ಬೆಂಗಳೂರು,ಜು.20- ನಗರ ಸೇರಿದಂತೆ ರಾಜ್ಯಾದ್ಯಂತ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದರುವ ಶಂಕಿತ ಐವರು ಬಳಿ ವಾಕಿಟಾಕಿ ಪತ್ತೆಯಾಗಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆಗಳಲ್ಲಿ ವಾಕಿಟಾಕಿ ಬಳಕೆ ಮಾಡಲಾಗುತ್ತದೆ ಕಾಡಿನಲ್ಲಿ ತರಬೇತಿ ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡಗಳ ಮೇಲೆ ದಾಳಿ ಮಾಡಿದಾಗ ಜಾಮರ್ ಬಳಕೆ ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮೊಬೈಲ್ ಸಿಗ್ನಲ್ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ವೇಳೆ ವಾಕಿಟಾಕಿ ಬಳಕೆ ಮಾಡಲಾಗುತ್ತದೆ.
ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರ ಅಸಲಿ ಸಂಚು ಏನಿತ್ತು ಎನ್ನುವುದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಮುಂದಿನ ಹಂತದಲ್ಲಿ ಎನ್ಐಎ ತನಿಖೆ ನಡೆಸುವ ಸಾಧ್ಯತೆಗಳಿವೆ.
ಲಕ್ಷ ಲಕ್ಷ ಫಂಡಿಂಗ್:
ರಾಜ್ಯ ರಾಜಧಾನಿಯಲ್ಲಿ ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ಶಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸಿ ಸಾಕಿ ಸಲುಹುತ್ತಿದ್ದು ಲಕ್ಷ ಲಕ್ಷ ಫಂಡಿಂಗ್ ಮಾಡುತ್ತಿದ್ದು ಜೊತೆಗೆ ಏನೇನು ಮಾಡಬೇಕು ಎನ್ನುವುದರ ತರಬೇತಿ ನೀಡುತ್ತಾ ನಗರದಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ ಎಂದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನ ಗುರುತಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಎರಡು ಮೂರು ದಿನ ತಡ ಮಾಡಿದ್ದರೇ ನಗರದ ಕೆಲವು ಕಡೆ ಸ್ಫೋಟಗೊಳಿಸಲು ತಯಾರಿ ಮಾಡಿಕೊಂಡಿದ್ದರು. ಇದೀಗ ಶಂಕಿತರ ಗ್ಯಾಂಗ್ ಲೀಡರ್ ಜುನೈದ್ ತಲೆ ಮರೆಸಿಕೊಂಡಿದ್ದು ಅವನ ಬೇಟೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.