ಬೆಂಗಳೂರು,
ಮನೆಗಳ್ಳತನ, ಸರಗಳ್ಳತನ, ದರೋಡೆ ಮೊದಲಾದ ಅಪರಾಧ ಕೃತ್ಯಗಳಿಗೆ ಹೆಸರಾದ ರಾಮ್ ಜಿ ಗ್ಯಾಂಗ್,ಇರಾನಿ ಗ್ಯಾಂಗ್ ಗಳನ್ನು ರಾಜ್ಯ ಪೊಲೀಸರು ಹೆಡೆಮುರಿ ಕಟ್ಟಿದ ಬೆನ್ನಲ್ಲೇ ಇದೀಗ ನೇಪಾಳಿ ಗ್ಯಾಂಗ್ ಪ್ರತ್ಯಕ್ಷವಾಗಿದೆ.
ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಗೆ ಬರುತ್ತಿರುವ ನೇಪಾಳಿಗಳು ಅತ್ಯಂತ ವಿಶ್ವಾಸಾರ್ಹ ಹಾಗೂ ಶ್ರಮಜೀವಿಗಳು ಎಂದು ಖ್ಯಾತಿ ಪಡೆದಿದ್ದಾರೆ.ಈ ವಿಶ್ವಾಸಾರ್ಹತೆಯ ಪರಿಣಾಮವಾಗಿ ನೇಪಾಳಿಗಳಿಗೆ ಹೆಚ್ಚಿನ ವಿಚಾರಣೆ ಇಲ್ಲದೆ ಕೆಲಸ ಕೊಡಲಾಗುತ್ತಿದೆ.ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ನೇಪಾಳ ಮೂಲದ ವ್ಯಕ್ತಿಗಳು ಸಿಕ್ಕಿ ಬಿದ್ದಿರುವ ಘಟನೆಗಳು ವರದಿಯಾಗುತ್ತಿವೆ.
ಈ ನಡುವೆ ನೇಪಾಳಿ ಗ್ಯಾಂಗ್ ಒಂದು ಹುಟ್ಟಿಕೊಂಡಿರುವ ಮಾಹಿತಿ ಪೊಲೀಸರನ್ನು ತಲುಪಿದೆ
ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣ ಭೇದಿಸಿದ ಪೊಲೀಸರು ನೇಪಾಳಿ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ನೇಪಾಳಿ ಗ್ಯಾಂಗ್ ಬೆಂಗಳೂರು ಮಾತ್ರವಲ್ಲ ಪುಣೆ ಸೇರಿದಂತೆ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿ ಶಾಮಿಲಾಗಿರುವ ಅಂಶ ಕೂಡ ಬೆಳಕಿಗೆ ಬಂದಿದೆ
ನೇಪಾಳದ ಈ ಗ್ಯಾಂಗ್ ಸದಸ್ಯರು ಶ್ರೀಮಂತ ಉದ್ಯಮಿಗಳ ಮನೆಗಳನ್ನು ಟಾರ್ಗೆಟ್ ಮಾಡಿ ಅಲ್ಲಿ ಮನೆಗೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಬಳಿಕ ಅಲ್ಲಿನ ಎಲ್ಲಾ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಿದ್ದರು. ದರೋಡೆ ಮಾಡುವ ಮುನ್ನ ಒಂದು ತಿಂಗಳಲ್ಲಿ ವೈಯಕ್ತಿಕ ಕಾರಣದ ನೆಪ ಹೇಳಿ ಕೆಲಸ ಬಿಡುತ್ತಿದ್ದರು. ಕೆಲಸ ಬಿಡುವ ಮುನ್ನ ಇದೇ ಗ್ಯಾಂಗ್, ತಮ್ಮ ತಂಡದವರನ್ನು ಆ ಮನೆಗಳಿಗೆ ಕೆಲಸಕ್ಕೆ ಸೇರಿಸಿ ಹೋಗುತ್ತಾರೆ. ನಂತರದಲ್ಲಿ ಹೊಂಚು ಹಾಕಿ ಈ ಮನೆಗಳಲ್ಲಿ ದರೋಡೆ ಮಾಡಿ ನೇಪಾಳಕ್ಕೆ ಪರಾರಿ ಯಾಗುತ್ತಾರೆ.
ಅದೇ ರೀತಿ ಬೆಂಗಳೂರು ನಗರದ ಉದ್ಯಮಿ ಶಿವಕುಮಾರ್ ಅವರ ಮನೆಗೂ ಗ್ಯಾಂಗ್ನ ಕಮಲ ಹಾಗೂ ದಿನೇಶ್ ಎಂಬವರನ್ನು ಕೆಲಸಕ್ಕೆ ಸೇರಿಸಿದ್ದರು. ನಂತರ ಅವರ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿತ್ತು ಈ ತಂಡದ ಬಗ್ಗೆ ಕೊಂಚ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ ಬಂಧಿತರು ವಿಚಾರಣೆಯ ಸಮಯದಲ್ಲಿ ತಾವು ಗ್ಯಾಂಗ್ ಕಟ್ಟಿಕೊಂಡಿರುವ ಅಂಶ ಮತ್ತು ಪುಣೆ ಸೇರಿದಂತೆ ಇತರಡೆ ನಡೆದ ದರೋಡೆ ಪ್ರಕರಣಗಳ ಬಗ್ಗೆ ಬಾಯಿ ಬಿಟ್ಟಿದ್ದು ತನಿಖೆ ಮುಂದುವರೆದಿದೆ.
Previous Articleವಿಧಾನಸಭೆಯಲ್ಲಿ ಅಶೋಕ್ ವೀರಾವೇಶದ ಭಾಷಣ
Next Article ಅಧಿಕಾರ ಹಂಚಿಕೆ ಬಗ್ಗೆ ವಿಧಾನಸಭೆಯಲ್ಲಿ ಡಿಸಿಎಂ ಗುಡುಗು

