ಕ್ರೇಜಿಸ್ಟಾರ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಮೊದಲಬಾರಿ ನಾಯಕನಾಗಿ ಅಭಿನಯಿಸಿರುವ ತ್ರಿವಿಕ್ರಮ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ನಿರ್ದೇಶಕರುಗಳಾದ ಸಂತೋಷ್ಆನಂದ್ರಾಮ್, ಚೇತನ್ಕುಮಾರ್ ಕಲಾವಿದರುಗಳಾದ ಶರಣ್, ಶಿವಮಣಿ, ತಾರಾ ಮುಂತಾದವರು ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು. ಇವರೆಲ್ಲರೂ ರವಿಚಂದ್ರನ್ ಬೆಳೆದು ಬಂದ ರೀತಿಯನ್ನು ನೆನಪು ಮಾಡಿಕೊಂಡು ಮಗನು ಅದೇ ಮಟ್ಟಕ್ಕೆ ಬರಲೆಂದು ಆಶಿಸಿದರು. ನಂತರ ಮಾತನಾಡಿದ ನಿರ್ದೇಶಕ ಸಹನಾಮೂರ್ತಿ ಮುಂದಿನ ಚಿತ್ರಕ್ಕಾಗಿ ಕಥೆಯನ್ನು ಸಿದ್ದ ಮಾಡಿಕೊಂಡು ಒಂದಷ್ಟು ಮಂದಿಗೆ ಹೇಳಿದ್ದೆ. ಕೊನೆಗೆ ಗೆಳಯ ಸೋಮಣ್ಣ ಕಥೆ ಕೇಳಿ ನಾನೇ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಮುಂದೆ ಒಂದು ವರ್ಷ ಇದರ ಸಿದ್ದತೆಗಳು ನಡೆದವು. ಅರ್ಜುನ್ಜನ್ಯಾ, ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಬಂದರು. ರೂಪುರೇಶೆಗೆ ಕೇರಳ ಪ್ರವಾಸವೂ ಇಟ್ಟುಕೊಂಡಾಯಿತು. ಕೊರೋನಾ ಬರುವ ಮುಂಚೆಯೇ ಸಿದ್ದಗೊಂಡ ಚಿತ್ರವೆಂದು ಮಾಹಿತಿ ನೀಡಿದರು.
ನನ್ನ ಚಿತ್ರಕ್ಕೆ ಪುನೀತ್ ಹಾಡಿದ್ದಾರೆ. ಆದರೆ ಅವರ ಗೀತೆ ಚಿತ್ರದಲ್ಲಿ ಇರುವುದಿಲ್ಲ. ಅದೇ ಹಾಡನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುವುದು. ತನಗೆ ಹೀರೋ ಪಾತ್ರ ಮಾಡಲು ಅವಕಾಶ ಬಂದಿದೆ ಎಂದಾಗ ಮೊದಲು ಕಥೆ ಹೇಳು ಅಂದ್ರು. ಕಥೆಯನ್ನು ಇಷ್ಟಪಟ್ಟು ನಿನಗಾಗಿ ಗೀತೆ ಹಾಡ್ತೇನೆ. ಅದನ್ನು ಮಾಡಿ ಮುಹೂರ್ತಕ್ಕೂ ಬಂದು ಬೆನ್ನುತಟ್ಟಿದ್ರು. ನಾನು ಕುಟುಂಬದಲ್ಲಿ ಮೂರನೇ ತಲೆಮಾರಿನ ಚಿತ್ರೋದ್ಯಮದ ನಂಟನ್ನು ಹೊಂದಿದ್ದೇನೆ. ಸೋದರ ಮನುರಂಜನ್ರವಿಚಂದ್ರನ್ ನನಗೂ ರವಿಚಂದ್ರನ್ ಮಕ್ಕಳು ಎಂದು ಗೌರವ ಕೊಡುತ್ತಾರೆ. ಈ ವಿಷಯದಲ್ಲಿ ಖಂಡಿತಾ ಹೆಮ್ಮೆ ಇದೆ. ನಮ್ಮ ಕನಸುಗಳು ದೊಡ್ಡದಿದೆ. ಅದರಲ್ಲಿ ಮುಖ್ಯವಾದುದು ತನ್ನತನವನ್ನು ತೋರಿಸಬೇಕು. ನಿರ್ಮಾಪಕರನ್ನು ತಾನು ಬದುಕಿನುದ್ದಕ್ಕೂ ನೆನೆಯುತ್ತೇನೆಂದು ನಾಯಕ ವಿಕ್ರಂರವಿಚಂದ್ರನ್ ಮಾತಿಗೆ ವಿರಾಮಹಾಕಿದರು.
ಚಿತ್ರದ ಪೂರ್ವ ಸಿದ್ದತೆಗಾಗಿಯೇ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದೇನೆ. ಜೂನ್ 24ರಂದು ತೆರೆಗೆ ಬರಲಿದೆ. ನಿಮ್ಮ ಸಹಕಾರ ಬೇಕೆಂದು ನಿರ್ಮಾಪಕ ಸೋಮಣ್ಣ ಕೋರಿಕೊಂಡರು. ಸಾಧುಕೋಕಿಲ ಮರುಭೂಮಿಯಲ್ಲಿ ಶೂಟಿಂಗ್ ಇದ್ದ ಸಮಯದಲ್ಲಿ ಕುದುರೆಯಿಂದ ಮಣ್ಣಿಗೆ ಮಗುಚಿಕೊಂಡ ಅನುಭವವನ್ನು ಹೇಳಿಕೊಂಡು ನಗಿಸಿದರು. ನಾಯಕಿ ಆಕಾಂಕ್ಷಶರ್ಮ ಕಡಿಮೆ ಸಮಯ ತೆಗೆದುಕೊಂಡರು.