ನವದೆಹಲಿ – ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ ರಮಾನಂದ ಸಾಗರ್ ನಿರ್ಮಾಣದ ರಾಮಾಯಣ ಯಾರಿಗೆ ಗೊತ್ತಿಲ್ಲ ಹೇಳಿ. ಈ ಮೆಗಾ ಧಾರವಾಹಿಯ ರಾಮನ ಪಾತ್ರಧಾರಿ ಅರುಣ್ ಗೋವಿಲ್ (Arun Govil) ಅವರಂತೂ ಭಾರತದ ಎಲ್ಲಾ ಮನೆ ಮನೆಗೂ ಚಿರ ಪರಿಚಿತ.
ಸೌಮ್ಯ ವೇದನೆ, ತುಟಿಯ ಮೇಲೆ ಕಂಡು ಕಾಣದಿರುವ ಮುಗುಳ್ನಗೆ ಹೊಳಪುವ ಕಂಗಳ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಹುತೇಕರ ಪಾಲಿಗೆ ಮರ್ಯಾದ ಪುರುಷ ರಾಮ ಎಂದರೆ ಹೀಗೆ ಇದ್ದಿರಬಹುದು ಎಂದು ಅನ್ನಿಸುವಂತೆ ಅವರ ಪಾತ್ರ ಪೋಷಣೆ ಇತ್ತು.
ಇದೀಗ ಲೋಕಸಭೆ ಚುನಾವಣೆಯಲ್ಲಿ ರಾಮ ಮಂತ್ರ ಜಪಿಸುತ್ತಿರುವ ಬಿಜೆಪಿ ಪರದೆಯ ಮೇಲೆ ಕಾಣಿಸಿ ಹಲವರ ಮನಸೂರಗೊಂಡಿದ್ದ ರಾಮನ ಪಾತ್ರಧಾರಿಯನ್ನು ಚುನಾವಣಾ ಅಖಾಡಕ್ಕೆ ಎಳೆದು ತಂದಿದೆ.
ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿದೆ ಸತತ ಮೂರು ಅವಧಿಗೆ ಇಲ್ಲಿಂದ ಆಯ್ಕೆಯಾಗಿದ್ದ ಬಿಜೆಪಿ ನಾಯಕ ರಾಜೇಂದ್ರ ಅಗರ್ವಾಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಬ್ಬರಿಸಿದರೂ ಮೀರತ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ರಾಜೇಂದ್ರ ಅಗರ್ವಾಲ್ ಅತ್ಯಂತ ಪ್ರಯಾಸದ ಗೆಲುವು ಕಂಡಿದ್ದರು.
ಇಲ್ಲಿ ಅವರಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದ ಬಿಎಸ್ ಪಿ ಯ ಹಾಜಿ ಮೊಹಮ್ಮದ್ ಯಾಕೂಬ್ ಅವರು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದರು. ಹೀಗಾಗಿ ರಾಜೇಂದ್ರ ಅಗರ್ವಾಲ್ ಅವರು ಕೇವಲ ನಾಲ್ಕು ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸಿ ಈ ಕ್ಷೇತ್ರದಿಂದ ಹೊಸಬರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಸಿದ್ದತೆ ನಡೆಸಿದ್ದಾರೆ.
ಮೀರತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಾಹಿತಿ ಕುಮಾರ್ ವಿಶ್ವಾಸ್ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿರುವ ಕುಮಾರ್ ವಿಶ್ವಾಸ್ ತಮಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು ಆದರೆ ಸುತ್ತಿರುವ ಬಿಜೆಪಿ ರಾಮಾಯಣದ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿ ಅವರನ್ನು ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಪ್ರಚಾರಕ್ಕೆ ಬಳಸಿದರೆ ಅನುಕೂಲವಾಗಲಿದೆ ಎಂದು ಲೆಕ್ಕಾಚಾರ ಹಾಕಿ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ.