ಬೆಂಗಳೂರು,ಅ.20-
ಮೀಸಲಾತಿ ಹೆಚ್ಚಳ ಸಂಬಂಧ ರಾಜ್ಯ ಸರ್ಕಾರ
ಮಹತ್ವದ ನಿರ್ಧಾರ ಕೈಗೊಂಡಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಬಮೀಸಲಾತಿ ಹೆಚ್ಚಳ ತೀರ್ಮಾನವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಿದೆ.
ಸರ್ಕಾರದ ಈ ತೀರ್ಮಾನದಿಂದ ಇನ್ನು ಮುಂದೆ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಶೇ.15ರಿಂದ 17 ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಶೇ.3ರಿಂದ 7ಕ್ಕೆ ಹೆಚ್ಚಳವಾಗಲಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಂವಿಧಾನದ ಪರಿಚ್ಛೇದ 14,15 ಹಾಗೂ 35 ಸೇರಿ ಎಲ್ಲವನ್ನೂ ಕೂಲಕಂಷವಾಗಿ ಪರಿಶೀಲಿಸಿ ಸುಗೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.ಯಾವುದೇ ಸಮುದಾಯದ ಮೀಸಲಾತಿಯನ್ನು ಕಿತ್ತು ಹಾಕುವುದಾಗಲಿ, ಇಲ್ಲವೇ ರದ್ದುಪಡಿಸಿಲ್ಲ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದವರೆಗೆ ಶೇ.10ರಷ್ಟು ಮೀಸಲಾತಿ ಕೊಡಲು ಅನುಸರಿಸಿದ ಮಾನದಂಡವನ್ನೇ ಇಲ್ಲಿಯೂ ಅಳವಡಿಸಿದ್ದೇವೆ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಅವರು ರಾಜ್ಯಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದ್ದಾರೆ. ಅದರಂತೆ ನಾವು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಸುಗ್ರೀವಾಜ್ಞೆ ಹೊರಡಿಸಿದ ತಕ್ಷಣ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಯಾರೊಬ್ಬರೂ ಭಾವಿಸಬೇಕಾಗಿಲ್ಲ. ಅದರ ರಕ್ಷಣೆ ಪಡೆಯುವುದಕ್ಕಾಗಿಯೇ ಸಂವಿಧಾನದ ಷೆಡ್ಯುಲ್ 9ಗೆ ತಿದ್ದುಪಡಿ ಮಾಡಬೇಕು. ಈ ತಿದ್ದುಪಡಿ ಆಗಬೇಕಾದರೆ ಸಂಸತ್ತಿನಲ್ಲಿ ಮೂರನೆ ಎರಡರಷ್ಟು ಬಹುಮತದಿಂದ ಅಂಗೀಕಾರವಾಗಬೇಕು. ಇದಕ್ಕೆ ಸಾಕಷ್ಟು ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ ಎಂದು ತಿಳಿಸಿದರು
Previous Articleಈ ಬಾರಿ ಚುನಾವಣೆಯಲ್ಲಿ ಗೆಲ್ಲೋದೆ ಇವರು!
Next Article ಖರ್ಗೆ ಅಧ್ಯಕ್ಷರಾದರು..ಮುಂದೇನು..?