ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಿನಿಮಾಗಳು ಕೇವಲ ಮನೋರಂಜನೆಯ ಮಾಧ್ಯಮವಾಗಿ ಉಳಿಯದೆ, ಒಂದು ನಿರ್ದಿಷ್ಟ ರಾಜಕೀಯ ಅಜೆಂಡಾವನ್ನು ಬಿತ್ತರಿಸುವ ‘ಪ್ರೊಪಗಂಡಾ’ ಸಾಧನಗಳಾಗಿ ಬಳಕೆಯಾಗುತ್ತಿವೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ‘ದಿ ಕೇರಳ ಸ್ಟೋರಿ’ ಭಾಗ-2ರ ಟೀಸರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿವಾದಕ್ಕೆ ಕಿಡಿ ಹಚ್ಚಿದೆ.
ಮೊದಲ ಭಾಗದಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ 32,000 ಹೆಣ್ಣು ಮಕ್ಕಳನ್ನು ಮತಾಂತರಿಸಲಾಗಿದೆ ಎಂಬ ವಿವಾದಾತ್ಮಕ ಅಂಕಿ-ಅಂಶ ನೀಡಲಾಗಿತ್ತು. ಆದರೆ, ನ್ಯಾಯಾಲಯದ ಚೀಮಾರಿ ಬಳಿಕ ಅದು ಕೇವಲ ಮೂವರು ಹೆಣ್ಣು ಮಕ್ಕಳ ಕಥೆ ಎಂದು ಚಿತ್ರತಂಡ ಒಪ್ಪಿಕೊಂಡ ಇತಿಹಾಸವಿದೆ. ಈಗ ಎರಡನೇ ಭಾಗದ ಟೀಸರ್ನಲ್ಲಿ ಭಾರತವನ್ನು ‘ಇಸ್ಲಾಮಿಕ್ ಸ್ಟೇಟ್’ ಮಾಡುವ ಸಂಚಿನ ನರೇಟಿವ್ ಅನ್ನು ಬಿಂಬಿಸಲಾಗುತ್ತಿದ್ದು, ಇದು ಸಮಾಜದಲ್ಲಿ ಆತಂಕ ಮೂಡಿಸುತ್ತಿದೆ.
ಕೇರಳದ ಆಹಾರ ಸಂಸ್ಕೃತಿಯಲ್ಲಿ ಬೀಫ್ ಎಂಬುದು ಧರ್ಮದ ಹಂಗಿಲ್ಲದೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸೇವಿಸುವ ಸಾಮಾನ್ಯ ಆಹಾರವಾಗಿದೆ. ಆದರೆ ಈ ಸಿನಿಮಾದಲ್ಲಿ ಬಲವಂತವಾಗಿ ಬೀಫ್ ತಿನ್ನಿಸುವ ದೃಶ್ಯಗಳನ್ನು ವೈಭವೀಕರಿಸುವ ಮೂಲಕ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಆಹಾರವನ್ನೇ ಶಸ್ತ್ರವನ್ನಾಗಿ ಬಳಸಿ ಜನರ ನಡುವೆ ಕಂದರ ಸೃಷ್ಟಿಸುವುದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬ ಎಚ್ಚರಿಕೆಗಳು ಕೇಳಿಬರುತ್ತಿವೆ.
ವಿಶೇಷವಾಗಿ ಚುನಾವಣೆಗಳು ಹತ್ತಿರ ಬಂದಾಗ ಇಂತಹ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಮತಗಳ ಧ್ರುವೀಕರಣದ ತಂತ್ರವೇ ಎಂಬ ಪ್ರಶ್ನೆಯನ್ನು ವಿಶ್ಲೇಷಕರು ಎತ್ತಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುವ ‘ಗೋಬೆಲ್ಸ್ ತಂತ್ರ’ವನ್ನು ಸಿನಿಮಾಗಳ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿದೆ.
2014ರ ನಂತರ ಇಂತಹ ಸಿನಿಮಾಗಳ ಸರಣಿಯೇ ಶುರುವಾಗಿದ್ದು, ‘ಆರ್ಟಿಕಲ್ 370’ ಸಿನಿಮಾದಲ್ಲಿ ಕಾಶ್ಮೀರದ ವಿಶೇಷ ಮಾನ್ಯತೆ ರದ್ದತಿಯನ್ನು ಸಮರ್ಥಿಸಲಾಗಿದ್ದರೆ, ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದಲ್ಲಿ ಗಾಂಧೀಜಿಯವರನ್ನು ಕಡೆಗಣಿಸಿ ಸಾವರ್ಕರ್ ಅವರನ್ನು ವೈಭವೀಕರಿಸಲಾಗಿದೆ. ‘ಎಮರ್ಜೆನ್ಸಿ’ ಚಿತ್ರದಲ್ಲಿ ಇಂದಿರಾ ಗಾಂಧಿಯವರನ್ನು ಕ್ರೂರವಾಗಿ ಚಿತ್ರಿಸುವುದು ಹಾಗೂ ಇತ್ತೀಚಿನ ‘ದುರಂದರ್’ ಚಿತ್ರದಲ್ಲಿ ಹಾಲಿ ಸರ್ಕಾರವನ್ನು ಸರ್ವಶ್ರೇಷ್ಠ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ.
98% ಸಾಕ್ಷರತೆ ಮತ್ತು ಕೋಮು ಸೌಹಾರ್ದತೆಗೆ ಹೆಸರಾದ ಕೇರಳವನ್ನು ‘ಭಯೋತ್ಪಾದಕರ ರಾಜ್ಯ’ ಎಂದು ಬಿಂಬಿಸುವುದು ಅಲ್ಲಿನ ಪ್ರವಾಸೋದ್ಯಮ ಮತ್ತು ಜನರ ಘನತೆಗೆ ಧಕ್ಕೆ ತರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಎನ್ನುವುದು ಜನರ ಮೇಲೆ ಪ್ರಬಲ ಪ್ರಭಾವ ಬೀರುವ ಮಾಧ್ಯಮ. ಅದನ್ನು ದ್ವೇಷ ಹರಡಲು ಬಳಸಿಕೊಂಡರೆ, ಅದರಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ದಶಕಗಳೇ ಬೇಕಾಗಬಹುದು. ಸಾರ್ವಜನಿಕರು ಇಂತಹ ಸಿನಿಮಾಗಳ ಹಿಂದಿನ ಅಜೆಂಡಾವನ್ನು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

