ಬೆಂಗಳೂರು,
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಈ ಎಲ್ಲ ಇಲಾಖೆಗಳಲ್ಲಿ ಲಂಚಗುಳಿತನ ತಾಂಡವಾಡುತ್ತಿದೆ. ಇಂತಹ ಅಕ್ರಮಗಳ ವಿರುದ್ಧ ಹೌದೋ ಹುಲಿಯಾ ಎಂದು ಸಮರ ಸಾರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೌದೋ ಇಲಿಯಾ ಎಂಬಂತಾಗಿದ್ದಾರೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೇ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಳೆಎಳೆಯಾಗಿ ಸದನದಲ್ಲಿ ಬಿಡಿಸಿಟ್ಟರು.
ಭ್ರಷ್ಟಾಚಾರ ಮತ್ತು ಕಮಿಷನ್ ಆರೋಪದ ವಿರುದ್ಧ ಸಮರ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೀಗ ಕಮಿಷನ್ ಮತ್ತು ಭ್ರಷ್ಟಾಚಾರದ ದಾಸನಾಗಿದೆ ಎಲ್ಲ ಇಲಾಖೆಗಳಲ್ಲಿ ಹೆಗ್ಗಣಗಳೇ ತುಂಬಿಹೋಗಿವೆ ಇವುಗಳನ್ನು ಎದುರಿಸಬೇಕಾದ ಮುಖ್ಯಮಂತ್ರಿಗಳು ಇಲಿಯಾಗಿ ಬಿಲ ಸೇರಿದ್ದಾರೆ ಎಂದು ವ್ಯಂಗ್ಯವಾಡಿದರು.
ನಗರಾಭಿವೃದ್ಧಿ ಅಬಕಾರಿ ಕಂದಾಯ ವಿದ್ಯುತ್ ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಸಣ್ಣಪುಟ್ಟ ಕೆಲಸಗಳಿಗೂ ಜನಸಾಮಾನ್ಯರು ಲಂಚ ಕೊಟ್ಟು ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ಈ ಸರ್ಕಾರದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಬಗ್ಗೆ ಬಹಿರಂಗವಾಗಿಯೇ ವಿವರ ನೀಡುತ್ತಿದ್ದಾರೆ ಅಬಕಾರಿ ಗುತ್ತಿಗೆದಾರರು ಮಂತ್ರಿಗಳು ಮತ್ತು ಇಲಾಖೆಯ ಮುಖ್ಯಸ್ಥರಿಗೆ ನೀಡಬೇಕಾದ ಹಣದ ಬಗ್ಗೆ ಎಲ್ಲಾ ವಿವರ ನೀಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಕೂಡ ಕ್ರಮ ಕೈಗೊಳ್ಳಬೇಕಾದ ಮುಖ್ಯಮಂತ್ರಿಗಳು ಅಸಹಾಯಕ ರಾಗಿದ್ದಾರೆ ಎಂದು ಟೀಕಿಸಿದರು.
ಅಧಿಕಾರ ಹಸ್ತಾಂತರ ಮತ್ತು ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಜಗಳ ಮಿತಿಮೀರಿದೆ ಯಾರ ಮೇಲೂ ನಿಯಂತ್ರಣವಿಲ್ಲದೆ ಅಸಹಾಯಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಂದಿನ ಮೊನಚು ಕಳೆದುಕೊಂಡು ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ ಅಧಿಕಾರಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ ಭ್ರಷ್ಟಾಚಾರದ ಗ್ರಾಫ್ ದಿನದಿಂದ ದಿನಕ್ಕೆ ಮೇಲ್ಮಟ್ಟಕ್ಕೆ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಂದಾಯ ಇಲಾಖೆಯಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ದೊಡ್ಡ ಮಟ್ಟದ ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಕಂದಾಯ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಗೆ ಸೀಮಿತವಾಗಿದ್ದಾರೆ. ಯಾವುದೇ ಇಲಾಖೆಯಲ್ಲೂ ಲಂಚ ಕೊಡದೆ ಕೆಲಸ ಆಗುತ್ತಿಲ್ಲ. ಜನಸಾಮಾನ್ಯರ ಸಂಕಷ್ಟವನ್ನು ಕೇಳುವರೇ ಇಲ್ಲದಂತಾಗಿದೆ ಎಂದು ದೂರಿದರು.
ಸಂಪನ್ಮೂಲ ಕ್ರೂಡೀಕರಣ ದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಅಭಿವೃದ್ಧಿ ಯೋಜನೆಗಳು ಮರೀಚಿಕೆಯಾಗಿವೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿಶೇಷ ಯೋಜನೆಗಳಿಗೆ ಮೀಸಲಾಗಿಟ್ಟ ಹಣವನ್ನು ಕೂಡ ಗ್ಯಾರಂಟಿಗಳಿಗೆ ವೆಚ್ಚ ಮಾಡುವ ಮೂಲಕ ಈ ಸಮುದಾಯದ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಆಡಳಿತ ಯಂತ್ರ ಕುಸಿದಿದ್ದು ಸಂಪನ್ಮೂಲ ಕ್ರೋಡೀಕರಣ ದಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಗತ್ಯವಾಗಿ ಕೇಂದ್ರ ಸರ್ಕಾರದಲ್ಲಿ ವಿರುದ್ಧ ಆರೋಪ ಮಾಡುವ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಅವಶ್ಯಕತೆ ಇಲ್ಲದೆ ಇದ್ದರೂ ಕೂಡ ಕೇಂದ್ರದ ವಿರುದ್ಧ ಸಮರ ಘೋಷಣೆ ಮಾಡುವ ಮೂಲಕ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿದ್ದರಿಂದಾಗಿ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ರೈಲು ಯೋಜನೆಯ ಸೇರಿದಂತೆ ಹಲವಾರು ಯೋಜನೆಗಳು ಅನುಷ್ಠಾನಕ್ಕೆ ಬಂದವು. ಇದರಿಂದ ಕರ್ನಾಟಕ ಅಭಿವೃದ್ಧಿಯತ್ತ ನಾಗಾಲೋಟದಿಂದ ಸಾಗಿತು. ವಸ್ತು ಸ್ಥಿತಿ ಹೀಗಿರುವಲ್ಲಿ ಕಾಲು ಕೆರೆದು ಜಗಳವಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದರು.
