ಬೆಂಗಳೂರು,
ಅಧಿಕಾರ ಹಂಚಿಕೆ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದೆ ಅಧಿಕಾರ ಹಸ್ತಾಂತರದ ಬಗ್ಗೆ ಒಪ್ಪಂದ ಏರ್ಪಟ್ಟಿರುವುದು ನಿಜ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತಬಣದ ಶಾಸಕ ಶಿವಗಂಗಾ ಬಸವರಾಜ್, ಹೈಕಮಾಂಡ್ ಈ ವಿಚಾರದಲ್ಲಿ ಕೂಡಲೇ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾವು ಸೇರಿದಂತೆ 40 ರಿಂದ 50 ಮಂದಿ ಯುವ ಶಾಸಕರು ಡಿಕೆ ಶಿವಕುಮಾರ್ ಅವರ ಜೊತೆಗೆ ಪ್ರಬಲವಾಗಿ ಗುರುತಿಸಿಕೊಂಡಿದ್ದೇವೆ ಅವರು ಹೇಳಿದರೆ ಪ್ರಾಣ ಕೊಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸಿನ ಎಲ್ಲಾ 139 ಶಾಸಕರು ಡಿಕೆ ಶಿವಕುಮಾರ್ ಅವರ ಜೊತೆಗೆ ಇದ್ದಾರೆ ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಒಪ್ಪಂದ ಆಗಿದೆ. ಇಲ್ಲ ಎಂದು ಹೇಳಲು ಯತೀಂದ್ರ ಸಿದ್ದರಾಮಯ್ಯ ಯಾರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಿಂದ ಯಾರೇ ಮುಖ್ಯಮಂತ್ರಿಯಾದರೂ ಪಕ್ಷದ ಶಾಸಕರಾಗಿರುವ ನನ್ನ ಮತ ಬೇಕೇಬೇಕು ಆದರೆ ಯತೀಂದ್ರ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಅವರ ಮತ ಲೆಕ್ಕಕ್ಕೆ ಇಲ್ಲ ಹೀಗಾಗಿ ಅವರ ಮಾತುಗಳಿಗೂ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.
ಅಧಿಕಾರ ಹಂಚಿಕೆ ಕುರಿತಾಗಿ ಮಾತನಾಡಿದ ನನಗೆ ಹೈಕಮಾಂಡ್ ಶೋಕಾಸ್ ನೀಡಿದೆ ಅದಕ್ಕೆ ನಾನು ಉತ್ತರ ಕೂಡ ನೀಡಿದ್ದೇನೆ ಆದರೂ ಕೂಡ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಕೂಡ ಹೈಕಮಾಂಡ್ ಗಮನಿಸುತ್ತಿದೆ ನಮ್ಮ ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿದೆ ಹೈಕಮಾಂಡ್ ವಿರುದ್ಧ ಮಾತನಾಡಿದ ಮಂತ್ರಿಯನ್ನೇ ಸಂಪುಟದಿಂದ ವಜಾ ಗೊಳಿಸಿದೆ ಹೀಗಿರುವಾಗ ಯತಿಂದ್ರ ಸಿದ್ದರಾಮಯ್ಯ ಅವರ ವಿರುದ್ಧವು ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ಅಧಿಕಾರ ಹಂಚಿಕೆ ಕುರಿತಾಗಿ ಯತೀಂದ್ರ ಸಿದ್ದರಾಮಯ್ಯ ಅವರು ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ ಈ ವಿಚಾರದ ಬಗ್ಗೆ ಮಾತನಾಡಲು ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ವೇಣುಗೋಪಾಲ್ ಇದ್ದಾರೆ ಎಂದು ತಿಳಿಸಿದರು.
ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಒಂದು ವೇಳೆ ಆಗಿಲ್ಲ ಎನ್ನುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಲಿ ಅದರ ನಂತರ ನಾವು ಈ ವಿಚಾರದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

