ಬೆಂಗಳೂರು,ಜಿ.22 : ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ (PSI Scam) ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಆಯೋಗ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ವರದಿಯಲ್ಲಿ ಈ ಹಿಂದೆ ಗೃಹ ಸಚಿವರಾಗಿದ್ದ ಅರಗಾಗಿ ಜ್ಞಾನೇಂದ್ರ ಉನ್ನತ ಶಿಕ್ಷಣ ಸಚಿವ ಅಶ್ವತ ನಾರಾಯಣ ಸೇರಿದಂತೆ ಕೆಲವು ಪ್ರಮುಖ ರಾಜಕಾರಣಿಗಳು ಅಕ್ರಮದಲ್ಲಿ ಶಾಮೀಲಾದವರೊಂದಿಗೆ ನಂಟು ಹೊಂದಿರುವ ಕುರಿತಂತೆ ತಿಳಿಸಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ.
ಅಕ್ರಮ ಆರೋಪದ ಅಡಿಯಲ್ಲಿ ಈಗಾಗಲೇ ಬಂದಿತರಾಗಿ ಜಾಮೀನಿನ ಮೇಲೆ ಹೊರಬಂದಿರುವ ಐಜಿಪಿ ಅಮೃತ್ ಪಾಲ್, ಡಿವೈಎಸ್ಪಿ ಶಾಂತ್ ಕುಮಾರ್ ಸೇರಿದಂತೆ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಅಧಿಕಾರಿಗಳು ಹಾಗೂ ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ನೇಮಕಾತಿಯಲ್ಲಿ ಹಗರಣ ನಡೆಯಲು ಕಾರಣಗಳೇನು? ಹಾಗೂ ಯಾವ ರೀತಿ ಪರೀಕ್ಷಾ ಅಕ್ರಮಗಳನ್ನು ನಡೆಸಲಾಗಿದೆ ಎಂಬ ಕುರಿತು ಸವಿಸ್ತಾರವಾದ ವರದಿ ನೀಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮಹತ್ವದ ಶಿಫಾರಸ್ಸುಗಳಿವೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಆನತಿ ದೂರದಲ್ಲಿ ಇಡೀ ಆಕ್ರಮದ ಜಾಲ ಕೆಲಸ ಮಾಡಿರುವ ಕುರಿತಂತೆ ನ್ಯಾಯಮೂರ್ತಿ ವೀರಪ್ಪ ಅವರ ವರದಿಯಲ್ಲಿ ಹಾಲು ಸ್ಫೋಟಕ ಅಂಶಗಳಿವೆ ಎಂದು ಗೊತ್ತಾಗಿದೆ ಅಕ್ರಮದ ಬಹುತೇಕ ಎಲ್ಲಾ ಒಎಂಆರ್ ಪ್ರತಿಗಳನ್ನು ಡಿ.ಜಿ.ಕಚೇರಿಯ ನೇಮಕಾತಿ ವಿಭಾಗದಲ್ಲೇ ತಿದ್ದಲಾಗಿದೆ. ತಿದ್ದಲ್ಪಟ್ಟಿರುವ ಒಎಂಆರ್ ಪ್ರತಿಗಳಲ್ಲಿ ಎರಡು ಮೂರು ಬಗೆಯ ಇಂಕ್ ಬಳಕೆಯಾಗಿದೆ. ಪ್ರತಿಯೊಂದು ಒಎಮ್ ಅರ್ ಮೇಲೆ ಎಳೆಂಟು ಬೆರಳಚ್ಚಿನ ಗುರುತುಗಳಿರುವುದನ್ನು ತನಿಖಾ ಆಯೋಗ ತಂಡ ಪತ್ತೆ ಹೆಚ್ಚಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿರುವ ನೇಮಕಾತಿ ವಿಭಾಗದ ನೇಮಕಾತಿ ವಿಭಾಗದ ಸಿಬ್ಬಂದಿ ಶ್ರೀಧರ್, ಹರ್ಷಾ, ಶ್ರೀನಿವಾಸ್, ಲೋಕೇಶ್ ಇದರಲ್ಲಿ ಶಾಮೀಲಾಗಿದ್ದಾರೆ ಇವರಿಗೆ ಹಲವು ರಾಜಕಾರಣಿಗಳ ನಂಟು ಇದೆ ಅಕ್ರಮದ ಬಗ್ಗೆ ವಿವರ ನೀಡಿರುವ ಆಯೋಗದ ವರದಿ ಹರ್ಷಾ ಎಫ್ ಡಿ ಎ ಅಧಿಕಾರಿ, ಶ್ರೀಧರ್ ನೇಮಕಾತಿ ವಿಭಾಗದ ಇನ್ಸ್ ಪೆ ಕ್ಟರ್ ಆಗಿದ್ದಾರೆ. ಮಂಜುನಾಥ್ ಮತ್ತು ಶರತ್ ಅಭ್ಯರ್ಥಿಗಳೊಂದಿಗೆ ವ್ಯವಹಾರ ಕುದುರಿಸುತ್ತಿದ್ದರು ಎಂದು ಹೇಳಿದೆ
ಪಿಎಸ್ಐ 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2021ರ ಜನವರಿ 21 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ನೀಡಿತ್ತು.
ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ವರದಿಯನ್ನು ಇನ್ನೇನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎನ್ನುವ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿತು.
ಸಿಐಡಿ ನಡೆಸಿರುವ ತನಿಖೆಯಲ್ಲಿ ಕೇವಲ ಅಧಿಕಾರಿಗಳ ಪಾತ್ರದ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ ಅಧಿಕಾರಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಇದಕ್ಕೆ ಬೆಂಗಾವಲಾಗಿ ನಿಂತಿದ್ದ ಕೆಲವು ಪ್ರಮುಖ ರಾಜಕಾರಣಿಗಳನ್ನು ತನಿಖೆಯ ವ್ಯಾಪ್ತಿಯಿಂದ ದೂರ ಇರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿತು.