ತುಮಕೂರು – ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಭರ್ಜರಿ ರಂಗು ಬಂದಿದೆ. ಕಲ್ಪತರು ನಾಡು ತುಮಕೂರಿನಲ್ಲಿ ಜಿದ್ದಾಜಿದ್ದಿನ ಅಖಾಡ ಸೃಷ್ಟಿಯಾಗಿದೆ.
ಬಿಜೆಪಿಯಿಂದ ಮಾಜಿ ಸಚಿವ ವಿ ಸೋಮಣ್ಣ ಮತ್ತು ಕಾಂಗ್ರೆಸ್ ನಿಂದ ಮಾಜಿ ಸಂಸದ ಮುದ್ದಹನುಮೇಗೌಡ ಕಣಕ್ಕಿಳಿದಿದ್ದಾರೆ.
ಈ ಇಬ್ಬರೂ ನಾಯಕರು ರಾಜ್ಯದ ಎರಡು ಪ್ರಭಾವಿ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದು ಈ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ನಾಯಕರು ಹಲವಾರು ಲೆಕ್ಕಾಚಾರ ಆಧರಿಸಿ ಇವರನ್ನು ಕಣಕ್ಕಿಳಿಸಿದೆ.
ತುಮಕೂರಿನಲ್ಲಿ ಈ ಎರಡು ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಹೀಗಾಗಿ ಈ ಎರಡು ರಾಜಕೀಯ ಪಕ್ಷಗಳು ಪ್ರಭಾವಿ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಿದೆ.
ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮುದ್ದ ಹನುಮಗೌಡ ಸ್ಥಳೀಯರಾಗಿದ್ದು ಕ್ಷೇತ್ರದಲ್ಲಿ ಚಿರಪರಿಚಿತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು. ಆನಂತರ ಬಿಜೆಪಿಯಲ್ಲೂ ಕಾರ್ಯಕರ್ತರೊಂದಿಗೆ ಉತ್ತಮ ಸಂಪರ್ಕ ಸಾಧಿಸಿದ್ದರು.
ಆದರೆ ಈಗ ಲೋಕಸಭೆ ಚುನಾವಣೆ ವೇಳೆ ಮತ್ತೆ ಪಕ್ಷಾಂತರ ಮಾಡಿರುವುದು ಈ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಅಲ್ಲದೆ ಕ್ಷೇತ್ರದಲ್ಲಿ ಪ್ರಬಲವಾಗಿರುವ ಕುಂಚಟಿಗ ಒಕ್ಕಲಿಗ ಸಮುದಾಯ ಮುದ್ದಹನುಮೇಗೌಡ ಅವರ ವಿರುದ್ಧ ನಿಂತಿದೆ. ಯಾದವ ಸಮುದಾಯ ನಿರ್ಣಾಯಕ ಪಾತ್ರ ನಿರ್ವಹಿಸುವ ಈ ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಈ ಸಮುದಾಯದ ಮತಗಿಟ್ಟಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.
ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಮುದ್ದಹನುಮೇಗೌಡ ಪರ ವಾತಾವರಣ ಇರುವಂತೆ ಕಂಡು ಬರುತ್ತಿದೆಯಾದರೂ, ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಸಚಿವ ವಿ ಸೋಮಣ್ಣ ತಮ್ಮ ರಾಜಕೀಯ ಚಾತುರ್ಯ ತಂತ್ರಗಾರಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಮನೋಭಾವದ ವ್ಯಕ್ತಿತ್ವದಿಂದಾಗಿ ಗಮನಸೆಳೆಯುತ್ತಾರೆ.
ಸಿದ್ದಗಂಗಾ ಮಠ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಮಠಗಳ ಬೆಂಬಲ ಗಿಟ್ಟಿಸಿಕೊಂಡಿರುವ ಸೋಮಣ್ಣ ತಾವು ಹೊರಗಿನವರು ಎಂಬ ಅಸಮಾಧಾನವನ್ನು ತೊಡೆದು ಹಾಕಲು ಪ್ರಯತ್ನ ನಡೆಸಿದ್ದು, ವೀರಶೈವ ಲಿಂಗಾಯತ ಸಮುದಾಯ ಇವರ ಬೆನ್ನಿಗೆ ನಿಂತಿದೆ.
ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮಾಧುಸ್ವಾಮಿ ಇವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮತದಾರರ ಮೇಲೆ ಇವರು ಅಂತಹ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ತುರುವೇಕೆರೆ ಮತ್ತು ತಿಪಟೂರು ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಸೋಮಣ್ಣ ಅವರು ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.