ಪಣಜಿ(ಗೋವಾ),ಫೆ.14- ಮಗನನ್ನು ಕೊಂದ ಬೆಂಗಳೂರಿನ ಸ್ಟಾರ್ಟಪ್ ಸುಚನಾ ಸೇಠ್ಗೆ (Suchana Seth) ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂದು ರಾಜ್ಯ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ನಾಲ್ಕು ವರ್ಷದ ಮಗನನ್ನು ಕೊಂದು ಸೂಟ್ಕೇಸ್ನಲ್ಲಿ ಶವ ತುಂಬಿದ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯ ಸಿಇಓ ಯಾವುದೇ ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ.
ಇನ್ಸ್ಟಿಟ್ಯೂಟ್ ಅಫ್ ಸೈಕಾಲಜಿ ಮತ್ತು ಹ್ಯೂಮನ್ ಬಿಹೇವಿಯರ್ ಸಂಸ್ಥೆಯಲ್ಲಿ ಫೆ.2 ರಂದು ಸೂಚನಾಳ ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿಯನ್ನು ಪೊಲೀಸರು ಕೋರ್ಟ್ ಎದುರು ಹಾಜರು ಪಡಿಸಿದ್ದು, ವರದಿಯ ಪ್ರಕಾರ ಸುಚನಾಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲವೆಂದು ಸಾಬೀತಾಗಿದೆ.
ಪತಿಯ ಮೇಲಿನ ಅತಿಯಾದ ಕೋಪ ಹೀಗೆ ಮಾಡಿಸಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾನಸಿಕ ಖಿನ್ನತೆಯಿಂದ ಆಕೆ ಈ ರೀತಿ ನಡೆದು ಕೊಂಡಿರಬಹುದು. ಮಗುವಿನ ಮೇಲೆ ಯಾವುದೇ ಕೋಪ ಇರಲಿಲ್ಲ ಅಂತ ಸುಚನಾ ತಂದೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.
ಸುಚನಾ ಸೇಠ್ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದಾಳೆ. ನನಗೆ ಯಾವುದೇ ತೊಂದರೆ ಇಲ್ಲ. ಇದುವರೆಗೂ ಮಾನಸಿಕ ಖಿನ್ನತೆಗೆ ಯಾವುದೇ ಚಿಕಿತ್ಸೆ ಪಡೆದಿಲ್ಲ ಎಂದು ಪೊಲೀಸರ ಮುಂದೆ ಉತ್ತರಿಸಿದ್ದಾಳೆ.
ನನಗೆ ಮಾನಸಿಕ ಖಿನ್ನತೆಯ ಯಾವುದೇ ಲಕ್ಷಣಗಳು ಇಲ್ಲ. ಕೆಲಸದ ಒತ್ತಡವಾಗಲಿ, ಕೌಟುಂಬಿಕ ಹಿನ್ನೆಲೆಯಾಗಲಿ ಇಲ್ಲ ಎಂದು ಉತ್ತರಿಸಿದ್ದಾಳೆ.
ಗೋವಾದಲ್ಲಿ ತನ್ನ 4 ವರ್ಷ ಮಗುವನ್ನು ಕೊಲೆ ಮಾಡಿ ಬ್ಯಾಗ್ನಲ್ಲಿಟ್ಟು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಸೂಚನಾಳನ್ನು ಚಿತ್ರದುರ್ಗದ ಬಳಿ ಪೊಲೀಸರು ಬಂಧಿಸಿದ್ದು, ಸುಚನಾ ನ್ಯಾಯಾಂಗ ಬಂಧನದಲ್ಲಿದ್ದಾಳೆ.