ಬೆಂಗಳೂರು,ಜ.14: ಕಳೆದ ಕೆಲವು ದಿನಗಳಿಂದ ರಾಜಕೀಯವಾಗಿ ನಿಷ್ಕ್ರಿಯರಾಗಿದ್ದ ಸಂಸದ ಅನಂತ ಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಇವರು ನೀಡುತ್ತಿರುವ ಹೇಳಿಕೆ ಇದೀಗ ಕಾಂಗ್ರೆಸ್ ನಾಯಕರನ್ನು ಕೆರಳುಸುತ್ತಿದೆ. ಇದರ ಬೆನ್ನಲ್ಲೇ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅನಂತ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಹೇಳಿಕೆ ನೀಡುವ ಜತೆಗೆ ಸಾಮಾಜಿಕ ಅಶಾಂತಿಗೆ ಕಾರಣವಾಗುವ ಮಾತುಗಳನ್ನಾಡಿರುವ ಹಿನ್ನೆಲೆಯಲ್ಲಿ ಸೆಕ್ಷನ್ 153ಎ, 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂಸದರು ಕುಮಟಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ದೇವಾಲಯಗಳಾಗಿದ್ದವು. ಅವುಗಳನ್ನು ಬಾಬ್ರಿ ಮಸೀದಿ ಮಾದರಿಯಲ್ಲಿ ಕೆಡವಬೇಕು' ಎಂದಿದ್ದರು ಈ ಹೇಳಿಕೆ ಆಕ್ಷೇಪಾರ್ಹವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ತಿಳಿಸಿದ್ದಾರೆ.
ಆಚಾರವಿಲ್ಲದ ನಾಲಿಗೆ:
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದು ನೀವು ಆಡಿರುವ ಈ ಮಾತಿನಿಂದ ಪ್ರತಿಬಿಂಬಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ ನಿಮ್ಮ ತಂದೆ -ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಇದೇನಾ? ಏನು ನಿಮ್ಮ ಆಚಾರ ವಿಚಾರ ,ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ದಾಸರ ವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ. ಮಾತು ಆಡಿದರೆ ಹೋಯಿತು ಮುತ್ತು ಉದುರಿದರೆ ಹೋಯ್ತು ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ ಆರೂವರೆ ಕೋಟಿ ಕನ್ನಡದ ಜನತೆಯ ಕುರಿತು ಆಡಿದ ಮಾತಾಗಿರುತ್ತದೆ ಅವರಿಗೆ ಮಾಡಿದ ಅಪಮಾನವಾಗುತ್ತದೆ ಎಂದು ಹೇಳಿದ್ದಾರೆ.
ಸಂಸದ ಹೆಗಡೆ ಅವರೇ ನೀವು ಆಡಿರುವ ಮಾತು ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇನೆ ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ ಈಗ ಇಂತಹ ಮಾತು ನಿಮಗೆ ಮರ್ಯಾದೆ ತರುವುದಿಲ್ಲ ಎಂದು ಕುಟುಕಿದ್ದಾರೆ.
ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರು ಮಾನ ಮರ್ಯಾದೆ, ಆಚಾರ-ವಿಚಾರ ಇದ್ದರೆ ಅನಂತ್ಕುಮಾರ್ ಹೆಗಡೆ ವಿರುದ್ಧ ಕ್ರಮ ಜರುಗಿಸಬೇಕು ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ನೀವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ ಆವೇಶದ ಮಾತುಗಳನ್ನಾಡಿದ್ದೀರಿ, ಬೇರೆಯವರಿಗೂ ಮಾತನಾಡಲು ಬರುತ್ತದೆ ಆದರೆ, ನಿಮ್ಮ ಮಟ್ಟಕ್ಕಿಳಿಯವುದು ಅನಾಗರಿಕತೆ ಆಗುತ್ತದೆ. ಜನ ದಡ್ಡರಲ್ಲ. ಈ ಬಾರಿ ನಿಮಗೆ ಪಾಠ ಕಲಿಸುತ್ತಾರೆ. ಶಾಶ್ವತವಾಗಿ ಅಡ್ರೆಸ್ ಇಲ್ಲದಂತೆ ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಅನಂತ್ಕುಮಾರ್ ಹೆಗಡೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.