2019ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಸುಮಾರು 40 ಮಂದಿ CRPF ಯೋಧರು ಸಾಯಲ್ಪಟ್ಟಿದ್ದರು. ಅವರು ಸಾಯಲು ಕೇಂದ್ರ ಸರ್ಕಾರದ ಬೇಜವಾಬ್ದಾರಿ ವರ್ತನೆಯ ಕಾರಣ ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಾಲಿಕ್ (Satyapal Malik) The Wireಗೆ ನೀಡಿದ ಸಂದರ್ಶನದಲ್ಲಿ ಸಂದರ್ಶಕ ಕರಣ್ ಥಾಪರ್ (Karan Thapar) ಅವರಿಗೆ ಹೇಳಿದ್ದಾರೆ.
ಜವಾನರು ಅಷ್ಟೊಂದು ಸಂಖ್ಯೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಈ ರೀತಿಯ ದಾಳಿಯಾಗುವ ಸಾಧ್ಯತೆ ಇದೆ ಎನ್ನುವುದರ ಬಗ್ಗೆ ಗುಪ್ತಚರ ಮಾಹಿತಿಯು ಸರ್ಕಾರಕ್ಕೆ ಇಲ್ಲದಿದ್ದದ್ದು ಬಹಳ ಆಶ್ಚರ್ಯಕರ ವಿಚಾರ, CRPF ಸರ್ಕಾರವನ್ನು ವಿಮಾನಗಳು ಬೇಕೆಂದು ಕೇಳಿದ್ದರೂ ಸರ್ಕಾರ ನೀಡದಿದ್ದಿದ್ದು ಆಶ್ಚರ್ಯಕರವಾಗಿದೆ. ಈ ವಿಚಾರದಲ್ಲಿ ಆಗ ರಾಜ್ಯಪಾಲರಾಗಿದ್ದ ತಮ್ಮನ್ನು ಯಾವುದೇ ರೀತಿಯಲ್ಲಿ ಯಾರೂ ಸಂಪರ್ಕಿಸಲಿಲ್ಲ ಮತ್ತು ತಮ್ಮ ಸಲಹೆಯನ್ನು ಪಡೆಯಲಿಲ್ಲ ಎಂದು ಮಾಲಿಕ್ ಹೇಳಿದ್ದಾರೆ.

ಉಗ್ರಗಾಮಿಗಳು RDX ಬಳಸಿ ಸ್ಪೋಟಿಸಿದಾಗ ಸ್ಫೋಟಿಸಲು ಬಳಸಿದ ಕಾರು ಆ ಸ್ಫೋಟಕಗಳನ್ನು ಹೊತ್ತುಕೊಂಡು ಅನೇಕ ದಿನಗಳಿಂದ ಆ ಪ್ರದೇಶದ ಊರುಗಳಲ್ಲಿ ಓಡಾಡುತ್ತಿತ್ತಂತೆ, ಆದರೂ ಕೂಡ ಗುಪ್ತಚರ ಇಲಾಖೆ ಆ ಮಾಹಿತಿಯನ್ನು ಪಡೆಯಲು ವಿಫಲವಾಯಿತು. ಅನೇಕ ತರುಣ ಯೋಧರು ಅನವಶ್ಯಕವಾಗಿ ಮರಣ ಹೊಂದಿದ್ದು ಅತ್ಯಂತ ದುಃಖಕರ ಸಂಗತಿ ಇದಕ್ಕೆ ಗೃಹ ಇಲಾಖೆ ಮತ್ತು ಕೇಂದ್ರ ಸರ್ಕಾರ ನೇರವಾಗಿ ಹೊಣೆ ಎಂದು ಸತ್ಯಪಾಲ್ ಮಾಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.
ದುರ್ಘಟನೆ ನಡೆದ ದಿನದಂದು ಪ್ರಧಾನಮಂತ್ರಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅವರು ‘ನೀವು ಸುಮ್ಮನಿರಿ’ ಎಂದು ಹೇಳಿದರು ಎಂದು ಮಾಲಿಕ್ ಹೇಳಿದ್ದಾರೆ. ಬಿಜೆಪಿ ಪುಲ್ವಾಮಾ ದಾಳಿಯನ್ನು ಬೇರೆಯೇ ರೀತಿಯಲ್ಲಿ ಬಳಸಿಕೊಂಡಿತು ಎಂದು ಹೇಳಿದ್ದಾರೆ. ಬೇರೆಯೇ ರೀತಿಯಲ್ಲಿ ಅಂದರೆ ಚುನಾವಣೆಯಲ್ಲಿ ಲಾಭ ಪಡೆಯಲು ಬಳಸಿಕೊಂಡಿತು ಎಂದು ಪರೋಕ್ಷವಾಗಿ ಮತ್ತೆ ಮತ್ತೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದಾರೆ.

ಸತ್ಯಪಾಲ್ ಮಾಲಿಕ್ ಅವರ ಈ ನುಡಿಗಳು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ದೇಶವನ್ನು ಮಾನಸಿಕವಾಗಿ ತಯಾರಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಬೇಜವಾಬ್ದಾರಿ ನಡವಳಿಕೆಯನ್ನು ಮುಚ್ಚಿಟ್ಟಿತು ಎಂದು ಮಾಲೀಕರು ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಸುತ್ತದೆ ಎಂದು ನೋಡಬೇಕಿದೆ.

