ಬೆಂಗಳೂರು.
ರಸ್ತೆ ಅಪಘಾತ ಪ್ರಕರಣದಲ್ಲಿ ಸಂತ್ರಸ್ತರ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನು ಕಳೆದ ಐದು ವರ್ಷದಿಂದ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಬಸ್ ಜಪ್ತಿ ಮಾಡಲಾಗಿದೆ.
ಕೋರ್ಟ್ ಸಿಬ್ಬಂದಿ ಕೊಪ್ಪಳ ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣಕ್ಕೆ ತೆರಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಯ್ದಿದ್ದಾರೆ.
ಗಂಗಾವತಿ ಕೇಂದ್ರ ಬಸ್ ನಿಲ್ದಾಣಕ್ಕೆ ವಕೀಲರಾದ ಗೋವಿಂದರಾಜು, ಕವಿತಾ ನೇತೃತ್ವದಲ್ಲಿ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿಗಳಾದ ಯಸೂಫ್ ಮಿಯಾ, ರಮೇಶ, ಉಸ್ಮಾನ್, ಸೈಯದ್ಖಾದರ್, ವೆಂಕಟೇಶ ಇತರರು, ಕೊಪ್ಪಳ ಘಟಕಕ್ಕೆ ಸೇರಿದ ವಾಹನವನ್ನು ಜಪ್ತಿ ಮಾಡಿಕೊಂಡು ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಕೀಲ ಗೋವಿಂದು, ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಸುರೇಶ ಮತ್ತು ಗಾಯಾಳು ನರಸಪ್ಪ ಎಂಬ ಇಬ್ಬರಿಗೆ ನ್ಯಾಯಾಲಯವು 55 ಲಕ್ಷ ಮೊತ್ತದ ಪರಿಹಾರಕ್ಕೆ ಆದೇಶಿಸಿದೆ. ಇನ್ನುಳಿದ ಗಾಯಾಳುಗಳ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದೆ.
ಇದೀಗ 55 ಲಕ್ಷ ಮೊತ್ತದ ಪರಿಹಾರಕ್ಕೆ ಸಾರಿಗೆ ಇಲಾಖೆಯ ವಾಹನ ಜಪ್ತಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಪರಿಹಾರದ ಮೊತ್ತ ಪಾವತಿಸದೇ ಹೋದಲ್ಲಿ ಜಪ್ತಿ ಮಾಡಿದ ವಾಹನವನ್ನು ನ್ಯಾಯಾಲಯ ಹರಾಜು ಮಾಡಲಿದೆ.
ನಿರೀಕ್ಷಿತ ಪರಿಹಾರದ ಮೊತ್ತ ಸಿಗದಿದ್ದಲ್ಲಿ ಬಾಕಿ ಮೊತ್ತಕ್ಕೆ ಮತ್ತೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದರು.
2018ರಲ್ಲಿ ಗಂಗಾವತಿ ತಾಲೂಕಿನ
ಮರಳಿ ಮತ್ತು ಜಂಗಮರ ಕಲ್ಗುಡಿ ಮಧ್ಯೆ ಇರುವ ಟೋಲ್ಗೆಟ್ ಸಮೀಪ ರಸ್ತೆ ಅಪಘಾತ ಸಂಭವಿಸಿತ್ತು.ಇದರಲ್ಲಿ ಜಂಗಮರ ಕಲ್ಗುಡಿ ಗ್ರಾಮದ ಸುರೇಶ ಬಸಪ್ಪ ಹೊಸೂರು (25) ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಇದೇ ಘಟನೆಯಲ್ಲಿ ನರಸಪ್ಪ ಗಿಡ್ಡಪ್ಪ ಮಂಗಳಾಪುರ, ಯಮನೂರಪ್ಪ ಲಿಂಗಪ್ಪ ಬಾಲವಂಚಿ, ಹನುಮಂತ ಕಲ್ಗುಡಿ ಎಂಬುವವರಿಗೆ ತೀವ್ರ ಗಾಯಗಳಾಗಿದ್ದವು. ಮೃತ ಸುರೇಶನ ಕುಟುಂಬಕ್ಕೆ 45 ಲಕ್ಷ ಹಾಗೂ ನರಸಪ್ಪ ಎಂಬ ಗಾಯಾಳುವಿಗೆ 10 ಲಕ್ಷ ಪಾವತಿ ಮಾಡುವಂತೆ 2019ರಲ್ಲಿ ಇಲ್ಲಿನ ಸಿವಿಲ್ ನ್ಯಾಯಾಲಯ ಆದೇಶ ಮಾಡಿತ್ತು.
ಆದರೆ, ಕಳೆದ ಐದು ವರ್ಷದಿಂದ ಯಾವುದೇ ಪರಿಹಾರ ನೀಡಲು ಸಾರಿಗೆ ಇಲಾಖೆ ಮುಂದಾಗದ ಹಿನ್ನೆಲೆಯಲ್ಲಿ ನ್ಯಾಯಾಲವು, ಈಶಾನ್ಯ ಸಾರಿಗೆ ಸಂಸ್ಥೆಗೆ ಯಾವುದೇ ವಾಹನ, ವಸ್ತುಗಳನ್ನು ಜಪ್ತಿ ಮಾಡಿಕೊಂಡು ಬರುವಂತೆ ಸಿಬ್ಬಂದಿಗೆ ಆದೇಶ ನೀಡಿತ್ತು
Previous Articleಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಶಾಸಕ
Next Article ನಾಲ್ಕು ಲಕ್ಷಕ್ಕೆ ಮಗು ಮಾರಾಟ