ಹಣವನ್ನು ದ್ವಿಗುಣ ಮಾಡಿಕೊಡುತ್ತೇವೆ ಎಂದು ನಂಬಿಸಿ ವಂಚಿಸಿ ಪರಾರಿಯಾಗುತ್ತಿದ್ದ 10 ಮಂದಿ
ಖದೀಮರನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ನಂಜುಂಡ ಆರಾಧ್ಯ, ಶ್ರೀನಿವಾಸ, ಸಲೀಂ ಉಲ್ಲಾಖಾನ್, ಕೆಂಪರಾಜು, ಸಾಜಿದ್ ಅಹಮದ್, ಮಂಜುನಾಥ್, ಶ್ರೀನಿವಾಸ್ರೆಡ್ಡಿ, ರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ನಂಜುಂಡ ಆರಾಧ್ಯ ಐದು ವರ್ಷಗಳ ಹಿಂದೆ ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ಮದ್ದೂರಿನ ಪೊಲೀಸರಿಗೆ ಅತಿಥಿಯಾಗಿದ್ದ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಯಾಗಿ ಬಂದು ಗ್ಯಾಂಗ್ ಕಟ್ಟಿಕೊಂಡು ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ನಂಬಿಸಿ ವಂಚಿಸುತ್ತಿದ್ದರು. ಬಂಧಿತರಿಂದ 4,2 ಲಕ್ಷ ನಗದು 1 ಕಾರು, 1 ಬೈಕ್ ಹಾಗೂ 8 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹಣದ ಬಗ್ಗೆ ಅತಿ ಆಸೆ ಇರುವವರನ್ನು ಗುರಿಯಾಗಿಸಿಕೊಂಡು ಬಂಧಿತರ ಗ್ಯಾಂಗ್ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆಂದು ನಂಬಿಸಿ ಲಕ್ಷಾಂತರ ರೂ.ವನ್ನು ಲಪಟಾಯಿಸಿಕೊಂಡು ಜನರಿಗೆ ಪಂಗನಾಮ ಹಾಕುತ್ತಿದ್ದ ಖದೀಮರನ್ನು ಮದ್ದೂರು ಪೊಲೀಸರು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.
ಕಳೆದ ಮೇ 3 ರಂದು ಮದ್ದೂರಿನ ಉಪ್ಲಿನಕೆರೆ ಗೇಟ್ ಬಳಿ ತುಮಕೂರು ಮೂಲದ ಕಿರಣ್ ಮತ್ತು ಪ್ರದೀಪ್ ಅವರಿಗೆ ನಿಮ್ಮ ಹಣವನ್ನು ಡಬಲ್ ಮಾಡಿಕೊಡುತ್ತೇವೆಂದು ಈ ಗ್ಯಾಂಗ್ ಕರೆಸಿತ್ತು. ನಂತರ ಸ್ಥಳಕ್ಕೆ 5.50 ಲಕ್ಷ ರೂ. ತೆಗೆದುಕೊಂಡು ಸ್ಥಳಕ್ಕೆ ಬಂದ ಕಿರಣ್ ಮತ್ತು ಪ್ರದೀಪ್ಗೆ ಆಘಾತವೊಂದು ಕಾದಿತ್ತು. ಇವರು 5.50 ಲಕ್ಷ ಇರುವ ಬ್ಯಾಗ್ನ್ನು ಆ ಖದೀಮರ ಗ್ಯಾಂಗ್ ನೀಡಿದ ನಂತರ, ಆ ಖರ್ತನಾಕ್ ಕಳ್ಳರು ಇವರಿಗೊಂದು ಬ್ಯಾಗ್ ನೀಡಿ 10 ಲಕ್ಷ ಇದೆ ಎಂದು ಪರಾರಿಯಾಗಿದ್ದರು.
ನಂತರ ಆ ಬ್ಯಾಗ್ ತೆಗೆದು ನೋಡಿದ ಮೇಲೆ ಆ ಬ್ಯಾಗ್ನ ಮೇಲ್ಭಾಗದಲ್ಲಿ 500 ಮತ್ತು 200 ಮುಖ ಬೆಲೆಯ ನೋಟುಗಳು ಅಡಿಯಲ್ಲಿ ನೋಟ್ ಪುಸ್ತಕಗಳು ಮಾತ್ರ ಇತ್ತು. ನಂತರ ನಾವು ಮೋಸ ಹೋಗಿದ್ದೇವೆ ಎಂದು ತಿಳಿದ ಕಿರಣ್ ಮತ್ತು ಪ್ರದೀಪ್ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲು ಮಾಡಿಕೊಂಡ ಮದ್ದೂರು ಪೊಲೀಸರು ಎಸ್ಪಿ ಯತೀಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು ಮೊಬೈಲ್ ಲೋಕೇಶನ್ ಆಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.