ಬೆಂಗಳೂರು,ಮೇ.14:
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಆರೋಪ ಪ್ರತ್ಯಾರೋಪದ ರಾಜಕಾರಣ ಆರಂಭವಾಗಿದೆ. ಚುನಾವಣೆ ಸಮಯದಲ್ಲಿ ತಮ್ಮ ವಿಡಿಯೋ ಡೀಪ್ ಫೇಕ್ ಮಾಡಲಾಗಿದೆ ಎಂದು ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಆಪಾದಿಸಿದ್ದಾರೆ
ಈ ಸಂಬಂಧ ರಾಜ್ಯದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿರುವ ಅವರು ಡೀಪ್ ಫೇಕ್ ಮೂಲಕ ಅಕ್ರಮವೆಸಗಿರುವ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ನಾನು ಮಾಡಿದ ಪ್ರಚಾರವನ್ನೇ ಈಗ ಮಾಡಿರುವಂತೆ ಬಿಂಬಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಬಿ.ವೈ.ರಾಘವೇಂದ್ರ ಅವರು ನನ್ನದು ಮತ್ತು ನರೇಂದ್ರಮೋದಿ ಅವರ ಭಾವಚಿತ್ರವಿರುವ ಫೇಕ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ ಎಂದು ಹೇಳಿದರು.
ಈಗ ನಡೆದಿರುವ ಚುನಾವಣೆಗೂ, ಅವರು ಬಿಡುಗಡೆ ಮಾಡಿರುವ ವಿಡಿಯೋಗೂ ಸಂಬಂಧವಿಲ್ಲ. ನಾನು ಜೀವನದಲ್ಲಿ ಇಂತಹ ತಪ್ಪು ಮಾಡುವುದಿಲ್ಲ ಎಂದು ನಾನು ಹೇಳಿದ ಹಾಗೇ ಮಾಡಿದ್ದಾರೆ. ನಾನು ಬಿಜೆಪಿ ಕುಟುಂಬ ರಾಜಕಾರಣದಿಂದ ಹೊರಗೆ ಬರಬೇಕು, ಹಿಂದುತ್ವ ಪ್ರತಿಪಾದಿಸಿ ಸ್ಫರ್ಧಿಸಿದ್ದೆ ಎಂದು ಹೇಳಿದರು
ನನ್ನ ಸ್ಪರ್ಧೆಯಿಂದ ತಮ್ಮ ಸೋಲು ನಿಶ್ಚಿತ ಎಂದು ಭಾವಿಸಿದ ರಾಘವೇಂದ್ರ ಅವರು ಡೀಪ್ ಫೇಕ್ ವಿಡಿಯೋ ಮೂಲಕ ಚುನಾವಣಾ ಕಣದಿಂದ
ಈಶ್ವರಪ್ಪ ಹಿಂದೆ ಸರಿದಿದ್ದಾರೆ. ನನಗೆ ಬೆಂಬಲಿಸಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ.ಇದು ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು 6 ವರ್ಷ ಉಚ್ಚಾಟನೆ ಮಾಡಿದರು .ಬಳಿಕ ಯಡಿಯೂರಪ್ಪ ಅವರ ಮನೆಗೆ ಹೋಗಿ ಕರೆದುಕೊಂಡು ಬಂದು ಸೀಟು ಕೊಟ್ಟರು. ಈ ಉಚ್ಛಾಟನೆ ನಾನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನಾನು ಮೋದಿ ಪರ ಕೈ ಎತ್ತುತ್ತೇನೆ. ರಾಘವೇಂದ್ರ ಲಿಂಗಾಯತರ ಹೆಸರಲ್ಲಿ ಓಟು ಕೇಳಿದರು ಮಧು ಬಂಗಾರಪ್ಪ ಈಡಿಗರ ಹೆಸರಲ್ಲಿ ಓಟು ಕೇಳಿದರು ಜಾತಿ ಹೆಸರಿನಲ್ಲಿ ಮತ ಕೇಳಿದ ಇವರಿಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದರು.
Previous Articleಡಿಕೆ ಶಿವಕುಮಾರ್ ಅವರ ಗುರಿ ಏನು ಗೊತ್ತಾ.?
Next Article ಕುಮಾರಣ್ಣ ತಿಮಿಂಗಿಲ ಹಿಡಿದು ಬಡಿದು ನುಂಗಲಿ.!

