ಬೆಂಗಳೂರು – ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂಗೌಡ ವಿರುದ್ಧ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿ ಯಾರು..?
ಕಳೆದೆರಡು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಷಯ ಇದಾಗಿದೆ. ಇದು ಕೇವಲ ರಾಜಕೀಯವಾಗಿ ಅಷ್ಟೇ ಅಲ್ಲ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.ಇದಕ್ಕೆ ಪ್ರಮುಖ ಕಾರಣ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನೇತೃತ್ವದ ಸರ್ಕಾರ ನಿಶ್ಚಿತ ಹಾಗೂ ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ.ಆದರೆ
ಇದರಲ್ಲಿ ತಮ್ಮ ಭದ್ರಕೋಟೆ ಹಾಸನದ ಅಭ್ಯರ್ಥಿ ಹೆಸರು ಪ್ರಕಟಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅವರು ಕೊಡುವ ಕಾರಣ ಜಿಲ್ಲಾ ಘಟಕದಲ್ಲಿ ಕೆಲವುವಗೊಂದಲಗಳಿವೆ.ಕುಟುಂಬದಲ್ಲೂ ಕೆಲವು ವಿಷಯ ಇತ್ಯರ್ಥವಾಗಬೇಕು ಎನ್ನುತ್ತಾರೆ.
ಅಂದಹಾಗೆಬಕಳೆದೊಂದು ದಶಕದವರಗೆ ತೆರೆಮರೆಯಲ್ಲಿ ರಾಜಕಾರಣ ಮಾಡುತ್ತಾ ತಮ್ಮ ಪತಿಗೆ ಬೆಂಗಾವಲಾಗಿ ನಿಂತಿದ್ದ ಭವಾನಿ ರೇವಣ್ಣ ರಾಜಕೀಯ ಪಟ್ಟುಗಳನ್ನು ಬಲ್ಲ ಚತುರೆ.ಎಚ್.ಡಿ.ರೇವಣ್ಣ ಅವರ ಯಶಸ್ಸಿನ ಗುಟ್ಟು ಭವಾನಿ ಎನ್ನುವುದು ಹಾಸನ ಜಿಲ್ಲೆ ಹಾಗೂ ಜೆಡಿಎಸ್ ನ ಒಳ ರಾಜಕಾರಣ ಬಲ್ಲ ಹಲವರಿಗೆ ಗೊತ್ತಿರುವ ಸಂಗತಿ.
ರಾಜಕಾರಣದಲ್ಲಿ ದೃಡ ನಿರ್ಧಾರಗಳ ಮೂಲಕ ಗುರುತಿಸಲ್ಪಡುವ ಭವಾನಿ ಅವರು ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಷಯದಲ್ಲೂ ತಮ್ಮದೆ ದೃಷ್ಟಿಕೋನ ಹೊಂದಿದ್ದಾರೆ ಇದರ ಪರಿಣಾಮವಾಗಿ
ಈ ಹಿಂದೆ ತಮ್ಮ ತವರೂರು ಮೈಸೂರಿನ ಕೆ.ಆರ್.ನಗರದಿಂದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದರು. ಆದರೆ ಆಗ ಜೆಡಿಎಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾ.ರಾ.ಮಹೇಶ್ ಅವರಿಗಾಗಿ ತಮ್ಮ ಆಶೆಯನ್ನು ಅದುಮಿಟ್ಡುಕೊಂಡರು.
ನಂತರದಲ್ಲಿ ಹಾಸನದಿಂದಲೇ ಕಣಕ್ಕಿಳಿಯಲು ಪ್ರಯತ್ನ ನಡೆಸಿದರೂ ಹಲವಾರು ಕಾರಣಗಳಿಂದ ಸಾಧ್ಯವಾಗದೆ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಿ ಯಶಸ್ಸು ಕಂಡರು.
