಸ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇದರೊಂದಿಗೆ ಮಹಿಳೆಯೆ ನೌಟಂಕಿ ಆಟ ಬಟಾಬಯಲಾಗಿದೆ.
ಬಳಿಕ ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ದೂರುದಾರೆ ಜೊತೆ ಮಹಿಳೆ ಚಾಟಿಂಗ್ ಮಾಡಿರುವುದು ಬಯಲಿಗೆ ಬಂದಿದೆ. ಸದ್ಯ ಮಹಿಳೆಯನ್ನು ಸಹ ಪೊಲೀಸರು ಬಂಧಿಸಿ 109ಗ್ರಾಂ ಚಿನ್ನ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಗಂಡ ಕೆಲಸಕ್ಕೆ ಹೋಗಲ್ಲ. ಮನೆಯಲ್ಲಿರುವುದೆಲ್ಲಾ ಕಳ್ಳತನ ಆಯ್ತು ಎಂದು ಕಷ್ಟ ಶುರುವಾದರೆ, ಬೀದಿಗೆ ಬರುತ್ತೇವೆ. ಆಗ ಪತಿ ಕೆಲಸಕ್ಕೆ ಹೋಗುತ್ತಾನೆ ಎಂದು ಮಹಿಳೆ ಸಂಚು ಮಾಡಿ ಕೃತ್ಯ ನಡೆಸಿರುವುದು ಪತ್ತೆಯಾಗಿದೆ.
ಗಂಡ ಕೆಲಸಕ್ಕೆ ಹೋಗದೇ ಊಟ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದ. ಇದರಿಂದ ಬೇಸರಗೊಂಡು ಕೆಲಸಕ್ಕೆ ಹೋಗಿ ಹೋಗಿ ಎಂದು ಎಷ್ಟು ಹೇಳಿದರೂ ಪತಿ ಮಾತ್ರ ಊಟ ಮಾಡಿಕೊಂಡು ಆರಾಮಾಗಿ ಮನೆಯಲ್ಲಿರುತ್ತಿದ್ದ. ಇದರಿಂದ ರೋಸಿ ಹೊದ ಮಹಿಳೆ ಕೊನೆಗೆ ತನ್ನ ಪತಿಗೆ ಕಷ್ಟ ಅರಿವು ಆದ ಬಳಿಕವಾದರೂ ಕೆಲಸಕ್ಕೆ ಹೋಗಬಹುದು ಎಂದು ತನ್ನ ಚಿನ್ನಾಭರಣಗಳು ಕಳತನ ನಾಟಕ ಮಾಡಿದ್ದಾಳೆ.
ಆದರೆ ಮಹಿಳೆಯ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಪೊಲೀಸರಿಗೆ ಮಹಿಳೆಯ ಸಮಸ್ಯೆ ಏನು ಗೊತ್ತಿರುತ್ತೆ ಅಲ್ವೇ, ಮಹಿಳೆ ದೂರು ಕೊಟ್ಟಿದ್ದಳು ಅದರಂತೆ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ.