ಬೆಂಗಳೂರು:
ದೇಶದ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಯ ಮೇಲೆ ಸೇನೆ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದೆ ಯುದ್ಧದ ಪರಿಸ್ಥಿತಿ ಬರಬಹುದು ಎಚ್ಚರದಿಂದ ಇರಿ.
ಇದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ರವಾನಿಸಿರುವ ಎಚ್ಚರಿಕೆ.ಈ ಹಿನ್ನೆಲೆಯಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಅದರಂತೆ ರಾಜ್ಯದಲ್ಲಿಯೂ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳನ್ನು ಹೇಗೆ ನಿರ್ವಹಿಸಬೇಕು? ಏನು ತಯಾರಿ ಮಾಡಿಕೊಳ್ಳಬೇಕು? ಆಹಾರ, ನೀರು ಕಾಯ್ದಿರಿಸುವುದು ಹೇಗೆ ಎಂಬ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ನೀಡಿದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಪರಿಸ್ಥಿತಿ ಹೇಗೆ ಬರುತ್ತದೆಯೆಂದು ಗೊತ್ತಿಲ್ಲ. ಆದರೆ, ನಾವಂತೂ ತಯಾರಿ ಮಾಡಿಕೊಳ್ಳಬೇಕಲ್ಲವೇ? ಪೊಲೀಸರಿಗೆ ರಜೆ ನೀಡುವುದಿಲ್ಲ. ಹೆಚ್ಚುವರಿ ರಜೆಗಳನ್ನು ಯಾರಿಗೂ ಕೊಡುವುದಿಲ್ಲ’ ಎಂದು ಹೇಳಿದರು
‘ಕಾನೂನು ಸುವ್ಯವಸ್ಥೆಗಿಂತ ಹೆಚ್ಚಾಗಿ ಇಡೀ ದೇಶದಲ್ಲಿ ಈಗ ಯುದ್ಧದ ಭೀತಿ ಇದೆ. ಸೂಕ್ಷ್ಮ ಸನ್ನಿವೇಶ ಯಾವಾಗ ಸಾಮಾನ್ಯ ಸ್ಥಿತಿಗೆ ಬರಬಹುದೆಂದು ಗೊತ್ತಿಲ್ಲ. ಅದನ್ನು ಕೇಂದ್ರ ಸರ್ಕಾರ ಹೇಳಲಿದೆ. ಅಲ್ಲಿಯವರೆಗೆ ನಾವು ಸಿದ್ಧವಾಗಿರಬೇಕು. ಕರಾವಳಿ ಭಾಗದಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತದೆ. ಮಂಗಳೂರು,ಉತ್ತರ ಕನ್ನಡದಲ್ಲಿ ಭದ್ರತೆ ಹೆಚ್ಚಿಸಲಾಗಿದೆ’ ಎಂದರು.