ನವದೆಹಲಿ,ಮೇ.28-
ದೇಶದ ಆರು ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಸೇರಿ 15 ಕಡೆಗಳಲ್ಲಿ ಏಕಕಾಲದ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಯ ಅಧಿಕಾರಿಗಳು ಭಾರೀ ಮಾನವ ಕಳ್ಳಸಾಗಣೆ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಲಕ್ಕೆ ಸಂಬಂಧಿಸಿದಂತೆ ಐವರು ಖತರ್ನಾಕ್ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿರುವ ಎನ್ ಐಎ ತಂಡ ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತೀಯ ಯುವಕರನ್ನು ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢಯ ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿದರು.
ಈ ಸಂಬಂಧ ವಡೋದರದ ಮನೀಶ್ ಹಿಂಗು, ಗೋಪಾಲ್ಗಂಜ್ನ ಪಹ್ಲಾದ್ ಸಿಂಗ್, ನೈಋತ್ಯ ದೆಹಲಿಯ ನಬಿಯಾಲಂ ರೇ, ಗುರುಗ್ರಾಮದ ಬಲ್ವಂತ್ ಕಟಾರಿಯಾ ಮತ್ತು ಚಂಡೀಗಢದ ಸರ್ತಾಜ್ ಸಿಂಗ್ ನನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ
ಆರೋಪಿಗಳು ಕಾನೂನುಬದ್ಧ ಉದ್ಯೋಗದ ಸುಳ್ಳು ಭರವಸೆಯ ಮೇಲೆ ಭಾರತೀಯ ಯುವಕರನ್ನು ವಿದೇಶಿ ದೇಶಗಳಿಗೆ ಕಳ್ಳಸಾಗಣೆ ಮಾಡುವ ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಎನ್ ಐ ಎ ತನಿಖೆಯಲ್ಲಿ ತಿಳಿದುಬಂದಿದೆ.
ಯುವಕರು ಲಾವೋಸ್, ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (ಎಸ್ ಇಝಡ್), ಮತ್ತು ಕಾಂಬೋಡಿಯಾದ ಇತರ ಸ್ಥಳಗಳಲ್ಲಿ ನಕಲಿ ಕಾಲ್ ಸೆಂಟರ್ಗಳಲ್ಲಿ ಕೆಲಸ ಮಾಡಲು ಬಲವಂತ ಮಾಡಲಾಗುತ್ತದೆ. ಈ ಕಾಲ್ ಸೆಂಟರ್ ಮುಖ್ಯವಾಗಿ ವಿದೇಶಿ ಪ್ರಜೆಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ವಾರಗಳ ಹಿಂದೆ ಕೇರಳದಲ್ಲೂ ಇಂತಹದ್ದೇ ಒಂದು ಜಾಲವನ್ನು ಸಿಬಿಐ ಬಯಲಿಗೆಳೆದಿತ್ತು. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್ಗೆ ಮಾನವ ಕಳ್ಳಸಾಗಾಟ ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಬಂಧಿಸಿತ್ತು.
Previous Articleಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದ ಮಹಿಳೆ ಸಾವು
Next Article ಪ್ರಜ್ವಲ್ ಹೆಜ್ಜೆ ಜಾಡು ಬೆನ್ನು ಹತ್ತಿದ SIT.