ಜೆಡಿಎಸ್ ವಿದ್ಯಮಾನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅವರು ಕೇವಲ ತಮ್ಮ ಪತಿಗೆ ಮಾತ್ರ ಬೆಂಗಾವಲಾಗಿ ನಿಂತಿಲ್ಲ ಹಾಸನದ ಪಕ್ಷದ ವಿದ್ಯಮಾನಗಳ ಮೇಲೆ ತಮ್ಮದೆ ಹಿಡಿತ ಹೊಂದಿದ್ದು ಚಾಣಾಕ್ಷ ನಡೆಯ ಮೂಲಕ ಪಕ್ಷದ ಭದ್ರಕೋಟೆ ಅಲುಗಾಡದಂತೆ ನೋಡಿಕೊಂಡಿದ್ದಾರೆ.ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ಪಕ್ಷದ ತೀರ್ಮಾನಗಳ ಸಮಯದಲ್ಲಿ ತಮ್ಮ ಮಾವ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಚರ್ಚಿಸಿ ನೀಡುತ್ತಿದ್ದ ಸಲಹೆಗಳು ವಾಸ್ತವಕ್ಕೆ ಹತ್ತಿರವಷ್ಟೇ ಅಲ್ಲದೆ ಪರಿಣಾಮಕಾರಿಯಾಗಿಯೂ ಇರುತ್ತಿದ್ದವು.ಇದರಿಂದ ಅನೇಕ ಸಂದರ್ಭಗಳಲ್ಲಿ ದೇವೇಗೌಡರು ಇವರ ಸಲಹೆಗಾಗಿ ಕಾಯುತ್ತಿದ್ದರು.ಇದಿಷ್ಟೇ ಅಲ್ಲ ಕಾರ್ಯಕರ್ತರನ್ನು ಇವರು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿ ಅವರಲ್ಲಿ ಹೋರಾಟ ಮತ್ತು ಆತ್ಮ ಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಇವರನ್ನು ಭರವಸೆಯ ನಾಯಕಿ ಎಂದು ಪರಿಗಣಿಸುವಂತೆ ಮಾಡಿದೆ.
ಈ ವೇಳೆ ನಡೆದ ಹಲವಾರು ವಿದ್ಯಮಾನಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿದೆ.ಭವಾನಿ ರೇವಣ್ಣ ಅವರನ್ನು ಇದೇ ರೀತಿಯಲ್ಲಿ ಬಿಟ್ಟರೆ ಜೆಡಿಎಸ್ ನಲ್ಲಿ ಮತ್ತೊಂದು ಅಧಿಕಾರ ಕೇಂದ್ರ ಸೃಷ್ಟಿಯಾಗಲಿದೆ ಎಂದು ಭಾವಿಸಿದ ಅವರು ಭವಾನಿ ಅವರ ಓಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇದು ಈಗ ದೊಡ್ಡ ಗೌಡರ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿದೆ ಇದೀಗ ಟಿಕೆಟ್ ಗಾಗಿ ಕಾದಾಟ ತೀವ್ರಗೊಂಡಿದೆ. ಹಾಸನದಲ್ಲಿ ನಾನು ಸ್ಪರ್ಧಿಸಿಯೇ ಸಿದ್ಧ ಎಂದು ಭವಾನಿ ಅವರು ಹಠಕ್ಕೆ ಬಿದ್ದರೆ, ಅಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಲ್ಲ ಎಂದು ಕುಮಾರಸ್ವಾಮಿ ಜಿದ್ದಿಗೆ ಬಿದ್ದಿದ್ದಾರೆ. ಪರಿಣಾಮ ದಳಪತಿಗಳ ಕೋಟೆಯಲ್ಲಿ ಬಿರುಕು ಮೂಡಲು ಶುರುವಾಗಿದೆ.
ಕುಮಾರಸ್ವಾಮಿ ಈ ಕ್ಷೇತ್ರದಿಂದ ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಅವರ ಪುತ್ರ ಎಚ್.ಪಿ.ಸ್ವರೂಪ್ ಅವರನ್ನು ಕಣಕ್ಕಿಳಿಸಲು ಒಲವು ಹೊಂದಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲು ಸ್ವರೂಪ್ ಅವರಿಗೆ ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರ ಈ ನಿರ್ಧಾರದ ವಿರುದ್ಧ ರೇವಣ್ಣ ಅವರ ಕುಟುಂಬದ ಸದಸ್ಯರು ಸಿಡಿದೆದ್ದಿದ್ದಾರೆ.
