ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ ಸ್ಟೋನ್ ಕಟ್ಟಡ ನೆಲಸಮಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರ ವಿರೋಧಿಸಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಮೈಸೂರಿನ ಹೃದಯ ಭಾಗದಲ್ಲಿರುವ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆ,ಲ್ಯಾನ್ ಸ್ಟೋನ್ ಕಟ್ಟಡ ನೆಲಸಮ ಮಾಡಿ ಪುನರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಇವರ ಬೆಂಬಲಕ್ಕೆ ನಿಂತ ರಾಜವಂಶಸ್ಥ ಯದುವೀರ್, ಅಭಿವೃದ್ಧಿ ನೆಪದಲ್ಲಿ ಐತಿಹಾಸಿಕ ಕಟ್ಟಡಗಳ ನೆಲಸಮ ಬೇಡ ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಯದುವೀರ್ ಒಡೆಯರ್, ಮೈಸೂರಿನ ಪ್ರತಿಯೊಬ್ಬರ ಹೃದಯಕ್ಕೂ ಹತ್ತಿರವಾಗಿದೆ ಈ ದೇವರಾಜ ಮಾರುಕಟ್ಟೆ. ತಜ್ಞರೇ ಹೇಳಿದ್ದಾರೆ ದೇವರಾಜ ಮಾರುಕಟ್ಟೆಯನ್ನ ಸಂರಕ್ಷಿಸಬಹುದು ಅಂತ. ನಮ್ಮ ಪೂರ್ವಜರು ಕಟ್ಟಿದ ಪಾರಂಪರಿಕ ಕಟ್ಟಡಗಳನ್ನ ನೋಡಿ ನಾವು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರಿನ ಕಲೆ, ಇದನ್ನೇ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕಿದೆ. ಈ ಪರಂಪರೆಯನ್ನ ಕಾಪಾಡದಿದ್ರೆ ಮೈಸೂರಿನ ಐಡೆಂಟಿಟಿ ಉಳಿಯಲ್ಲ. ಮೈಸೂರಿನ ನಾಗರೀಕ ಸಮುದಾಯ ಆರಂಭವಾಗಿದ್ದು ದೇವರಾಜ ಮಾರುಕಟ್ಟೆಯಿಂದ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುತ್ತೆ ಅನ್ನೋ ವಿಶ್ವಾಸವಿದೆ. ಪಾರಂಪರಿಕ ಸಮಿತಿಯಲ್ಲಿ ಯಾರು ಇರಬೇಕಿತ್ತೋ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸಿ ಅನುಮೋದನೆ ಪಡೆಯಲಾಗಿದೆ. ಪಾರಂಪರಿಕ ಕಟ್ಟಡಗಳ ಉಳಿವಿಗೆ ಸದಾ ನನ್ನ ಬೆಂಬಲ ಇರುತ್ತೆ. ನೂರಕ್ಕೆನೂರು ನಾನು ನಿಮ್ಮ ಜೊತೆ ಇರ್ತೀನಿ ಎಂದು ಭರವಸೆ ನೀಡಿದರು.
ಹಾಗೆಯೇ ಮಾತು ಮುಂದುರೆಸಿದ ಯುದುವೀರ್, ಮೈಸೂರು ಅರಮನೆ ಕಟ್ಟಿ 100 ವರ್ಷದ ಮೇಲಾಗಿದೆ ಎಂದು ಅರಮನೆ ಕೆಡವಿ ಬೇರೆ ಕಟ್ಟಲು ಆಗುತ್ತಾ.? ಮೈಸೂರಿನ ಸಂಸ್ಕೃತಿ ಪಾರಂಪರಿಕ ಕಟ್ಟಡಗಳ ಜೊತೆ ಬೆರೆತಿದೆ. ನೂರು ವರ್ಷ ಆಗಿದೆ ಎಂದು ಕಟ್ಟಡಗಳನ್ನು ಹೊಡೆಯುತ್ತಾ ಹೋದರೆ ಪಾರಂಪರಿಕತೆ ಉಳಿಯುತ್ತಾ? ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ಕಟ್ಟಿದರೂ ಕೂಡಾ ಆ ಕಟ್ಟಡಕ್ಕೆ ಹಳೇ ಇತಿಹಾಸ ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ನಮ್ಮ ವಂಶದ ಖಾಸಗಿ ಆಸ್ತಿಗಳ ನವೀಕರಣ ಅದು ಬೇರೆ ವಿಚಾರ. ಆದರೆ ಸಾರ್ವಜನಿಕರ ಸ್ವತ್ತಿನ ಕಟ್ಟಡಗಳದ್ದು ಬೇರೆಯ ವಿಚಾರ. ಅರಮನೆಯ ಆಸ್ತಿಯ ವಿಚಾರಕ್ಕೂ ಸಾರ್ವಜನಿಕರ ಸ್ವತ್ತಿನ ಪಾರಂಪರಿಕ ಕಟ್ಟಡಗಳಿಗೂ ಸಂಬಂಧ ಕಲ್ಪಿಸಬೇಡಿ. ದೇವರಾಜ ಮಾರುಕಟ್ಟೆ ನಮ್ನ ವ್ಯಾಪ್ತಿಗೆ ಕೊಟ್ಟರೇ ನಾವೇ ಪುನಶ್ಚೇತನ ಮಾಡುತ್ತೇವೆಂಬ ಪ್ರಮೋದಾದೇವಿ ಒಡೆಯರ್ ಹೇಳಿಕೆ ವಿಚಾರ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅದನ್ನ ಅವರ ಬಳಿಯೇ ಕೇಳಿ. ನಾನು ಅದಕ್ಕೆ ಪ್ರತಿಕ್ರಿಯಿಸಲ್ಲ ಎಂದು ಯದುವೀರ್ ತಿಳಿಸಿದರು.
ರಾಜ್ಯದಲ್ಲಿ ಕೋಮುಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಯಿಕ್ರಿಯಿಸಿದ ಯದುವೀರ್ ಅವರು, ಎಲ್ಲರಿಗೂ ಕೈಮುಗಿದು ಬೇಡುತ್ತೇನೆ ಶಾಂತಿಯಿಂದ ಹೋಗಿ ಎಂದು ಮನವಿ ಮಾಡಿದರು.