ಬೆಂಗಳೂರು, ಆ.12- ಹದಗೆಟ್ಟ ರಸ್ತೆಯಿಂದಾಗಿ ನಡೆದ ಅವಘಾತದಲ್ಲಿ ಪೊಲೀಸ್ ಮುಖ್ಯಪೇದೆಯೊಬ್ಬರ ಪುತ್ರ ಸಾವನ್ನಪ್ಪಿದ ದಾರುಣ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.
ಹಿಂದೆ ಕೆ.ಆರ್.ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸಿ ವಾರದ ಹಿಂದಷ್ಟೇ ಬೇರೆ ಠಾಣೆಗೆ ವರ್ಗಾವಣೆಗೊಂಡಿದ್ದ ಮುಖ್ಯ ಪೇದೆ ಸಂತೋಷ್ ಅವರ ಪುತ್ರ ಜೀವನ್ (10) ಮೃತ ದುರ್ದೈವಿಯಾಗಿದ್ದಾನೆ.
ಮಗನ ಜೊತೆ ಬೈಕ್ನಲ್ಲಿ ಕೆ.ಆರ್.ಪುರದ ಮಾರ್ಕೆಟ್ಗೆ ನಿನ್ನೆ ಸಂಜೆ ಸಂತೋಷ್ ಹೋಗುತ್ತಿದ್ದರು.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-44 ಹದಗೆಟ್ಟಿದ್ದು, ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿತ್ತು. ಆದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಇನ್ನು ರಸ್ತೆಯಲ್ಲಿ ಪುಡಿ ಜಲ್ಲಿ ನಿಂತಿತ್ತು. ಸಂತೋಷ್ ಅವರಿಗೆ ಕೆ.ಆರ್.ಪುರದ ತೂಗು ಸೇತುವೆಯನ್ನು ಇಳಿದ ತಕ್ಷಣ ರಸ್ತೆ ಗುಂಡಿ ಎದುರಾಗಿದೆ. ಈ ವೇಳೆ ಅವರು ಬೈಕನ್ನು ಬದಿಗೆ ಸರಿಸಿದ್ದಾರೆ. ಈ ವೇಳೆ ಪುಡಿ ಜಲ್ಲಿಯಿಂದಾಗಿ ಬೈಕ್ ಜಾರಿದೆ. ಆಗ ಹಿಂಬದಿ ಕುಳಿತಿದ್ದ ಬಾಲಕ ಜೀವನ್ ಆಯ ತಪ್ಪಿ ರಸ್ತೆಗೆ ಬಿದ್ದಿದ್ದಾನೆ.
ಬಾಲಕ ರಸ್ತೆಗೆ ಬೀಳುತ್ತಿದ್ದಂತೆ ಹಿಂದೆಯಿಂದ ಬಂದ ಭಾರತೀಯ ಸೇನೆಗೆ ಸೇರಿದ ವಾಹನದ ಹಿಂಬದಿ ಚಕ್ರವು ಬಾಲಕನ ಮೇಲೆ ಹರಿದಿದೆ. ಇದರಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಲಕನ ಮೃತದೇಹವನ್ನು ಕೆ.ಆರ್ಪುರ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿರುವ ಕೆ.ಆರ್.ಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಸೇನೆಯ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಹದಗೆಟ್ಟರಸ್ತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಗುಂಡಿಗೆ ಪೊಲೀಸ್ ಮುಖ್ಯಪೇದೆ ಪುತ್ರನ ಬಲಿ
Previous Articleಬಿಜೆಪಿ ಯುವ ಮೋರ್ಚಾ ಮುಖಂಡ ನೇಣಿಗೆ ಶರಣು
Next Article ಈದ್ಗಾ ಮೈದಾನದಲ್ಲಿ ಕಟ್ಟೆಚ್ಚರ ಪೊಲೀಸ್ ಪಥಸಂಚಲನ