ಬೆಂಗಳೂರು,ಜೂ.10:
ಜಾತಿವಾರು ಜನಗಣತಿ ಕುರಿತಂತೆ ರಾಜ್ಯದ ಪ್ರಭಾವಿ ಸಮುದಾಯಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸೇರಿದಂತೆ ಇತರೆ ಸಮುದಾಯದ ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ. ರಾಜ್ಯದಲ್ಲಿ ಮತ್ತೊಮ್ಮೆ ಜಾತಿವಾರು ಜನಗಣತಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿರುವ ಜಾತಿವಾರು ಜನಗಣತಿ ಎಂದೆ ಗುರುತಿಸಲ್ಪಡುತ್ತಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತಾದ ವರದಿ ಅನುಷ್ಠಾನಕ್ಕೆ ಈ ತಿಂಗಳ 12ರಂದು ವಿಶೇಷ ಸಂಪುಟ ಸಭೆ ಕರೆದಿರುವ ಬೆನ್ನಲ್ಲೇ ಹೈಕಮಾಂಡ್ ಈ ಸೂಚನೆ ನೀಡಿದೆ.
ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನ ಕುರಿತಂತೆ ಚರ್ಚಿಸಲು ವಿಶೇಷ ಸಂಪುಟ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬುಲಾವ್ ನೀಡಿದ ಹೈಕಮಾಂಡ್ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿತು.
ಈ ಸಭೆಯ ಬಳಿಕ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ಸುದ್ದಿಗಾರರೊಂದಿಗೆ ಮಾತನಾಡಿ ಜಾತಿವಾರು ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಆರ್ಥಿಕ ಗಣತಿಯನ್ನು ಪಕ್ಷ ತಾತ್ವಿಕವಾಗಿ ಒಪ್ಪಿಕೊಂಡಿದೆ. ಜೂನ್ 12 ರಂದು ಈ ವರದಿಯ ಅನುಷ್ಠಾನ ಕುರಿತಂತೆ ವಿಶೇಷ ಸಭೆ ಕರೆಯಲಾಗಿದೆ ಈ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಹೈಕಮಾಂಡ್ ಬದ್ಧವಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ರಾಜ್ಯ ಸರ್ಕಾರ ನಡೆಸಿರುವ ಸಮೀಕ್ಷೆಗೆ 10 ವರ್ಷವಾಗಿದೆ ಹೀಗಾಗಿ ಇದರಲ್ಲಿನ ಜಾತಿವಾರು ಜನಸಂಖ್ಯೆ, ಸಮರ್ಪಕವಾಗಿಲ್ಲ ಎಂದು ಹಲವಾರು ಸಂಘಟನೆಗಳು ಮತ್ತು ನಾಯಕರು ಅಪಸ್ವರ ವ್ಯಕ್ತಪಡಿಸಿದ್ದಾರೆ ಇದಕ್ಕೆ ಹೈಕಮಾಂಡ್ ಸಹ ಮತ ವ್ಯಕ್ತಪಡಿಸಿದೆ ಈ ಹಿನ್ನಲೆಯಲ್ಲಿ ರಾಜ್ಯದ ಜಾತಿವಾರು ಜನಸಂಖ್ಯೆಯ ಬಗ್ಗೆ ಮರುಗಣತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ ಎಂದು ಹೇಳಿದರು.
ಜಾತಿವಾರು ಜನಸಂಖ್ಯೆಯ ಕುರಿತು ಹಲವು ಸಮುದಾಯಗಳಲ್ಲಿ ಉಂಟಾಗಿರುವ ಅಪನಂಬಿಕೆಯನ್ನು ನಿವಾರಿಸುವ ದೃಷ್ಟಿಯಿಂದ ಇಂತಹ ಗಣತಿಯ ಅಗತ್ಯವಿದೆ. ಇದನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದ್ದು ಇದಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.