ಚಿಕ್ಕಮಗಳೂರು,ಮೇ.28-ಗಾಂಜಾ ಪ್ರಕರಣದ ವಿಚಾರಣಾಧೀನ ಕೈದಿ ಕಡೂರು ಮೂಲದ ಧನ್ರಾಜ್ ಜಿಲ್ಲಾಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಧನ್ರಾಜ್(47) ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದು ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ.
ಜೈಲಿನಲ್ಲಿದ್ದ ಧನ್ರಾಜ್ಗೆ ಕಳೆದ ಎರಡು ದಿನಗಳಿಂದ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರು ಪೇರಾಗಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಜೈಲಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಆರೋಪಿ ಕಾವಲಿಗೆ ಓರ್ವ ಜೈಲು ಸಿಬ್ಬಂದಿ ಹಾಗೂ ಮತ್ತೋರ್ವ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಓರ್ವ ಸಿಬ್ಬಂದಿ ಊಟಕ್ಕೆ ಹೋದ ಸಂದರ್ಭದಲ್ಲಿ ಮತ್ತೋರ್ವ ಸಿಬ್ಬಂದಿಯನ್ನು ತಳ್ಳಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ.
ಶೌಚಾಲಯಕ್ಕೆ ಹೋಗಬೇಕೆಂದು ತಿಳಿಸಿದ್ದರಿಂದ ಪೊಲೀಸ್ ಪೇದೆ ಆತನ ಕೈಕೋಳವನ್ನು ತೆಗೆದು ಶೌಚಾಲಯದ ಕೊಠಡಿಗೆ ಕಳುಹಿಸಿದ್ದಾಗ ಸಮಯ ಸಾಧಿಸಿ ಪೇದೆಯನ್ನು ಶೌಚಾಲಯದ ಕೊಠಡಿಗೆ ತಳ್ಳಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಧನ್ರಾಜ್ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.