ಬೆಂಗಳೂರು,ಜೂ.7:
ಕೋಮು ಭಾವನೆ ಕೆರಳಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಲಿವುಡ್ ಸಿನಿಮಾ ಹಮಾರೆ ಬಾರಹ್ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
ಜುಲೈ ಏಳರಿಂದ ಈ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಕರ್ನಾಟಕದಲ್ಲಿ ಮಾತ್ರ ಬಿಡುಗಡೆಗೆ ಅವಕಾಶ ನೀಡಿಲ್ಲ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಮಾರೆ ಬಾರಾಹ್ ಚಲನಚಿತ್ರವನ್ನು ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೂ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾಮಂದಿರ, ಖಾಸಗಿ ಟಿವಿ ಚಾನೇಲ್ಗಳ ಹಾಗೂ ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ರಾಜ್ಯದವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳ ಮುಸ್ಲಿಂ ಸಂಘಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ,ಹಮಾರೆ ಬಾರಾಹ್ ಚಲನಚಿತ್ರದ ಟ್ರೈಲರ್ನಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತಕ ಹಾಗೂ ಅವಹೇಳನಕಾರಿ ಅಂಶಗಳಿವೆ. ಈ ಚಿತ್ರ ಧರ್ಮ, ಜಾತಿಗಳ ನಡುವೆ ದ್ವೇಷ ಹುಟ್ಟಿಸುತ್ತದೆ ಹೀಗಾಗಿ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿದ್ದವು.
ಕೋಮು ಸೌಹಾರ್ದತೆಗೆ ಹಾನಿಯುಂಟು ಮಾಡಿ, ಅಶಾಂತಿ ನಿರ್ಮಿಸುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಷಡ್ಯಂತ್ರವನ್ನು ಹೊಂದಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುವ ಚಲನಚಿತ್ರ ಜೂನ್ 7ರಂದು ಬಿಡುಗಡೆಯಾಗುತ್ತಿದ್ದು, ಅದನ್ನು ನಿಷೇಧಿಸುವಂತೆ ಮುಸ್ಲಿಂ ಸಂಘಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಗೃಹ ಇಲಾಖೆ ಚಲನ ಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಿತ್ತು.
ಸಿನಿಮಾ ವೀಕ್ಷಿಸಿದ ತಜ್ಞರ ತಂಡ ಪವಿತ್ರ ಗ್ರಂಥದ ಉಪದೇಶ ಹಾಗೂ ಸಂದೇಶಗಳ ಕುರಿತು ತಪ್ಪು ಅರ್ಥ ಬರುವಂತೆ ಚಿತ್ರ ನಿರ್ಮಿಸಲಾಗಿದೆ. ಚಿತ್ರ ಬಿಡುಗಡೆಗೆ ಅನುಮತಿ ನೀಡಿದರೆ ರಾಜ್ಯದಲ್ಲಿ ಶಾಂತಿ ಭಂಗವಾಗಲಿದೆ ಎಂಬ ಅಭಿಪ್ರಾಯಕ್ಕೆ ನೀಡಿದೆ.
ಈ ಹಿನ್ನಡೆಯಲ್ಲಿ ಸಿನಿಮಾ ಪ್ರದರ್ಶನದ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ನಿಯಮಾವಳಿಗಳ ಪ್ರಕಾರ,ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಲು ಕರ್ನಾಟಕ ಸಿನಿಮಾ ರೆಗ್ಯೂಲೇಶನ್ ಆಕ್ಟ್ 1964ರ ಪ್ರಕಾರ ಸಂಬಂಧ ಪಟ್ಟವರಿಗೆ ನೋಟೀಸ್ ಜಾರಿ ಮಾಡಿ ವಿವರಣೆ ಪಡೆಯಬೇಕಿದೆ.
ಆದರೆ ಚಿತ್ರದ ನಿರ್ಮಾಪಕರಾದ ಬೀರೇಂದ್ರ ಭಗತ್, ರವಿ ಎಸ್.ಗುಪ್ತ, ಶಿಯೋ ಬಲಕ್ಸಿಂಗ್, ಸಂಜಯ್ ನಾಗಪಾಲ್, ನಿರ್ದೇಶಕ ಕಮಲ್ಚಂದ್ರ ಸೇರಿ ಮತ್ತಿತರರು ನೆರೆ ರಾಜ್ಯಗಳಲ್ಲಿದ್ದು, ನೋಟಿಸ್ ನೀಡಿ ವಿವರಣೆ ಪಡೆಯುವ ಪ್ರಕ್ರಿಯೆಗೆ ವಿಳಂಬವಾಗಲಿದೆ.
Previous ArticleBitcoin ಶ್ರೀಕಿ Girl friend ಗೆ ನೋಟಿಸ್ .
Next Article ರಾಹುಲ್ ಗಾಂಧಿಗೆ ಬೆಂಗಳೂರು ಕೋರ್ಟ್ ನಲ್ಲಿ ಜಾಮೀನು.