ಈ ವಿಷಯವಾಗಿ ಮಾಜಿ ಪ್ರಧಾನಿ ದೇವೇಗೌಡ ಹಲವು ಸುತ್ತಿನಲ್ಲಿ ಸಂಧಾನ ನಡೆಸಿದರೂ ಬಿಕ್ಕಟ್ಟು ಶಮನಗೊಂಡಿಲ್ಲ.ಕುಮಾರಸ್ವಾಮಿ ತಾವು ಎಚ್.ಪಿ.ಸ್ವರೂಪ್ ಗೆ ಮಾತು ಕೊಟ್ಟಿದ್ದೇನೆ ಎಂದು ಪಟ್ಟು ಹಿಡಿದರೆ,ಇದರಲ್ಲಿ ರಾಜಿ ಇಲ್ಲ ಎಂದು ಭವಾನಿ ರೇವಣ್ಣ ತಿರುಗೇಟು ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಹೆಸರು ಮುನ್ನೆಲೆಗೆ ಬಂದಿದೆ.ಇವರು ರೇವಣ್ಣ ಅವರ ಆಪ್ತ ವಲಯಕ್ಕೆ ಸೇರಿದ್ದು,ಬಿಕ್ಕಟ್ಟಿಗೆ ಕಾರಣವಾದ ಇಲ್ಲಿ ಸ್ವರೂಪ್ ಅವರೂ ಬೇಡ,ಭವಾನಿ ರೇವಣ್ಣ ಅವರೂ ಬೇಡ ಎಂಬ ದಾಳ ಉರುಳಿಸಲಾಗಿದೆ.
ರಾಜೇಗೌಡ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಲು ಸ್ವತಃ ರೇವಣ್ಣ ಅವರೇ ಸೂಚಿಸಿದ್ದಾರೆ.
ನನಗೆ ಸವಾಲು ಹಾಕಿರುವ ಬಿಜೆಪಿ ಶಾಸಕರನ್ನು ಸೋಲಿಸುವುದೇ ನನ್ನ ಗುರಿ. ಹಾಗಾಗಿ ಎಲ್ಲರೂ ಇನ್ನೊಮ್ಮೆ ಚರ್ಚಿಸಿ ಸಿದ್ದರಾಗಿ. ರಾಜೇಗೌಡರ ಸ್ಪರ್ಧೆ ಬಗ್ಗೆ ಇನ್ನೊಮ್ಮೆ ದೇವೇಗೌಡರ ಬಳಿ ಮಾತನಾಡುತ್ತೇನೆ. ಸಮಯ ವ್ಯರ್ಥ ಮಾಡುವುದು ಬೇಡ. ಪ್ರಚಾರ ಶುರು ಮಾಡಿ’ ಎಂದು ರೇವಣ್ಣ ಹೇಳುವುದರೊಂದಿಗೆ ಇಡೀ ಬೆಳವಣಿಗೆ ಹೊಸ ತಿರುವು ಪಡೆದುಕೊಂಡಿದೆ.
ಹಾಸನ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಭವಾನಿ ರೇವಣ್ಣ ಅವರು ಈಗ ಮೌನವಾಗಿದ್ದರೂ ಪತಿ ರೇವಣ್ಣ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ. ಇತ್ತ ರೇವಣ್ಣ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ.ಭವಾನಿ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರು ಅಷ್ಟು ಸುಲಭವಾಗಿ ಪಟ್ಟು ಸಡಿಲಿಸುವರಲ್ಲ.ಹೀಗಾಗಿ ಅಂತಿಮ ಕ್ಷಣದವರೆಗೆ ಈ ಕ್ಷೇತ್ರ ಕುತೂಹಲ ಮೂಡಿಸಿದೆ.
Previous ArticleBJP ಸೇರಿದ ರೋಷನ್ ಬೇಗ್! #bjp #karnataka #congressparty #elections
Next Article ಉಮೇಶ್ ಕತ್ತಿ ಸೋದರನಿಗೆ Congress ಗಾಳ