ಲಖನೌ: ಈ ಬಾರಿಯ ಲೋಕಸಭೆ ಚುನಾವಣೆ ಹಲವಾರು ವಿಚಾರಗಳಿಂದ ಗಮನ ಸೆಳೆಯುತ್ತಿದೆ. ರಾಜಕೀಯ ನಾಯಕರ ವಾಕ್ಸಮರ ಅಬ್ಬರದ ರೋಡ್ ಶೋಗಳು, ಬೃಹತ್ ಸಾರ್ವಜನಿಕ ಸಭೆಗಳು ಹೀಗೆ ಹಲವಾರು ಅಂಶಗಳು ಈ ಚುನಾವಣೆಯಲ್ಲಿ ಜನರನ್ನು ಸೆಳೆಯುತ್ತಿವೆ.
ದೇಶಭಕ್ತಿ, ಧಾರ್ಮಿಕ ವಿಚಾರಗಳು ,ಜಾತ್ಯಾತೀತ ಅಂಶಗಳು, ಸಾಮಾಜಿಕ ನ್ಯಾಯ ಹೀಗೆ ಹಲವಾರು ವಿಷಯಗಳು ಈ ಚುನಾವಣೆಯಲ್ಲಿ ಸಾರ್ವಜನಿಕ ವಲಯದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತವೆ ಅಭ್ಯರ್ಥಿಗಳು ಕೂಡ ವಿಭಿನ್ನ ರೀತಿಯ ಪ್ರಚಾರದ ಮೂಲಕ ಮತದಾರರ ಮನೆಗೆಲ್ಲಲು ಪ್ರಯತ್ನ ನಡೆಸಿದ್ದಾರೆ.
ಸಾಮಾನ್ಯವಾಗಿ ಯಾರನ್ನಾದರೂ ಬಯ್ಯುವಾಗ ಅಥವಾ ಟೀಕಿಸುವಾಗ ಚಪ್ಪಲಿ ಶಬ್ದ ಬಳಕೆ ಮಾಡುತ್ತಾರೆ. ಹೀಗಾಗಿ ಚಪ್ಪಲಿ ಎನ್ನುವುದು ಯಾರನ್ನಾದರೂ ಶಿಕ್ಷಿಸಲು ಅಥವಾ ಅವಮಾನಿಸಲು ಬಳಸುವ ವಿಷಯವಾಗಿದೆ.
ಕೆಲವು ಪ್ರತಿಭಟನೆಗಳ ಸಮಯದಲ್ಲಿ ಪ್ರತಿ ಕೃತಿಗಳಿಗೆ ಚಪ್ಪಲಿಗಳ ಹಾರವನ್ನು ಹಾಕುವುದನ್ನು ನಾವು ನೀವು ಆಗಾಗ್ಗೆ ನೋಡಿರಬಹುದು.
ಇಂತಹ ಚಪ್ಪಲಿ ಗುರುತು ಪಡೆದುಕೊಳ್ಳುವ ಮೂಲಕ ಅಲಿಗಢ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್ ಗಮನ ಸೆಳೆದಿದ್ದಾರೆ ಅಷ್ಟೇ ಅಲ್ಲ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರ ಮಾಡುವ ವೇಳೆ ಮತದಾರರ ಮನೆ ಬಾಗಿಲಿಗೆ ಚಪ್ಪಲಿ ಹಾರ ಧರಿಸಿ ಹೋಗುತ್ತಿದ್ದಾರೆ.
ಚಪ್ಪಲಿ ನಿಮ್ಮ ಪಾದಕ್ಕೆ ರಕ್ಷೆಯಾಗಿ ಕೆಲಸ ಮಾಡುತ್ತದೆ ಅದೇ ರೀತಿ ನನ್ನನ್ನು ಆಯ್ಕೆ ಮಾಡಿದಲ್ಲಿ ನಿಮ್ಮ ಪಾದದ ರಕ್ಷೆ ರೀತಿಯಲ್ಲಿ ಸೇವೆ ಮಾಡುತ್ತೇನೆ ತಪ್ಪಿದಲ್ಲಿ ನನಗೆ ಚಪ್ಪಲಿ ಹಾರ ಹಾಕಿ ಶಿಕ್ಷಿಸಬಹುದು ಎಂದು ಹೇಳುತ್ತಾ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಎಲ್ಲಾ ಕಡೆ ಅವರು ಹೂವಿನ ಹಾರದ ಬದಲು ಚಪ್ಪಲಿ ಹಾರ ಧರಿಸಿ ಮತಯಾಚಿಸುತ್ತಿರುವುದು ಜನರ ಗಮನ ಸೆಳೆಯುತ್ತಿದೆ.