ಬೆಂಗಳೂರು,
ಶಕ್ತಿಸೌಧ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ ಅದೂ ಕೂಡ ರಾಜ್ಯದ ಅತ್ಯಂತ ಪ್ರಭಾವಿ ಸಚಿವರೊಬ್ಬರ ಕಚೇರಿಯ ಆವರಣದಲ್ಲೇ ಈ ಕಳ್ಳತನ ನಡೆದಿದೆ.
ಈ ಕುರಿತು ತನಿಖೆ ನಡೆಸಿದ ವಿಧಾನಸೌಧ ಪೊಲೀಸರು ಡಿ ದರ್ಜೆ ನೌಕರರೊಬ್ಬರನ್ನು ಬಂಧಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ನವೀನ್ ಎಂಬವರು ಕೆಲಸದ ನಿಮಿತ್ತ ಬಂದಿದ್ದರು.
ಈ ವೇಳೆ ಅವರು ತಮ್ಮ ಜೊತೆ ತಂದಿದ್ದ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ಹಣವಿದ್ದ ಬ್ಯಾಗ್ ಅನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡು ಕುಳಿತಿದ್ದರು.ತಮ ಕೆಲಸ ಮುಗಿದ ನಂತರ ನವೀನ್ ಅವರು ಬ್ಯಾಗ್ ತೆಗೆದುಕೊಳ್ಳದೇ ಮರೆತು ಬಿಟ್ಟು ಹೋಗಿದ್ದಾರೆ.
ನಂತರ ಬ್ಯಾಗ್ ನೆನಪಾಗಿದೆ. ಅದನ್ನು ತೆಗೆದುಕೊಳ್ಳಲು ಬಂದಾಗ ಕಚೇರಿಯ ಸಮಯ ಮುಗಿದಿದ್ದರಿಂದ ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದಾರೆ ಇದಾದ ಬಳಿಕ ನವೀನ್ ಅವರು ಮಾರನೇ ದಿನ ವಿಧಾನಸೌಧಕ್ಕೆ ಬಂದು ಬ್ಯಾಗ್ ಇಟ್ಟಿದ್ದ ಸ್ಥಳದಲ್ಲಿ ನೋಡಿದಾಗ ಬ್ಯಾಗ್ ಇರಲಿಲ್ಲ.
ಇದರಿಂದ ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಧಾನಸೌಧ ಪಡಸಾಲೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭದ್ರತಾ ಸಿಬ್ಬಂದಿ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ, ವಿಧಾನಸೌಧದ ಆಡಳಿತ ಮತ್ತು ಭದ್ರತಾ ಸಿಬ್ಬಂದಿ ಸುಧಾರಣೆ ಇಲಾಖೆಯ ಡಿ ಗ್ರೂಪ್ ನೌಕರ ಆ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರು ಆ ನೌಕರನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

