ಕಲಬುರಗಿ, ಆ.5-
ಪೆಟ್ರೋಲ್,ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರದಿಂದ ಸಂತ್ರಸ್ತರಾಗಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಗೃಹಜ್ಯೋತಿ ಸಂಜೀವಿನಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಬಣ್ಣಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬಡವರಿಗೆ ಹಣ ಸಿಕ್ಕರೆ ಅದನ್ನು ಅವರು ಮನೆಯಲ್ಲಿಟ್ಟುಕೊಳ್ಳುವುದಿಲ್ಲ. ದೈನಂದಿನ ಅಗತ್ಯಗಳಿಗೆ ಬಳಕೆ ಮಾಡುತ್ತಾರೆ. ಇದರಿಂದ ಆರ್ಥಿಕಾಭಿವೃದ್ಧಿಯಾಗುತ್ತದೆ. ಗೃಹಜ್ಯೋತಿಯನ್ನು ಉಚಿತ ಕೊಡುಗೆ ಎನ್ನುವುದರ ಬದಲಾಗಿ ಆರ್ಥಿಕಾಭಿವೃದ್ಧಿಯ ಕಾರ್ಯಕ್ರಮ ಎಂದು ವಿಶ್ಲೇಷಿಸಬಹುದು ಎಂದರು.
ಈ ತಿಂಗಳ 27 ರ ಒಳಗೆ ನೋಂದಣಿ ಮಾಡಿಕೊಂಡವರಿಗೂ ಆಗಸ್ಟ್ ತಿಂಗಳ ವಿದ್ಯುತ್ ಬಳಕೆಯ ವಿನಾಯಿತಿ ಸೌಲಭ್ಯ ದೊರೆಯಲಿದೆ.
ಜುಲೈ 27 ರವರೆಗೆ ನೋಂದಣಿ ಮಾಡಿಕೊಂಡವರಿಗೆ ಸೌಲಭ್ಯ ದೊರಕುತ್ತಿದೆ. ನೋಂದಣಿಗೆ ಯಾವುದೇ ಕಾಲಮಿತಿಯಿಲ್ಲ. ಆದರೆ ಯಾವ ತಿಂಗಳಿನಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಆ ತಿಂಗಳಿನ ಸೌಲಭ್ಯ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಪಿತೂರಿ ಮಾಡಿ ಕಾಂಗ್ರೆಸ್ನಲ್ಲಿದ್ದ ವ್ಯಕ್ತಿಯನ್ನು ಸೆಳೆದುಕೊಂಡು ಚುನಾವಣೆಗೆ ನಿಲ್ಲಿಸಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡುತ್ತಾರೆ. ಕಲಬುರ್ಗಿಯನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನೆಯ ಪ್ರತಿಕೃತಿಯನ್ನು ಪ್ರದರ್ಶಿಸಿ ವಿದ್ಯುತ್ ದೀಪ ಹೊತ್ತಿಸಲಾಯಿತು. 10 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ಅನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಶರಣ್ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಶರಣ ಬಸಪ್ಪ ದರ್ಶನಾಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು