ಬೆಂಗಳೂರು,ಫೆ.19-
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ(Vidhana Soudha)ದ ಬಳಿ ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದ ಹತ್ತು ಲಕ್ಷ ರೂ. ಹಣದ ಮೂಲವನ್ನು ವಿಧಾನಸೌಧ ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ.
ಇಂಜಿನಿಯರ್ ಜಗದೀಶ್ ಮೂವರು ವ್ಯಕ್ತಿಗಳಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಗುತ್ತಿಗೆದಾರರೊಬ್ಬರಿಂದ ಐದು ಲಕ್ಷ ಹಾಗೂ ತನ್ನಿಬ್ಬರು ಸಹೋದ್ಯೋಗಿಗಳ ಬಳಿ ತಲಾ 3.5 ಮತ್ತು 1.5 ಲಕ್ಷ ರೂ. ಹಣ ಸಾಲ ಪಡೆದಿದ್ದ. ಜಗದೀಶ್ಗೆ ಹಣ ಕೊಟ್ಟ ಮೂವರು ವ್ಯಕ್ತಿಗಳನ್ನು ವಿಚಾರಣೆ ನಡೆಸಿರುವ ವಿಧಾನಸೌಧ ಪೊಲೀಸರು ಹೇಳಿಕೆಗಳನ್ನು ದಾಖಲಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ಇರುವುದು ಬೆಳಕಿಗೆ ಬಂದಿದೆ.
ಚೆಕ್ಬೌನ್ಸ್ ಪ್ರಕರಣ ಸಂಬಂಧ ಹಣ ಮರುಪಾವತಿಗೆ ಜಗದೀಶ್ ಹಣ ಹೊಂದಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಹಣ ಕೊಟ್ಟವರ ಹೇಳಿಕೆ ದಾಖಲಿಸಿ, ಅಂತಿಮ ಹಂತದ ತನಿಖೆಯನ್ನು ನಡೆಸಲಾಗುತ್ತಿದೆ. ಚೆಕ್ಬೌನ್ಸ್ ಸಂಬಂಧ ಬ್ಯಾಂಕ್ ವ್ಯವಹಾರ ಮಾಹಿತಿ, ಪ್ರಕರಣ ವಿವರಗಳ ಸಂಗ್ರಹ ಮಾಡಿರುವ ವಿಧಾನಸೌಧ ಪೊಲೀಸರು ಅಂತಿಮ ಹಂತದ ತನಿಖೆ ನಡೆಸಿ, ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಕಳೆದ ಜ. 5ರಂದು ವಿಧಾನಸೌಧದ ಪೂರ್ವ ಗೇಟ್ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಂದ್ರ DCP ಶ್ರೀನಿವಾಸ ಗೌಡ ಹೇಳಿಕೆ ನೀಡಿ, ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನಸೌಧ ಮತ್ತು ವಿಕಾಸಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದರು.

