ಬೆಂಗಳೂರು,ಆ.22-
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಈಗ ಬೆಂಗಳೂರು ಪೊಲೀಸರು ಷರತ್ತು ವಿಧಿಸಿದ್ದಾರೆ.
ಐಪಿಎಲ್ ಕಾಲ್ತುಳಿತದ ಕಹಿ ನೆನಪಿನ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಕ್ರೀಡಾಂಗಣವನ್ನು ಮರುಮೌಲ್ಯಮಾಪನ ಮಾಡಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಯೋಗ್ಯವೆಂದು ಘೋಷಿಸುವ ಮೊದಲು 17 ಷರತ್ತುಗಳನ್ನು ಪಾಲಿಸಲು ಎಂದು ರಾಜ್ಯ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಕಳೆದ ಜೂನ್ನಲ್ಲಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಇಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆಯುತ್ತಿಲ್ಲ.
ಕಾಲ್ತುಳಿತ ಸಂಬಂಧ ಇತ್ತೀಚೆಗೆ ಇದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗ, ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಲೀಗ್ ಆಯೋಜನೆಗೆ ಅಗತ್ಯವಿರುವ ಅನುಮತಿಯನ್ನು ಪೊಲೀಸ್ ಇಲಾಖೆ ನಿರಾಕರಿಸಿದೆ.
ಕೆಲ ದಿನಗಳ ಹಿಂದೆ ಪೊಲೀಸ್ ಇಲಾಖೆ ಕ್ರೀಡಾಂಗಣದ ಪರಿಶೀಲನೆ ನಡೆಸಿದ್ದು, ಹಲವು ಲೋಪಗಳನ್ನು ಪತ್ತೆ ಹಚ್ಚಿದೆ. ಈ ಬಗ್ಗೆ ಕೆಎಸ್ಸಿಎಗೆ ಪತ್ರ ಬರೆದಿರುವ ಇಲಾಖೆ, ಪಾರ್ಕಿಂಗ್, ವೈದ್ಯಕೀಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸರಿಪಡಿಸುವಂತೆ ಸೂಚಿಸಿ, ಅದಕ್ಕೆ 15 ದಿನಗಳ ಗಡುವು ನೀಡಿದೆ ಎಂದು ತಿಳಿದು ಬಂದಿದೆ.
ಷರತ್ತುಗಳ ವಿವರ:
*ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಬೇಕು.
*ವೀಕ್ಷಕರಿಗೆ ಪ್ರತ್ಯೇಕ ಮಾರ್ಗಗಳು.
*ಎಲ್ಲಾ ದ್ವಾರಗಳಲ್ಲಿ ಬ್ಯಾಗ್ ಸ್ಕ್ಯಾನರ್ಗಳನ್ನು ಅಳವಡಿಕೆ.
* ಕ್ರೀಡಾಂಗಣದ ಪಾಲುದಾರರು ಪೊಲೀಸ್ ಪರಿಶೀಲನಾ ಪ್ರಮಾಣಪತ್ರವನ್ನು ಪಡೆಯಬೇಕು.
*ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರವೇಶ.
* ಶಾಶ್ವತ ವೈದ್ಯಕೀಯ ಸೌಲಭ್ಯಗಳು.
*ಅಗ್ನಿಶಾಮಕ ಉಪಕರಣಗಳು, ವಿದ್ಯುತ್ ಉಪಕರಣಗಳು ಮತ್ತು ಸಂಪರ್ಕಗಳ ಲೆಕ್ಕಪರಿಶೋಧನೆ.
*ಆಟಗಾರರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರ.
* ಪ್ರೇಕ್ಷಕರ ಮೇಲೆ ನಿಗಾ ಇಡಲು ವಿಶೇಷ ತಂತ್ರಜ್ಞಾನ ಬಳಕೆ.
* ಕ್ರೀಡಾಂಗಣದ ಗೇಟ್ಗಳ ಗಾತ್ರ ಹೆಚ್ಚಳ. *ಕ್ರೀಡಾಂಗಣದ ಬಳಿ ಜನಸಂದಣಿ ತಪ್ಪಿಸಲು ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನಿರ್ಮಿಸಬೇಕು.
ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆ ಬೆಂಗಳೂರು ಪೊಲೀಸ್ ಷರತ್ತು
Previous Articleತಿಮರೋಡಿ ಗೆ ಖೆಡ್ಡಾ
Next Article ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !