ಬೆಂಗಳೂರು,ಏ.25-
ಕುಖ್ಯಾತ ಭೂಗತ ಪಾತಕಿ ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯ ನಿಜವಾದ ಕಾರಣ ಬಹಿರಂಗಗೊಂಡಿದೆ.
ಪ್ರಕರಣದ ಬೆನ್ನತ್ತಿದ್ದ ಪೊಲೀಸರು, ವಾರದ ಬಳಿಕ ರಿಕ್ಕಿ ಅಂಗರಕ್ಷಕ ಮೊನ್ನಪ್ಪ ವಿಠ್ಠಲನನ್ನು ಬಂಧಿಸಿದ್ದಾರೆ.
ಮೂರು ದಶಕದಿಂದ ರೈ ಕುಟುಂಬದ ಅಂಗರಕ್ಷಕನಾಗಿ ಕೆಲಸ ಮಾಡಿಕೊಂಡು ಬಂದಿರುವ ಕೊಡಗು ಮೂಲದ ಮೊನ್ನಪ್ಪ, ರಿಕ್ಕಿಯನ್ನು ಎತ್ತಿ ಆಡಿಸಿ ಬೆಳೆಸಿರುವ ವ್ಯಕ್ತಿ ಕೂಡ. ವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕೆ ಬಿಡದಿ ಬಳಿಯ ಮನೆಯ ಭದ್ರತೆಯ ಜವಾಬ್ದಾರಿಯನ್ನು ಮೊನ್ನಪ್ಪಗೆ ರಿಕ್ಕಿ ನೀಡಿದ್ದರು
ವಿಚಾರಣೆ ವೇಳೆ
ಮೊನ್ನಪ್ಪ ವಿಠಲ್ ,ರಿಕ್ಕಿ ರೈ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ.
ಪೊಲೀಸರು ಆತನಿಂದ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಇದರೊಂದಿಗೆ, ರಿಕ್ಕಿ ರೈ ಶೂಟೌಟ್ನ ನಾಟಕವಾಡುತ್ತಿದ್ದಾನಾ ಎನ್ನುವ ಅನುಮಾನಕ್ಕೆ ಪುಷ್ಟಿದೊರೆತಂತಾಗಿದೆ.
ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ಹಾಗೂ ಉದ್ಯಮಿ ರಿಕ್ಕಿ ರೈ ಮೇಲೆ ಕಳೆದ ಏ.18 ರಂದು ಬಿಡದಿ ಬಳಿ ಫೈರಿಂಗ್ ನಡೆದಿತ್ತು. ರಾತ್ರಿ 11:30ರ ಸುಮಾರಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರಿಕ್ಕಿ ಮೂಗು ಹಾಗೂ ಕೈಗಳಿಗೆ ಗಾಯಗಳಾಗಿತ್ತು. ಬಳಿಕ ಆತನನ್ನು ಬೆಂಗಳೂರಿನ ಹೆಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸರಿಗೆ ಶೂಟೌಟ್ ನಡೆದ ಸ್ಥಳದಲ್ಲಿ ಸಿಕ್ಕಿರುವ ಬುಲೆಟ್, ವಿಠಲ್ ಬಳಿ ಇದ್ದ ಗನ್ನ ಬುಲೆಟ್ ಎಂದು ಗೊತ್ತಾಗಿತ್ತು. ಪೊಲೀಸರು ಈತನ ಗನ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಸ್ಪಷ್ಟ ತೀರ್ಮಾನ ನೀಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗನ್ ಅನ್ನು ಕಳುಹಿಸಿದ್ದರು.
ತಜ್ಞ ವರದಿ ಇನ್ನೂ ಬರಬೇಕಾಗಿದೆ. ಮುತ್ತಪ್ಪ ರೈ ಬಳಿ ಗನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವಿಠಲ್ ಕೆಲಕಾಲ ರಿಕ್ಕಿ ರೈಗೂ ಗನ್ಮ್ಯಾನ್ ಆಗಿದ್ದ. ಆರೋಗ್ಯ ಸರಿ ಇಲ್ಲದ ಕಾರಣ ಗನ್ ಮ್ಯಾನ್ ಕೆಲಸ ಬಿಟ್ಟು ಮನೆಯಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಮುತ್ತಪ್ಪ ರೈ ಸಾಯುವ ಮುನ್ನ ಈತನಿಗೆ ನಿವೇಶನ ನೀಡುವುದಾಗಿ ಹೇಳಿದ್ದರು. ಆದರೆ, ರಿಕ್ಕಿ ರೈ ಸೈಟ್ ಕೊಡಲು ನಿರಾಕರಿಸಿದ್ದ. ಈ ಕಾರಣಕ್ಕೆ ವಿಠಲ್ ಕೋಪಗೊಂಡಿರಬಹುದು ಎಂದು ಮೊದಲು ಸಂಶಯಿಸಲಾಗಿತ್ತು.
ಈ ನಡುವೆ, ರಿಕ್ಕಿ ರೈ ಗನ್ ಮ್ಯಾನ್ ನೀಡಿದ ದೂರಿನಲ್ಲಿ ಮೂವರನ್ನು ಹೆಸರಿಸಿದ್ದು, ಮೂವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಇವರ ಪಾತ್ರ ದೃಢಪಡಿಸಲು ಯಾವುದೇ ಸಾಕ್ಷಿ ಕಂಡುಬಂದಿಲ್ಲವಾದ್ದರಿಂದ ಯಾರನ್ನೂ ಬಂಧಿಸಿಲ್ಲ. ಮುತ್ತಪ್ಪ ರೈ ಮಾಜಿ ಸಹಚರ, ಮೊದಲ ಆರೋಪಿ ರಾಕೇಶ್ ಮಲ್ಲಿ ಹಾಗೂ ಮೂರನೇ ಆರೋಪಿ ನಿತೀಶ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳಿಸಲಾಗಿದೆ. ಎರಡನೇ ಆರೋಪಿ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ವಿದೇಶದಲ್ಲಿದ್ದಾರೆ.
ಮುತ್ತಪ್ಪ ರೈ ಮಗ ತನಗೆ ತಾನೇ ಗುಂಡು ಹಾರಿಸಿಕೊಂಡನಾ.?
Previous Articleಬೆಂಗಳೂರಲ್ಲಿ ಕಳ್ಳತನ -ಗೋವಾದಲ್ಲಿ ಮಜಾ
Next Article ನಟಿ ರನ್ಯಾ ರಾವ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ?
