ಬೆಂಗಳೂರು:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಅಖಿಲ ಭಾರತ ವೈದ್ಯಕೀಯ ಸಂಸ್ಥೆ (AIMS) ಯಲ್ಲಿ ಹುದ್ದೆ ಕೊಡಿಸಲು ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ (NMC)ಯ ಸದಸ್ಯತ್ವ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಲಂಚದ ಹಣ ಪಡೆದಿದೆ ಎಂದು JDS ಆರೋಪಿಸಿದೆ. ಈ ಕುರಿತಾದ ದಾಖಲೆ ಬಿಡುಗಡೆ ಮಾಡಿದ ವಿಧಾನ ಪರಿಷತ್ ನ ಜೆಡಿಎಸ್ ನಾಯಕ ಭೋಜೇಗೌಡ (Bhoje Gowda) ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯಕ್ಕೆ ಗೊತ್ತಾಗಬೇಕಿದೆ. ತಾವು ಶುದ್ಧರು, ಪರಿಶುದ್ಧರು ಎಂದು ಬೊಬ್ಬಿರಿದು ಹೇಳುವ ಅವರ ಕರ್ಮಕಾಂಡ ಇಲ್ಲಿದೆ ನೋಡಿ' ಎಂದು ಹೇಳಿದರು.
‘ಪ್ರಹ್ಲಾದ್ ಜೋಶಿಯವರು ನಮ್ಮ ಪಕ್ಷದ ಬಗ್ಗೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D. Deve Gowda) ರ ಕುಟುಂಬದ ಕುರಿತು ಲಘುವಾಗಿ ಮಾತಾಡಿದ್ದಾರೆ. ಆದರೆ, ತಮ್ಮ ಕಚೇರಿಯಲ್ಲಿ ನಡೆದಿರುವ ಈ ಕಳ್ಳ ವ್ಯವಹಾರದ ಬಗ್ಗೆ ಕೇಂದ್ರ ಸಚಿವರು ಏನು ಹೇಳುತ್ತಾರೆ' ಎಂದು ಅವರು ಪ್ರಶ್ನಿಸಿದರು. ‘ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಕೇಂದ್ರದ ಸರಕಾರದ ಹುದ್ದೆಗಳನ್ನು ಕಾಸಿಗಾಗಿ ಬಿಕರಿಗಿಡಲಾಗಿದೆ. ಹಣವನ್ನು ಎರಡು ಬಾರಿ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳಲಾಗಿದೆ' ಎಂದು ಆರೋಪಿಸಿದರು.
ಬ್ಯಾಂಕ್ ಖಾತೆಯ ವಿವರಗಳನ್ನು ಹಾಗೂ ಅಂದಿನ ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ (Dr. Harsh Vardhan) ಅವರು ಪ್ರಹ್ಲಾದ್ ಜೋಶಿ ಅವರಿಗೆ ಬರೆದಿದ್ದ ಪತ್ರವೊಂದನ್ನು ಕೂಡ ಬಿಡುಗಡೆ ಮಾಡಿದರು. ‘ಕೇಂದ್ರದ ಆರೋಗ್ಯ ಸಚಿವರು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಅವರ ಸಂಪುಟ ಸಹೋದ್ಯೋಗಿ ಆಗಿದ್ದ ಪ್ರಹ್ಲಾದ್ ಜೋಶಿ ಅವರ ಕಚೇರಿಗೆ ಹಣ ತಲುಪಿಸಲಾಗಿದೆ' ಎಂದು ದೂರಿದರು.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡಿದ ಅವರು, ‘ಈ ಹಣವನ್ನು ಯಾರು ಯಾರಿಗೆ ಕೊಟ್ಟಿದ್ದಾರೆ, ಕಾಸಿಗಾಗಿ ಹುದ್ದೆ ಮಾರಾಟ ಮಾಡಿಕೊಂಡ ಈ ಬಹುಕೋಟಿ ಹಗರಣದ ನಿಜವಾದ ಕಿಂಗ್ ಪಿನ್ ಯಾರು? ಇದರಲ್ಲಿ ಪ್ರಹ್ಲಾದ್ ಜೋಶಿ ಅವರ ಪಾತ್ರ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ' ಎಂದು ಆಗ್ರಹಿಸಿದರು.
‘ಈ ವ್ಯವಹಾರದಲ್ಲಿ ಒಟ್ಟು ಎರಡೂವರೆ ಕೋಟಿ ರೂಪಾಯಿ ಹಣ ಸಂದಾಯ ಆಗಿದೆ. ಈ ಹಣವನ್ನು ಯಾರಿಗೋಸ್ಕರ, ಯಾರು, ಯಾರಿಂದ ಹಣ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಹ್ಲಾದ್ ಜೋಶಿ ಉತ್ತರ ಕೊಡಬೇಕಿದೆ' ಎಂದರು. ‘ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (NMC) ನಲ್ಲಿ ಮೆಂಬರ್ ಮಾಡ್ತೀವಿ ಅಂತ ಹಣ ಪಡೆದಿದ್ದಾರೆ. ಹಾಗೆಯೇ, ಏಮ್ಸ್ ಡೈರಕ್ಟರ್ ಮಾಡ್ತೀನಿ ಅಂತ ಹಣ ಪಡೆಯಲಾಗಿದೆ. ಅಂದಿನ ಕೇಂದ್ರದ ಆರೋಗ್ಯ ಸಚಿವರು ಪ್ರಹ್ಲಾದ್ ಜೋಶಿ ಅವರಿಗೆ ಬರೆದಿರುವ ಪತ್ರಕ್ಕೂ ಹಾಗೂ ಈ ಹಣ ಸಂದಾಯಕ್ಕೂ ಇರುವ ಲಿಂಕ್ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆಗ್ರಹಪಡಿಸಿದರು.
‘ಇದೇ ಪ್ರಕರಣದ ಬಗ್ಗೆ ಇನ್ನೂ ಹಲವಾರು ದಾಖಲೆಗಳು ಇವೆ. ಈ ದಾಖಲೆಗಳು ಕೇವಲ ಸ್ಯಾಂಪಲ್ ಮಾತ್ರ. ಇನ್ನೂ ಸ್ವಲ್ಪ ದಿನದಲ್ಲೇ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡ್ತೀವಿ' ಎಂದು ಅವರು ತಿಳಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (C M Ibrahim), ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರಮೇಶ್ ಗೌಡ (H. M. Ramesh Gowda) ಈ ಸಂದರ್ಭದಲ್ಲಿ ಇದ್ದರು.