ಕಾಂಗ್ರೆಸ್ನವರಿಗೆ ರಾಮನ ಕಂಡರೆ ಸಹ್ಯವಾಗುವುದಿಲ್ಲ. ಅದಕ್ಕಾಗಿ ವಿಕಸಿತ ಭಾರತ, ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ವಿಬಿಜಿ ರಾಮ್ ಜಿ) ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ 12 ಪುಟಗಳಷ್ಟು ವಿಬಿಜಿ ರಾಮ್ಜಿ ಯೋಜನೆಯನ್ನು ಟೀಕಿಸಲು ಬಳಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆಯಾಗಿದೆ
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದರೆ ಇವರಿಗೆ ಕೋಪ ಬರುತ್ತದೆ. ಆದರೆ ಸಿದ್ದರಾಮಯ್ಯನವರು
ಇದುವರೆಗೂ ಏಳು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿರುವುದು ಯಾರು ಎಂದರೆ ಅದು ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು
ಮಾಡಿರುವ ಸಾಲವನ್ನು ತೀರಿಸಲು ಆಗುತ್ತಿಲ್ಲ. ಹೀಗಿರುವಾಗ ಆರ್ಥಿಕ ಶಿಸ್ತು ಎಲ್ಲಿಂದ ಬರುತ್ತದೆ, ಬದನೆಕಾಯಿ ಎಂದು ವಾಗ್ದಾಳಿ ನಡೆಸಿದ ಅವರು, ಆರ್ಥಿಕ ಸ್ಥಿತಿ ಸರಿಯಾಗಿದ್ದರೆ ಗೃಹಲಕ್ಷ್ಮೀ ಯೋಜನೆಯ 2025 ರ ಫೆಬ್ರವರಿ ಕಂತಿನ 5 ಸಾವಿರ ಕೋಟಿ ಹಣ ಎಲ್ಲಿ ಹೋಯಿತು. ಅನ್ನಭಾಗ್ಯಕ್ಕೂ ಕನ್ನ ಹಾಕಿದ್ದಾರೆ. ಕಳೆದ ವರ್ಷದ ಜನವರಿಯ ಅನ್ನಭಾಗ್ಯದ 657 ಕೋಟಿ ರೂಪಾಯಿ ಬಿಡುಗಡೆಯಾಗಿಲ್ಲ ಎಂದು ಅಂಕಿ ಅಂಶಗಳನ್ನು ಬಿಡಿಸಿಟ್ಟರು.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೋಡೆತ್ತುಗಳು ಎಂದೆಲ್ಲಾ ಹೇಳುತ್ತಿದ್ದರು. ಈಗ ಕುಂಟೆತ್ತುಗಳಾಗಿದ್ದಾರೆ. ಇವರಿಬ್ಬರು ಒಂದೊಂದು ದಾರಿಯಲ್ಲಿ ಓಡಿ ಹೋಗಿದ್ದಾರೆ ಇದೊಂದು ಇಲ್ಲಗಳ ಸರ್ಕಾರ ಎಂದು ಟೀಕಿಸಿದರು
ಆಡು ಮುಟ್ಟಿದ ಸೊಪ್ಪಿಲ್ಲ ಎಂಬಂತೆ ಈ ಸರ್ಕಾರ ಲೂಟಿ ಮಾಡದ ಇಲಾಖೆ ಇಲ್ಲ. ಜನ ಕೆಲಸ ಆಗಿಲ್ಲವೆಂದು, ಗುತ್ತಿಗೆದಾರರು ಹಣ ಬಿಡುಗಡೆಯಾಗಿಲ್ಲವೆಂದು, ಅಂಗನವಾಡಿ ಕಾರ್ಯಕರ್ತೆಯರು ವೇತನ ಬಿಡುಗಡೆಯಾಗಿಲ್ಲವೆಂದು ಪರದಾಡುತ್ತಿದ್ದರೆ, ಮಂತ್ರಿಗಳು ಹಣ ಮಾಡುವುದರಲ್ಲಿ ಮುಳುಗಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. ಖಜಾನೆ ಖಾಲಿ.. ಖಾಲಿ ಎಂದು ಹೇಳಿದ ಅವರು ಸದನಕ್ಕೆ ಬಂದು ಭಾಷಣ ಮಾಡಿದ ರಾಜ್ಯಪಾಲರಿಗೆ ನಾವು ವಂದನೆ ಸಲ್ಲಿಸುತ್ತೇವೆ ಆದರೆ ಅವರ ಬಾಯಲ್ಲಿ ಹೇಳಿಸಿದ ಭಾಷಣಕ್ಕೆ ಯಾವುದೇ ಬೆಲೆ ನೀಡುವುದಿಲ್ಲ ಎಂದು ಹೇಳಿದರು.
Previous Articleನಿರ್ಮಲಾ ಬಜೆಟ್- ಜಿಡಿಪಿಯತ್ತ ಕಣ್ಣು, ಬಡವನ ಹೊಟ್ಟೆಗೆ..?
Next Article ನೇಪಾಳಿ ಗ್ಯಾಂಗ್ ಇದೆ ಹುಷಾರ್!

