ಬೆಂಗಳೂರು,
ಅಧಿಕಾರ ಹಸ್ತಾಂತರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಕಿಡಿ ಕಾರಿರುವ ರಾಮನಗರ ಕ್ಷೇತ್ರದ ಶಾಸಕ ಹಾಗೂ ಡಿಕೆ ಶಿವಕುಮಾರ್ ಅವರ ಆಪ್ತ ಇಕ್ಬಾಲ್ ಹುಸೇನ್ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದೆ. ತಂದೆ ಪರವಾಗಿ ಈ ರೀತಿ ಪದೇ ಪದೇ ಮಾಡುವುದು ಅಸಹ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇರೆ ನಾಯಕರು ಮಾತನಾಡಿದರೆ ಒಂದು ಬೆಲೆ ಇರುತ್ತದೆ. ಆದರೆ, ಅಪ್ಪನಿಗೆ ಮಗನ ಮೇಲೆ ಹಾಗೂ ಮಗನಿಗೆ ಅಪ್ಪನ ಮೇಲೆ ಪ್ರೀತಿ ಇರುತ್ತದೆ” ಎಂದು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ಅವರಲ್ಲಿ ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಪದೇ ಪದೇ ಮಾತನಾಡುತ್ತಾ ನಮ್ಮನ್ನು ಪ್ರಚೋದಿಸಬೇಡಿ ಎಂದು ಹೇಳಿದರು.
ದೇವರಾಜು ಅರಸು ಬಳಿಕ ದಲಿತರ ಪರವಾಗಿ ಶೋಷಿತರ ಪರವಾಗಿ ಸಿದ್ದರಾಮಯ್ಯ ಅಳಿಲು ಸೇವೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೂ ಅವಕಾಶ ಮಾಡಿಕೊಡಬೇಕು. ಈ ಅವದಿಯಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು” ಎಂದು ಇಕ್ಬಾಲ್ ಹುಸೇನ್ ಆಗ್ರಹಿಸಿದರು.
ಪರಿಷತ್ ಸದಸ್ಯ ಯತೀಂದ್ರಗೆ ನೋಟಿಸ್ ನೀಡದೇ ಇರುವ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿ, “ನಾನು ಶಾಸಕನಾಗಿದ್ದೇನೆ. ಯತೀಂದ್ರ ಅವರು ವಿಧಾನ ಪರಿಷತ್ ಸದದ್ಯರಾಗಿದ್ದಾರೆ. ನಾಯಕತ್ವ ವಿಚಾರವಾಗಿ ನಾನು ಈ ಹಿಂದೆ ಮಾತನಾಡಿದಾಗ ನನಗೆ ನೋಟಿಸ್ ನೀಡಲಾಗಿತ್ತು. ಹಾಗಾಗಿ ಸದ್ಯ ಬೆಳವಣಿಗೆ ಗಮನಿಸಿದರೆ ಯಾರು ನೋಟಿಸ್ ನೀಡುವ ಜವಾಬ್ದಾರಿ ಹೊಂದಿದ್ದಾರೋ, ಅವರು ಇದನ್ನೆಲ್ಲಾ ಗಮನಿಸಬೇಕು” ಎಂದರು.
ಯತೀಂದ್ರ ಅವರು ನಾಯಕತ್ವ ಬದಲಾವಣೆಯ ಬಗ್ಗೆ ಹೇಳಿಕೆ ಕೊಟ್ಟರೂ ಏಕೆ ಅವರಿಗೆ ನೋಟಿಸ್ ಕೊಡಲಿಲ್ಲ ಎಂದು ಪ್ರಶ್ನಿಸಲು ಆಗುವುದಿಲ್ಲ. ಹತ್ತು ನೋಟಿಸ್ ನೀಡಿದರೂ ಕೂಡ ನಾನು ಒಂದೇ ಉತ್ತರ ನೀಡೋದು. ಡಿಕೆ ಶಿವಕುಮಾರ್ ಅವರು ಒಂದು ಬಾರಿ ಸಿಎಂ ಆಗಬೇಕು ಅನ್ನೋದಷ್ಟೆ ಉದ್ದೇಶ” ಎಂದು ಸ್ಪಷ್ಟಪಡಿಸಿದರು.
ಎರಡೂವರೆ ವರ್ಷ ಆದ ಮೇಲೆ ಸಾಕಷ್ಟು ಶಾಸಕರು ಒಬ್ಬ ನಿಷ್ಠಾವಂತ ಪಕ್ಷ ನಿಷ್ಠ ವ್ಯಕ್ತಿ ಸಿಎಂ ಆಗಬೇಕು ಎಂದು ಡಿಕೆ ಶಿವಕುಮಾರ್ ಪರವಾಗಿ ಮಾತನಾಡಿದ್ದೇವೆ. ಅವರ ಹೋರಾಟ ಶ್ರಮಕ್ಕೆ ಬೆಲೆ ಸಿಗಬೇಕು ಅಂತ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಡಿಕೆಶಿ ಪರವಾಗಿ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ನಾಯಕತ್ವ ಬದಲಾವಣೆ ಮುಗಿದು ಹೋದ ಅಧ್ಯಾಯ. ಹೈಕಮಾಂಡ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ನಾಯಕತ್ವ ಬದಲಾವಣೆ ಮಾಡಲು ಕೆಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಆದರೆ, ಈಗಾಗಲೇ ಈ ಬಗ್ಗೆ ಹೈಕಮಾಂಡ್ ಸ್ಪಷ್ಟವಾಗಿ ತಿಳಿಸಿದೆ. ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿಯೇ ಮುಂದುವರಿಯಲಿದ್ದಾರೆ” ಎಂದಿದ್ದರು.

