ಬೆಂಗಳೂರು,ಫೆ.15:
ಹಾಸನ ಜಿಲ್ಲೆಯ ಬೇಲೂರು ನಿವಾಸಿ ಪ್ರಿಯಾಂಕಾ (29) ನಾಪತ್ತೆ ಪ್ರಕರಣ ಇದೀಗ ಹೊಸ ರೂಪ ಪಡೆದುಕೊಂಡಿದೆ.ಈ ಮಹಿಳೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿರುವಾಗಲೇ ಆಕೆ ಕುಣಿಗಲ್ ನಲ್ಲಿ ಪತ್ತೆಯಾಗಿದ್ದಾರೆ.
ಪ್ರಿಯಾಂಕಾ ಫೆ.12ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಿದ್ದ ಸಂಬಂಧಿಕರ ಮದುವೆಗೆಂದು ಹೋಗಿದ್ದರು.ಈ ವೇಳೆ ಅವರು
ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿಕೊಂಡು ಹೋಗಿದ್ದರು.
ಅಂದು ರಾತ್ರಿ 7.30ರ ಸುಮಾರಿಗೆ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಯಾರೋ ಒಬ್ಬರ ಜೊತೆಯಲ್ಲಿ ನಾನು ಸಿಕ್ಕಿದ್ದೇನೆ ಎಂದು ಹೇಳಿದ ನಂತರ ಆಕೆಯ ಮೊಬೈಲ್ ಸ್ಥಗಿತಗೊಂಡಿತ್ತು.
ಇದರಿಂದ ಗಾಬರಿಯಾದ ಕುಟುಂಬಸ್ಥರು ಬೇಲೂರು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ನಡುವೆ ಬೇಲೂರು ಕೆರೆ ಬಳಿ ಈಕೆಯ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು.ಇದರಿಂದ ಯಾರೋ ದುಷ್ಕರ್ಮಿಗಳು ಇವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರಾದರೂ ಮಹಿಳೆಯ ಶವ ಪತ್ತೆಯಾಗಿರಲಿಲ್ಲ. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಆದರೆ ತನಿಖೆ ವೇಳೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಹಾಸನ ಜಿಲ್ಲಾ ಪೊಲೀಸರ ತಾಂತ್ರಿಕ ಮಾಹಿತಿ ಮತ್ತು ಆಕೆಯ ಮೊಬೈಲ್ ಕರೆಗಳ ವಿವರಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಪ್ರಿಯಾಂಕಾ ಜೀವಂತವಾಗಿದ್ದು, ತಾನು ಕೊಲೆಯಾಗಿರುವಂತೆ ಬಿಂಬಿಸಲು ಪೂರ್ವಯೋಜಿತವಾಗಿ ಆಕೆಯ ನಾಟಕವಾಡಿರುವುದು ಬೆಳಕಿಗೆ ಬಂದಿದೆ.
ಬೇಲೂರು ನಿವಾಸಿಯಾದ ಪ್ರಿಯಾಂಕಾಳನ್ನು ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿದೆ.
ಈಕೆ ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ವಾಸವಿದ್ದ ಪತಿಯ ಸ್ನೇಹಿತ ಬಿಹಾರ ಮೂಲದ ಡೇವಿಡ್ನ ಪರಿಚಯವಾಗಿದೆ. ಆತ ಪಟ್ಟಣದ ಕಾರ್ಖಾನೆಯೊಂದರಲ್ಲಿ ಮ್ಯಾನೇಜರ್ ಆಗಿದ್ದಾನೆ. ತದನಂತರದಲ್ಲಿ ಡೇವಿಡ್ನೊಂದಿಗೆ ಆಕೆ ಸ್ನೇಹ ಬೆಳೆಸಿದ್ದಾಳೆ. ಇದು ನಂತರ ಪ್ರೇಮಕ್ಕೆ ತಿರುಗಿತ್ತು ಆದರೆ ವಿಷಯ ಕುಟುಂಬದವರ ಗಮನಕ್ಕೆ ಬಂದಿಲ್ಲ.
ಡೇವಿಡ್ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಆಕೆ, ಆತನೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದಲೇ ಕುಟುಂಬದಿಂದ ದೂರವಾಗಲು ಈ ಯೋಜನೆ ರೂಪಿಸಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರಿಗೂ ತಿಳಿಯದಂತೆ ಬಿಹಾರಕ್ಕೆ ತೆರಳಲು ಇಬ್ಬರೂ ಸಿದ್ಧತೆ ಮಾಡಿಕೊಂಡಿದ್ದರು.
ಸದ್ಯ ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಕುಣಿಗಲ್ನಲ್ಲಿ ಪತ್ತೆಯಾಗಿದ್ದು, ಪೊಲೀಸರ ವಶದಲ್ಲಿದ್ದಾಳೆ.

